ಪುಣೆ: ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಉದ್ಯಮಿ ಕೇತನ್ ಅಗರ್ವಾಲ್ ಅವರನ್ನು ಕಂದಕಕ್ಕೆ ತಳ್ಳಿ ಕೊಲೆ ಮಾಡಿದ ಪ್ರಕರಣದ ತನಿಖೆಗೆ ಹೊಸ ತಿರುವು ಸಿಕ್ಕಿದೆ.
ಪೊಲೀಸ್ ಕಸ್ಟಡಿಯಲ್ಲಿರುವ ಪ್ರಮುಖ ಆರೋಪಿ ಸಿಯಾ ಗೋಯಲ್ ವಿಚಾರಣೆ ವೇಳೆ, "ನನಗೆ ಈ ಮದುವೆ ಬೇಡ ಎಂದು ಕೇತನ್ಗೆ ಹೇಳಿದ್ದೆ. ಆದರೆ, ಆತ ನಿಶ್ಚಿತಾರ್ಥ ಮುರಿಯಲು ಒಪ್ಪಲಿಲ್ಲ" ಎಂದು ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ, ಸಹ ಆರೋಪಿ ಹಾಗೂ ಸಿಯಾ ಗೋಯಲ್ ಅವರ ಪ್ರಿಯಕರ ಚೇತನ್ ಚೌಧರಿ ಬೇರೆ ರೀತಿಯ ಹೇಳಿಕೆ ನೀಡಿದ್ದು, ಕೊಲೆ ಮಾಡಲು ತನ್ನ ಮೇಲೆ ಒತ್ತಡ ಹೇರಿದ್ದು ಸಿಯಾ ಗೋಯಲ್ ಅವರೇ ಎಂದು ಆರೋಪಿಸಿದ್ದಾನ.
ಇಬ್ಬರೂ ವಿಚಾರಣೆ ವೇಳೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡುತ್ತಿದ್ದು, ಪ್ರಕರಣ ಮತ್ತಷ್ಟು ಕುತೂಹಲ ಕೆರಳಿಸಿದೆ.
ಪುಣೆ ಗ್ರಾಮಾಂತರ ಪೊಲೀಸರ ಪ್ರಕಾರ, ಇದೂವರೆಗಿನ ತನಿಖೆಯಲ್ಲಿ ಕೊಲೆಯ ಸಂಪೂರ್ಣ ಸಂಚನ್ನು ರೂಪಿಸಿದ್ದು ಸಿಯಾ ಗೋಯಲ್ ಎಂಬುದು ಪ್ರಾಥಮಿಕವಾಗಿ ಬೆಳಕಿಗೆ ಬಂದಿದೆ. ಮದುವೆಯನ್ನು ರದ್ದುಗೊಳಿಸಲು ಕೇತನ್ ಒಪ್ಪದಿದ್ದಾಗ, ಅವರನ್ನು ಕೊಲೆ ಮಾಡುವ ಯೋಜನೆಯನ್ನು ಚೇತನ್ ರೂಪಿಸಿದ್ದಾನೆ ಎಂದು ಸಿಯಾ ಹೇಳಿದ್ದರೆ, "ಕೊಲೆ ಮಾಡಲು ನನ್ನನ್ನು ಒತ್ತಾಯಿಸಿದ್ದು ಸಿಯಾ" ಎಂದು ಚೇತನ್ ಪ್ರತಿಕ್ರಿಯಿಸಿದ್ದಾನೆ.
25 ವರ್ಷದ ಕೇತನ್ ಅಗರ್ವಾಲ್ ರಿಯಲ್ ಎಸ್ಟೇಟ್ ಸಂಸ್ಥೆಯ ನಿರ್ದೇಶಕರಾಗಿದ್ದರು. ಅವರು ಲೋಹಗಢ ಕೋಟೆಯ ಕಂದಕಕ್ಕೆ ಬಿದ್ದು ಮೃತಪಟ್ಟಿದ್ದರು. ಆರಂಭದಲ್ಲಿ ಈ ಪ್ರಕರಣವನ್ನು ಆಕಸ್ಮಿಕ ಸಾವು ಎಂದು ದಾಖಲಿಸಲಾಗಿತ್ತು. ಆದರೆ. ತನಿಖೆಯಲ್ಲಿ ಇದು ಪೂರ್ವನಿಯೋಜಿತ ಕೊಲೆ ಎಂಬುದು ಬೆಳಕಿಗೆ ಬಂದ ಬಳಿಕ ಸಿಯಾ ಗೋಯಲ್ ಮತ್ತು ಚೇತನ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದರು.
ಪುಣೆ ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಅವರ ಪ್ರಕಾರ, ಕೇತನ್ ಅವರಿಗೆ ಟ್ರೆಕ್ಕಿಂಗ್ ಮಾಡುವ ಹವ್ಯಾಸವಿತ್ತು. ಮೇ 31ರಂದು ಸಿಯಾ ಗೋಯಲ್ ಅವರೊಂದಿಗೆ ಲೋಹಗಢ ಕೋಟೆಗೆ ತೆರಳಿದ್ದ ವೇಳೆ, 'ವಿಂಚು ಕಟಾ' ಸಮೀಪದ ಕಂದಕವನ್ನು ಕೊಲೆ ನಡೆಸಲು ಸೂಕ್ತ ಸ್ಥಳವೆಂದು ಗುರುತಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.
ಜೂನ್ 4ರಂದು ಕೂಡ ಸಿಯಾ ಕೇತನ್ ಅವರನ್ನು ಮತ್ತೆ ಲೋಹಗಢಕ್ಕೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದಳು. ಆದರೆ, ಕೇತನ್ ಅವರ ತಾಯಿ ವಿರೋಧ ವ್ಯಕ್ತಪಡಿಸಿದ್ದರಿಂದ ಆ ಪ್ರಯಾಣ ರದ್ದಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಜೂನ್ 14ರಂದು ಸಿಯಾ ಗೋಯಲ್ ಕೇತನ್ ಅವರನ್ನು ಕಂದಕಕ್ಕೆ ತಳ್ಳಲು ಮೊದಲ ಪ್ರಯತ್ನ ನಡೆಸಿದ್ದಳು. ಆದರೆ ಕೇತನ್ ಪೊದೆಯೊಂದನ್ನು ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದರು. ಬಳಿಕ ಅದೊಂದು ಆಕಸ್ಮಿಕ ಘಟನೆ ಎಂದು ನಂಬಿಸಿ, ಮತ್ತೆ ಅವರ ವಿಶ್ವಾಸ ಗಳಿಸಿದ್ದಳು.
ಇದಾದ ನಾಲ್ಕು ದಿನಗಳ ಬಳಿಕ, ಜೂನ್ 18ರಂದು ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಮತ್ತೊಮ್ಮೆ ಕೇತನ್ ಅವರನ್ನು ಲೋಹಗಢ ಕೋಟೆಗೆ ಕರೆದುಕೊಂಡು ಹೋಗಿ, ಸುಮಾರು 350 ಅಡಿ ಆಳದ ಕಂದಕಕ್ಕೆ ತಳ್ಳಿದ ಪರಿಣಾಮ ಅವರು ಮೃತಪಟ್ಟರು ಎಂದು ತನಿಖೆಯಿಂದ ತಿಳಿದುಬಂದಿದೆ.
ಕೊಲೆಗೆ ಮುನ್ನದ ಸಿದ್ಧತೆಯ ಭಾಗವಾಗಿ ಜೂನ್ 6ರಂದು ಕೇತನ್ ಅವರ ಪಾಸ್ಪೋರ್ಟ್ ಅನ್ನು ಸಿಯಾ ಗೋಯಲ್ ಎಸೆದುಬಿಟ್ಟಿದ್ದಾಳೆ ಎಂಬ ಆರೋಪವೂ ಕೇಳಿಬಂದಿದೆ.
ಇದೇ ವೇಳೆ, ಚೇತನ್ ಚೌಧರಿ ಅವರ ಅಂಗಡಿಯ ಉದ್ಯೋಗಿಯೊಬ್ಬರ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದು, ಜೂನ್ 18ರಂದು ಚೇತನ್ ತನ್ನ ಮೊಬೈಲ್ಫೋನ್ ಅನ್ನು ಅಂಗಡಿಯಲ್ಲೇ ಬಿಟ್ಟು, ಉದ್ಯೋಗಿಯ ಮೊಬೈಲ್ ತೆಗೆದುಕೊಂಡು ಲೋಹಗಢಕ್ಕೆ ತೆರಳಿದ್ದ ಎಂದು ಹೇಳಿದ್ದಾನೆ.
ಮೇ 31ರಿಂದ ಜೂನ್ 4ರ ನಡುವಿನ ಅವಧಿಯಲ್ಲಿ ಪುಣೆಯ ಕಫೆಯೊಂದರಲ್ಲಿ ಸಿಯಾ ಮತ್ತು ಚೇತನ್ ಹಲವು ಬಾರಿ ಭೇಟಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆ ಭೇಟಿಗಳ ಉದ್ದೇಶವೇನು ಎಂಬ ಬಗ್ಗೆ ಪೊಲೀಸರು ಇಬ್ಬರನ್ನೂ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಪ್ರಕರಣದ ಮುಂದಿನ ತನಿಖೆಯ ಭಾಗವಾಗಿ ಗುರುವಾರ ಪುಣೆ ಗ್ರಾಮಾಂತರ ಪೊಲೀಸರು ಸಿಯಾ ಗೋಯಲ್ ಅವರನ್ನು ಲೋಹಗಢ ಕೋಟೆಗೆ ಕರೆದೊಯ್ದು ಘಟನೆಯ ಮರುಸೃಷ್ಟಿ (Reconstruction) ನಡೆಸಿದರು. ವಿಧಿ ವಿಜ್ಞಾನ ತಜ್ಞರ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಹತ್ವದ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.