ಆಗ್ರಾ: ಆಗ್ರಾದ ಬಿಜೆಪಿ ಕಾರ್ಪೊರೇಟರ್ ಚರಂಡಿಯಲ್ಲಿ ನಿಂತು ಹುಟ್ಟುಹಬ್ಬದ ಕೇಕ್ ಕತ್ತರಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿರುವ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಈ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದ್ದು, ವಿಶ್ವಪ್ರಸಿದ್ಧ ತಾಜ್ ಮಹಲ್ ಇರುವ ಈ ನಗರವು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆದರೆ ಇದಕ್ಕೆ ತದ್ವಿರುದ್ಧ ಎಂಬಂತೆ ಇದೇ ಆಗ್ರಾದಲ್ಲಿ ಒಳಚರಂಡಿ ಸಮಸ್ಯೆ ಇಲ್ಲಿನ ನಾಗರೀಕರನ್ನು ಇನ್ನಿಲ್ಲದಂತೆ ಕಾಡುತ್ತಿದೆ.
ಈ ಸಮಸ್ಯೆಯಿಂದಾಗಿ ಬೇರೆ ಪಕ್ಷಗಳು ಮಾತ್ರವಲ್ಲ.. ಸ್ವತಃ ಆಡಳಿತಾ ರೂಢ ಬಿಜೆಪಿ ನಾಯಕರೇ ಬೇಸತ್ತು ಹೋಗಿದ್ದಾರೆ. ಎಷ್ಟೇ ಬಾರಿ ಈ ಕುರಿತು ಪಾಲಿಕೆಗೆ ಮನವಿ ಮಾಡಿದರೂ ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ.
ಹೀಗಾಗಿ ಬೇಸತ್ತ ಕೌನ್ಸಿಲರ್ ತನ್ನ ಜನ್ಮ ದಿನವನ್ನು ವಿನೂತನವಾಗಿ ಚರಂಡಿ ನೀರು ನಿಂತಿರುವ ರಸ್ತೆಯಲ್ಲೇ ಆಚರಿಸಿಕೊಂಡು ಪಾಲಿಕೆ ಅಧಿಕಾರಿಗಳಿಗೆ ಬಟ್ಟೆ ಸುತ್ತಿ ಹೊಡೆದಿದ್ದಾರೆ.
ಆಗಿದ್ದೇನು? ಯಾರು ಈ ಕೌನ್ಸಿಲರ್?
ಆಗ್ರಾದ ಬಿಜೆಪಿ ಕಾರ್ಪೊರೇಟರ್ ಕಿಶನ್ ನಾಯಕ್ ಈ ವಿನೂತನ ಪ್ರತಿಭಟನೆ ಮಾಡಿದ್ದು, ಸ್ವಚ್ಛವಾದ ಬಿಳಿ ಮೇಜು ಹೊದಿಕೆಯನ್ನು ಹೊದಿಸಿದ ವೃತ್ತಾಕಾರದ ಮೇಜಿನ ಮೇಲೆ ಕೇಕ್ ಇಡಲಾಗಿತ್ತು. ಆ ಮೇಜು ಕೊಳಕು ನೀರಿನಿಂದ ತುಂಬಿದ್ದ ಚರಂಡಿಯ ಮಧ್ಯದಲ್ಲಿ ಇರಿಸಲಾಗಿದ್ದು, ಅದರ ಸುತ್ತಲೂ ನಿಂತಿದ್ದ ಜನರು ಚಪ್ಪಾಳೆ ತಟ್ಟುತ್ತಾ ಸಾಂಕೇತಿಕವಾಗಿ ಸಂಭ್ರಮಾಚರಣೆ ನಡೆಸಿದರು.
ಆದರೆ ಇದು ಕೇವಲ ಹುಟ್ಟುಹಬ್ಬದ ಸಂಭ್ರಮವಲ್ಲ, ಸ್ಥಳೀಯ ಸಮಸ್ಯೆಗಳ ವಿರುದ್ಧದ ಪ್ರತಿಭಟನೆಯೂ ಆಗಿತ್ತು. "ಪಾರ್ಷದ್ ಜೀ ಜಿಂದಾಬಾದ್, ಜಿಂದಾಬಾದ್, ಜಿಂದಾಬಾದ್" ಎಂಬ ಘೋಷಣೆಗಳು ಮೊಳಗಿದವು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದು ಆಗ್ರಾದ ನಾಗ್ಲಾ ಧಾನಿ, ನ್ಯೂ ವಿಜಯ್ ನಗರ ಕಾಲೋನಿಯಲ್ಲಿ ಚಿತ್ರೀಕರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಘಟನೆಯ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಕಾರ್ಪೊರೇಟರ್ ಕಿಶನ್ ನಾಯಕ್ ಅವರ ಕುತ್ತಿಗೆಗೆ ಚೆಂಡು ಹೂವಿನ ಹಾರ ಹಾಕಿ, ಬಳಿಕ ಅವರ ತಲೆಗೆ ಗುಲಾಬಿ ಬಣ್ಣದ ಪೇಟಾ ಕಟ್ಟುತ್ತಿರುವುದು ಕಾಣಿಸುತ್ತದೆ. ಸುತ್ತಮುತ್ತ ನೆರೆದಿದ್ದವರು ಜೋರಾಗಿ ಚಪ್ಪಾಳೆ ತಟ್ಟಿ ಅವರನ್ನು ಅಭಿನಂದಿಸಿದರು.
ಮನವಿ ಕೊಟ್ಟು ಬೇಸತ್ತಿದ್ದ ಕೌನ್ಸಿಲರ್
ಕೌನ್ಸಿಲರ್ ಕಿಶನ್ ನಾಯಕ್ ಅವರು ಚರಂಡಿ ಸ್ವಚ್ಛಗೊಳಿಸುವಂತೆ 12 ಬಾರಿ ದೂರು ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನ ನಗರದಲ್ಲಿನ ಎಲ್ಲ ಚರಂಡಿಗಳ ಸ್ವಚ್ಛತಾ ಕಾರ್ಯ ಪೂರ್ಣಗೊಳ್ಳಲಿದೆ ಎಂದು ನಗರ ಪಾಲಿಕೆ ಹೇಳಿಕೊಂಡಿದ್ದರೂ, ಬಿಜೆಪಿ ಕಾರ್ಪೊರೇಟರ್ ಪ್ರತಿನಿಧಿಸುವ ವಾರ್ಡ್ನ ಚರಂಡಿ ಮಾತ್ರ ಸ್ವಚ್ಛಗೊಳಿಸಲ್ಪಟ್ಟಿರಲಿಲ್ಲ. ಇದರಿಂದ ಬೇಸತ್ತ ಅವರು ತಮ್ಮ ಹುಟ್ಟುಹಬ್ಬವನ್ನೇ ಚರಂಡಿಯಲ್ಲಿ ನಿಂತು ಆಚರಿಸುವ ಮೂಲಕ ಅಧಿಕಾರಿಗಳ ನಿರ್ಲಕ್ಷ್ಯವನ್ನು ಖಂಡಿಸಿದರು.
"ಪಾರ್ಷದ್ ಜೀ ಸಂಘರ್ಷ ಕರೋ, ಹಮ್ ತುಮ್ಹಾರೆ ಸಾಥ್ ಹೈಂ" (ಕಾರ್ಪೊರೇಟರ್ ಅವರೆ, ಹೋರಾಟ ಮುಂದುವರಿಸಿ; ನಾವು ನಿಮ್ಮೊಂದಿಗಿದ್ದೇವೆ) ಎಂಬ ಘೋಷಣೆಗಳೂ ಕೇಳಿಬಂದವು. ಈ ವೇಳೆ "ಜೈ ಭೀಮ್" ಘೋಷಣೆಗಳನ್ನೂ ಕೂಗಲಾಯಿತು. ನಂತರ ಕಾರ್ಪೊರೇಟರ್ ಕೇಕ್ ಕತ್ತರಿಸುತ್ತಿದ್ದಂತೆ ಜನರು ಜೋರಾಗಿ ಸಂಭ್ರಮಿಸಿದರು. ಚಪ್ಪಾಳೆಗಳ ಸದ್ದು ಮುಂದುವರಿಯುತ್ತಲೇ ಇತ್ತು.