ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಶನಿವಾರ ನಡೆದ ದುರಂತ ಘಟನೆಯೊಂದು ಕುಟುಂಬವನ್ನು ಶೋಕಕ್ಕೆ ತಳ್ಳಿದೆ. 24 ವರ್ಷದ ನವವಿವಾಹಿತ ವಧು ದೇವಸ್ಥಾನದ ಬಳಿ ಕೋತಿಗಳಿಗೆ ಹಣ್ಣು ತಿನ್ನಿಸುತ್ತಿದ್ದಾಗ ಕೋತಿಗಳ ಹಿಂಡು ಸುತ್ತುವರೆದಿದ್ದು ಇದರಿಂದ ಹೆದರಿದ ಆಕೆ ಕಾಲು ಜಾರಿ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾಳೆ.
ಮೃತ ಮಹಿಳೆಯನ್ನು ತೂತುಕುಡಿಯ ದಕ್ಷಿಣ ತಿಟ್ಟಂಕುಳಂ ನಿವಾಸಿ ಅನಿತಾ ಎಂದು ಗುರುತಿಸಲಾಗಿದೆ. ಕಳೆದ ತಿಂಗಳಷ್ಟೇ ಸುರೇಶ್ ಮತ್ತು ಅನಿತಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಸುರೇಶ್ ವಿದೇಶದಲ್ಲಿ ಕೆಲಸ ಮಾಡುತ್ತಿದ್ದು ಮದುವೆ ಹಿನ್ನಲೆ ಇತ್ತೀಚೆಗೆ ಮನೆಗೆ ಮರಳಿದ್ದರು. ಕಜುಗುಮಲೈನಲ್ಲಿರುವ ಕಲುಗಸಲಮೂರ್ತಿ ದೇವಸ್ಥಾನಕ್ಕೆ ಹೋಗಿದ್ದಾಗ ದಾರುಣ ಸಂಭವಿಸಿದೆ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ದಂಪತಿಗಳು ಬೆಟ್ಟದ ತುದಿಯಲ್ಲಿರುವ ಉಚಿಪ್ಪಿಲ್ಲಯಾರ್ ದೇವಸ್ಥಾನಕ್ಕೆ ಹೋಗಿದ್ದರು. ಅಲ್ಲಿ ಕೋತಿಗಳಿಗೆ ಹಣ್ಣು ತಿನ್ನಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಹಲವಾರು ಕೋತಿಗಳು ಅವರನ್ನು ಸುತ್ತುವರೆಯಿತು. ಕೋತಿಗಳನ್ನು ಕಂಡ ಅನಿತಾ ಭಯಭೀತಳಾಗಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲು ಜಾರಿ ಕೆಳಕ್ಕೆ ಬಿದ್ದಿದ್ದರು. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಭಯಭೀತರಾದ ಅನಿತಾ ಬೆಟ್ಟದ ಮೇಲಿನಿಂದ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದರು. ಪತ್ನಿಯ ಸಾವನ್ನ ಕಂಡು ಪತಿ ತೀವ್ರ ಆಘಾತಕ್ಕೊಳಗಾದರು. ಸ್ಥಳದ ಫೋಟೋಗಳಲ್ಲಿ ಸುರೇಶ್ ತನ್ನ ಪತ್ನಿಯ ದೇಹದ ಬಳಿ ಕುಳಿತು ರೋದಿಸುತ್ತಿರುವುದು ಕಂಡುಬಂದಿದೆ. ಕಜುಗುಮಲೈನ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಸಿಬ್ಬಂದಿ ಮತ್ತು ಸ್ಥಳೀಯ ಪೊಲೀಸರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.