ತಮಿಳುನಾಡು ಸರ್ಕಾರವು ‘ತಾಯಿಮಾಮನ್ ತಂಗ ಮೋಧಿರ ತಿಟ್ಟಂ’ (Thaaimaaman Thanga Mothira Thittam) ಯೋಜನೆ ಜಾರಿಗೆ ವಾರ್ಷಿಕ 755.83 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಈ ಯೋಜನೆಯಡಿ, ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ನವಜಾತ ಶಿಶುಗಳಿಗೆ, ತಮಿಳುನಾಡಿನ ಶಾಶ್ವತ ನಿವಾಸಿಗಳಾದ ಪೋಷಕರಿಗೆ ಒಂದು ಗ್ರಾಂ ಚಿನ್ನದ ಉಂಗುರ ನೀಡಲಾಗುತ್ತದೆ.
ಸರ್ಕಾರದ ಅಧಿಕೃತ ಪ್ರಕಟಣೆಯ ಪ್ರಕಾರ, ಮಾಜಿ ಮುಖ್ಯಮಂತ್ರಿ ಸಿ.ಎನ್. ಅಣ್ಣಾದುರೈ ಅವರ ಜನ್ಮದಿನವಾದ ಸೆಪ್ಟೆಂಬರ್ 15ರಂದು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ಈ ಯೋಜನೆಯು ಮುಖ್ಯಮಂತ್ರಿ ಸಿ ಜೋಸೆಫ್ ವಿಜಯ್ ಜನ್ಮದಿನವಾದ ಇದೇ ಜೂನ್ 22ರಿಂದ ಪೂರ್ವಾನ್ವಯವಾಗಿ ಜಾರಿಗೆ ಬರಲಿದೆ.
ಈ ಯೋಜನೆಯು ಟಿವಿಕೆ (TVK) ನೇತೃತ್ವದ ಸರ್ಕಾರದ ‘ವೆಟ್ರಿ ತಮಿಳಗಂ’ (Vetri Tamizhagam) ಪ್ರಣಾಳಿಕೆಯ ಪ್ರಮುಖ ಭಾಗವಾಗಿದೆ. ವಿಧಾನಸಭೆ ಚುನಾವಣೆಗೆ ಮುನ್ನ ವಿಜಯ್ ಈ ಯೋಜನೆಯನ್ನು ಜಾರಿಗೆ ತರುವುದಾಗಿ ಭರವಸೆ ನೀಡಿದ್ದರೂ, ಚಿನ್ನದ ಉಂಗುರದ ತೂಕವನ್ನು ಆಗ ನಿರ್ದಿಷ್ಟಪಡಿಸಿರಲಿಲ್ಲ.
ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸುವ ಪ್ರತಿಯೊಂದು ಶಿಶು ಮತ್ತು ಅದರ ತಾಯಿಯನ್ನು ಗೌರವಿಸುವುದೇ ಈ ಯೋಜನೆಯ ಮುಖ್ಯ ಉದ್ದೇಶ ಎಂದು ತಿಳಿಸಲಾಗಿದೆ. ತಮಿಳುನಾಡು ಸರ್ಕಾರವು ತಾಯಿ ಮತ್ತು ಮಕ್ಕಳ ಕಲ್ಯಾಣವನ್ನು ಸುಧಾರಿಸಲು ಹೆಚ್ಚಿನ ಆದ್ಯತೆ ನೀಡುತ್ತಿದೆ.
ಗರ್ಭಿಣಿಯರಿಗೆ ಆರ್ಥಿಕ ನೆರವು, ಉಚಿತ ಹೆರಿಗೆ ಮತ್ತು ನವಜಾತ ಶಿಶು ಆರೈಕೆ ಸೇವೆಗಳು, ತುರ್ತು ಪ್ರಸೂತಿ ಆರೈಕೆ, ಪೌಷ್ಟಿಕಾಂಶ ಕಾರ್ಯಕ್ರಮಗಳು, ಹೆರಿಗೆ ಯೋಜನಾ ಸೇವೆಗಳು ಹಾಗೂ ಗರ್ಭಿಣಿಯರು ಮತ್ತು ಮಕ್ಕಳ ಮೇಲ್ವಿಚಾರಣೆ ಹಾಗೂ ಮೌಲ್ಯಮಾಪನಕ್ಕಾಗಿ PICME (Pregnancy and Infant Cohort Monitoring and Evaluation) ಸಾಫ್ಟ್ವೇರ್ ಸೇರಿದಂತೆ ಹಲವು ಯೋಜನೆಗಳನ್ನು ಕಳೆದ ಹಲವು ವರ್ಷಗಳಿಂದ (ಹಿಂದಿನ ಡಿಎಂಕೆ ಮತ್ತು ಎಐಎಡಿಎಂಕೆ ಸರ್ಕಾರಗಳ ಅವಧಿಯಲ್ಲಿ) ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ.
ಈ ಎಲ್ಲಾ ಪ್ರಯತ್ನಗಳಿಂದ ರಾಜ್ಯದಲ್ಲಿ ತಾಯಿ ಮತ್ತು ಮಕ್ಕಳ ಆರೋಗ್ಯ ಸೂಚ್ಯಂಕಗಳಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ ಎಂದು ತಮಿಳು ನಾಡು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.