ಲಖನೌ: ರಾಮ ಮಂದಿರ ದೇಣಿಗೆ ದುರುಪಯೋಗ ಆರೋಪ ಎದುರಿಸುತ್ತಿರುವವರ ವರ ಪಾದ ಮಾಡಲು ಸ್ಥಳೀಯ ವಕೀಲರು ನಿರಾಕರಿಸಿದ್ದಾರೆ.
ಸ್ಥಳೀಯ ಕಾನೂನು ವೃತ್ತಿಪರರ ಪ್ರಕಾರ, ಅಯೋಧ್ಯೆ ರಾಮ ಮಂದಿರ ದೇಣಿಗೆ ಪ್ರಕರಣದ ಆರೋಪಿಗಳಿಗೆ ಅಯೋಧ್ಯೆಯಲ್ಲಿ ತಮ್ಮ ರಕ್ಷಣೆಗಾಗಿ ವಕೀಲರು ಸಿಗುವ ಸಾಧ್ಯತೆ ಕಡಿಮೆ ಇದೆ.
ಸೋಮವಾರ ನಡೆಯಲಿರುವ ಫೈಜಾಬಾದ್ ಬಾರ್ ಅಸೋಸಿಯೇಷನ್ನ ಸಾಮಾನ್ಯ ಸಭೆಯಲ್ಲಿ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ಸರ್ವಾನುಮತದ ನಿರಾಕರಣೆಯ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷೆ ಕಾಳಿಕಾ ಮಿಶ್ರಾ ಭಾನುವಾರ ತಿಳಿಸಿದ್ದಾರೆ.
2005 ರಲ್ಲಿ ರಾಮ ಮಂದಿರದ ಮೇಲೆ ನಡೆದ ಭಯೋತ್ಪಾದಕ ದಾಳಿಯ ಆರೋಪಿಗಳನ್ನು ಫೈಜಾಬಾದ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಅಯೋಧ್ಯೆಯ ವಕೀಲರು ಇದೇ ರೀತಿಯ ನಿರ್ಧಾರವನ್ನು ತೆಗೆದುಕೊಂಡಿದ್ದರು.
ದೇವಾಲಯದಲ್ಲಿ ಕಾಣಿಕೆಗಳ ಕಳ್ಳತನದ ಆರೋಪದ ಮೇಲೆ ಫೈಜಾಬಾದ್ ಬಾರ್ ಅಸೋಸಿಯೇಷನ್ನ ವಕೀಲರು ಕೋಪಗೊಂಡಿದ್ದಾರೆ ಮತ್ತು ಎಲ್ಲಾ ಎಂಟು ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ನಗರದ ವಕೀಲರು ತಿಳಿಸಿದ್ದಾರೆ.
"ದೇವಾಲಯದ ಕಾಣಿಕೆಗಳ ಕಳ್ಳತನದಿಂದ ನಮ್ಮ ಭಾವನೆಗಳಿಗೆ ನೋವುಂಟಾಗಿದೆ" ಎಂದು ಬಾರ್ ಅಸೋಸಿಯೇಷನ್ ಕಾರ್ಯದರ್ಶಿ ಶೈಲೇಂದ್ರ ಜೈಸ್ವಾಲ್ ಹೇಳಿದ್ದಾರೆ. ಬಂಧಿತ ಆರೋಪಿಗಳ ಪರವಾಗಿ ವಾದಿಸದಿರಲು ಫೈಜಾಬಾದ್ನ ವಕೀಲರು ಒಪ್ಪಿಕೊಂಡಿದ್ದಾರೆ. ಈ ವಿಷಯದಲ್ಲಿ, ಬಾರ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಬಾರ್ನ ಸಾಮಾನ್ಯ ಸಭೆ ನಿರ್ಧಾರ ತೆಗೆದುಕೊಳ್ಳುತ್ತದೆ. ಇದರ ನಂತರ, ಮುಂದಿನ ಕಾರ್ಯತಂತ್ರವನ್ನು ಸಿದ್ಧಪಡಿಸಲಾಗುತ್ತದೆ." ಎಂದು ತಿಳಿಸಿದ್ದಾರೆ.
ಪೊಲೀಸರು ಭಾರೀ ಭದ್ರತಾ ವ್ಯವಸ್ಥೆಗಳ ಅಡಿಯಲ್ಲಿ ಅಂತಹ ಸಾಮಾಜಿಕ ಅಪರಾಧಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಬಾರದಿತ್ತು ಎಂದು ವಕೀಲ ವಿವೇಕ್ ಕುಮಾರ್ ಸಿಂಗ್ ಟೀಕಿಸಿದರು. "ಪಶ್ಚಿಮ ಬಂಗಾಳದಂತೆ, ಅವರು ಮೊದಲು ಸಾರ್ವಜನಿಕರ ನಡುವೆ ಇರಬೇಕಿತ್ತು" ಎಂದು ಅವರು ಹೇಳಿದರು.
"ಕೆಲವು ಜನರ ಕೃತ್ಯದಿಂದಾಗಿ, ಅಯೋಧ್ಯೆಯ ನಿವಾಸಿಗಳು ಇಡೀ ಪ್ರಪಂಚದಾದ್ಯಂತ ಕೆಟ್ಟ ಹೆಸರು ಪಡೆದಿದ್ದಾರೆ. ಬುಲ್ಡೋಜರ್ ನೀತಿಯನ್ನು ಅಳವಡಿಸಿಕೊಳ್ಳುವ ಮೂಲಕ ಈ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು" ಎಂದು ಹಿರಿಯ ವಕೀಲ ರಾಜೇಂದ್ರ ಚೌಧರಿ ಆಗ್ರಹಿಸಿದ್ದಾರೆ.
ಇನ್ನು ರಾಮ ಮಂದಿರದಲ್ಲಿ ದೇಣಿಗೆಗಳ ದುರುಪಯೋಗದ ಆರೋಪದ ಮೇಲೆ ಬಂಧಿಸಲಾದ ಎಂಟು ಜನರ ನಿವಾಸಗಳ ಮೇಲೆ ಭಾನುವಾರ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ ಮ್ಯಾಜಿಸ್ಟ್ರೇಟ್ಗಳ ಜೊತೆಗೂಡಿ ಪೊಲೀಸ್ ತಂಡಗಳು ಲವಕುಶ್ ಮಿಶ್ರಾ, ಅವಿನಾಶ್ ಶುಕ್ಲಾ ಮತ್ತು ರಾಮಶಂಕರ್ ಯಾದವ್ ಸೇರಿದಂತೆ ಆರೋಪಿಗಳ ಮನೆಗಳಲ್ಲಿ ಶೋಧ ನಡೆಸಿವೆ ಎಂದು ಮೂಲಗಳು ತಿಳಿಸಿವೆ.
ಅಯೋಧ್ಯೆಯ ನ್ಯಾಯಾಲಯವು ಎಲ್ಲಾ ಎಂಟು ಆರೋಪಿಗಳನ್ನು ಜೂನ್ 29 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಎರಡು ದಿನಗಳ ನಂತರ ಈ ದಾಳಿ ನಡೆದಿದೆ. ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಪೊಲೀಸರು ಅವರ ಕಸ್ಟಡಿಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ.