ನವದೆಹಲಿ: ಜಾಗತಿಕ ಕಚ್ಚಾ ತೈಲ ದರಗಳು ಕುಸಿದಿದ್ದರೂ ಕೇಂದ್ರ ಸರ್ಕಾರ ಯಾಕೆ ಇಂಧನ ದರವನ್ನು ಇಳಿಸಿಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಜನರನ್ನು "ಲೂಟಿ" ಮತ್ತು "ಪಿಕ್ಪಾಕೆಟ್" ಮಾಡುತ್ತಿದೆ. ಸಾರ್ವಜನಿಕರಿಂದ ತೆರಿಗೆಯನ್ನು ಕಸಿದುಕೊಂಡು ತನ್ನ ಜೇಬನ್ನು ಭರ್ತಿ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರಕ್ಕೆ ಮೂರು ಪ್ರಶ್ನೆಗಳನ್ನು ಕೇಳಿದ ಕಾಂಗ್ರೆಸ್ ಮುಖ್ಯಸ್ಥರು, ಪಶ್ಚಿಮ ಏಷ್ಯಾದಲ್ಲಿ ಯುದ್ಧ ಉತ್ತುಂಗದಲ್ಲಿದ್ದಾಗ ಒಂದು ಬ್ಯಾರೆಲ್ ಕಚ್ಚಾ ತೈಲ ಬೆಲೆ $138 ರಷ್ಟಿತ್ತು. ಆಗ, ಪೆಟ್ರೋಲ್ ಮತ್ತು ಡೀಸೆಲ್ ದರವು ಪ್ರತಿ ಲೀಟರ್ಗೆ ಕ್ರಮವಾಗಿ ₹94.77 ಮತ್ತು ₹87.67 ರಷ್ಟಿತ್ತು. ಸದ್ಯ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 70.71 ಡಾಲರ್ ಗೆ ಇಳಿಕೆಯಾಗಿದೆ.
ಆದರೂ ಮೋದಿ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಕ್ರಮವಾಗಿ ರೂ. 102. 12 ಮತ್ತು 95. 20 ಕ್ಕೆ ಮಾರಾಟ ಮಾಡುತ್ತಿರುವುದು ಯಾಕೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಪ್ರಶ್ನಿಸಿದ್ದಾರೆ.
ಗೃಹ ಉಪಯೋಗಿ ಸಿಲಿಂಡರ್ಗಳು, ವಲಸಿಗರಿಗೆ ಉಪಯುಕ್ತವಾದ 5 ಕೆಜಿ ಸಣ್ಣ ಸಿಲಿಂಡರ್ಗಳು ಮತ್ತು CNG - ಎಲ್ಲವನ್ನೂ ಹೆಚ್ಚಿಸಲಾಗಿದೆ. ಈಗ ಪರಿಸ್ಥಿತಿಗಳು ಸಾಮಾನ್ಯವಾಗಿದೆ, ಬೆಲೆಗಳನ್ನು ಕಡಿತಗೊಳಿಸುವ ವಿಷಯಕ್ಕೆ ಬಂದಾಗ ಮೋದಿ ಸರ್ಕಾರದ ಕೈಗಳು ಏಕೆ ನಡುಗುತ್ತಿವೆ ಎಂದು ಖರ್ಗೆ ಕೇಳಿದ್ದಾರೆ.
ಕಚ್ಚಾ ತೈಲ ಬೆಲೆ ದುಬಾರಿಯಾಗಿದ್ದಾಗ ಸಾರ್ವಜನಿಕರು ತೊಂದರೆ ಅನುಭವಿಸಿದರು. ಈಗ ಕಚ್ಚಾ ತೈಲ ಅಗ್ಗವಾಗಿದೆ, ಸಾರ್ವಜನಿಕರು ಇನ್ನೂ ಏಕೆ ಹೊರೆಯನ್ನು ಹೊರುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಜಾಗತಿಕವಾಗಿ ತೈಲ ಬೆಲೆಗಳು ಇಳಿದ ನಂತರವೂ NDA ಸರ್ಕಾರ ಇಂಧನ ಬೆಲೆಯನ್ನು ಕಡಿಮೆ ಮಾಡುತ್ತಿಲ್ಲ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ಪೆಟ್ರೋಲ್, ಡೀಸೆಲ್ ಮತ್ತು LPG ಮೇಲಿನ ಹೆಚ್ಚಿನ ತೆರಿಗೆಗಳ ಮೂಲಕ ಬಿಜೆಪಿ ಸಾರ್ವಜನಿಕರನ್ನು "ಲೂಟಿ" ಮಾಡುತ್ತಿದೆ ಎಂದು ವಿರೋಧ ಪಕ್ಷ ಆರೋಪಿಸಿದೆ.