ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚಿನ ಇಸ್ರೇಲ್ ಭೇಟಿ ಕೈಗೊಂಡಿದ್ದರು. ಇದಾದ ಎರಡೇ ದಿನದಲ್ಲಿ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿರುವುದರ ಹಿನ್ನೆಲೆಯಲ್ಲಿ ಪ್ರಧಾನಿ ವಿರುದ್ಧ ವಿಪಕ್ಷಗಳು ತೀವ್ರ ಟೀಕಾ ಪ್ರಹಾರ ನಡೆಸಿವೆ.
ಮೋದಿ ಅವರ ಭೇಟಿ ನಾಚಿನಗೇಡಿತನದು. ಅಂತಾರಾಷ್ಟ್ರೀಯ ಸಂಘರ್ಷ ವಿಚಾರಗಳಲ್ಲಿ ಐತಿಹಾಸಿಕ ಬದ್ಧತೆ ಹೊಂದಿರುವ ಭಾರತ, ಮಿಲಿಟರಿ ಸಂಘರ್ಷಕ್ಕೆ ರಾಜಕೀಯವಾಗಿ ಒಪ್ಪಿಗೆ ನೀಡಿತ್ತೆ ಎಂಬ ಅನುಮಾನಕ್ಕೆ ಕಾರಣವಾಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
ತೀವ್ರತರವಾದ ಉದ್ವಿಗ್ನತೆ, ಹಗೆತನ ಮತ್ತು ಪಶ್ಚಿಮ ಏಷ್ಯಾ ಪ್ರದೇಶದಲ್ಲಿ ವ್ಯಾಪಕ ಘರ್ಷಣೆಯ ಸ್ಪಷ್ಟ ಅಪಾಯದ ಸಂದರ್ಭದಲ್ಲಿ ಫೆಬ್ರವರಿ 25 ರಿಂದ 26ರವರೆಗೂ ಇಸ್ರೇಲ್ ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದರ ಬಗ್ಗೆ ಕಾಂಗ್ರೆಸ್ ತೀವ್ರ ಕಳವಳಗೊಂಡಿದೆ ಎಂದು ಕಾಂಗ್ರೆಸ್ ವಿದೇಶಾಂಗ ವ್ಯವಹಾರಗಳ ವಿಭಾಗದ ಅಧ್ಯಕ್ಷ ಸಲ್ಮಾನ್ ಖುರ್ಷಿದ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಸ್ರೇಲ್ ದಾಳಿಯನ್ನು ಪ್ರಾರಂಭಿಸಿದ ನಂತರ ಅಮೆರಿಕ ಇರಾನ್ನಲ್ಲಿ ಪ್ರಮುಖ ಯುದ್ಧ ಕಾರ್ಯಾಚರಣೆ ಪ್ರಾರಂಭಿಸಿದೆ ಎಂದು ಡೊನಾಲ್ಡ್ ಟ್ರಂಪ್ ಶನಿವಾರ ಹೇಳಿದ್ದರು.
ಮೋದಿ ಇಸ್ರೇಲ್ ಭೇಟಿಯನ್ನು ಮುಗಿಸಿದ ಎರಡು ದಿನಗಳ ನಂತರ, ಇಸ್ರೇಲ್ ಮತ್ತು ಯುಎಸ್ ಇರಾನ್ ಮೇಲೆ ತಮ್ಮ ಜಂಟಿ ದಾಳಿ ನಡೆಸಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಅವರ ಸೇನಾ ಬಲವರ್ಧನೆಯಿಂದ ಇದನ್ನು ಸಂಪೂರ್ಣವಾಗಿ ನಿರೀಕ್ಷಿಸಲಾಗಿತ್ತು. ಆದರೂ ಇಸ್ರೇಲ್ ಗೆ ತೆರಳಿದ ಮೋದಿ, ಅಲ್ಲಿ ಅತ್ಯುನ್ನತ ನೈತಿಕ ಹೇಡಿತನ ಪ್ರದರ್ಶಿಸಿದರು. ಅಲ್ಲದೇ ಭಾರತ ಇಸ್ರೇಲ್ ನೊಂದಿಗೆ ನಿಂತಿದೆ ಎಂದು ಹೇಳಿದರು. ಈ ಇಸ್ರೇಲ್ ಭೇಟಿಯು ನಾಚಿಕೆಗೇಡಿನದ್ದಾಗಿದೆ ಎಂದು ಕಾಂಗ್ರೆಸ್ ಸಂವಹನ ವಿಭಾಗದ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಮೋದಿ ಇಸ್ರೇಲ್ ಭೇಟಿ ಬಗ್ಗೆ ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಕೂಡಾ ಕಿಡಿಕಾರಿದ್ದಾರೆ. ಮೋದಿ ಅವರ ಭೇಟಿಯನ್ನು ಇಸ್ರೇಲ್ ಲಾಭವನ್ನಾಗಿ ಮಾಡಿಕೊಂಡಿದೆ. ಇರಾನ್ ಮೇಲೆ ಯುದ್ಧದ ಯೋಜನೆ ಕುರಿತು ಬೆಂಜಮಿನ್ ನೆತನ್ಯಾಹು ಮಾಹಿತಿ ನೀಡಿದ್ರೆ ಎಂಬುದನ್ನು ಮೋದಿ ಅವರು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಒಂದು ವೇಳೆ ನೆತನ್ಯಾಹು ತಿಳಿಸಿದ್ದರೆ ಮೋದಿ ಭೇಟಿಯನ್ನು ಮೊಟಕುಗೊಳಿಸಿ ಭಾರತಕ್ಕೆ ಮರಳಬೇಕಿತ್ತು. ಇಲ್ಲದಿದ್ದರೆ, ಅದು ಭಾರತದ ಜನರಿಗೆ ಮಾಡಿದ ದ್ರೋಹವಾಗುತ್ತದೆ ಎಂದು ಅವರು ಹೇಳಿದ್ದಾರೆ. ಮೋದಿ ಅವರ ಇಸ್ರೇಲ್ ಭೇಟಿಯಿಂದ ಏನು ಪ್ರಯೋಜನವಾಗಿದೆ ಎಂದು ಓವೈಸಿ ಪ್ರಶ್ನಿಸಿದ್ದಾರೆ.