ಇರಾನ್ ವಿರುದ್ಧ ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸುತ್ತಿರುವ ದಾಳಿ ಮಧ್ಯೆ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು, ಇರಾನ್ನ ಪರಮೋಚ್ಛ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಗೆ ಭಾರತದ ಮೌನ ತಟಸ್ಥ ನಿಲುವಲ್ಲ, ಅದು ಹೊಣೆಗಾರಿಕೆಯಿಂದ ಹಿಂದೆ ಸರಿಯುವ ಮನಸ್ಥಿತಿಯಾಗಿದೆ ಎಂದು ಹೇಳಿದ್ದಾರೆ.
ಇದು ಭಾರತದ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆ ಕುರಿತು ಗಂಭೀರ ಸಂದೇಹವನ್ನು ಹುಟ್ಟುಹಾಕುತ್ತದೆ ಎಂದಿದ್ದಾರೆ. ಬಜೆಟ್ ಅಧಿವೇಶನದ ಎರಡನೇ ಭಾಗಕ್ಕಾಗಿ ಸಂಸತ್ತು ಅಧಿವೇಶನ ಈ ತಿಂಗಳು ಮತ್ತೆ ನಡೆಯಲಿದ್ದು, ಅಂತಾರಾಷ್ಟ್ರೀಯ ವ್ಯವಸ್ಥೆಯ ಕುಸಿತದ ಬಗ್ಗೆ ಸರ್ಕಾರದ ಕಳವಳಕಾರ ಮೌನವನ್ನು ಮುಕ್ತವಾಗಿ ಚರ್ಚಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಪ್ರಮುಖ ಪತ್ರಿಕೆಯೊಂದರಲ್ಲಿ ಪ್ರಕಟವಾದ ತಮ್ಮ ಲೇಖನದಲ್ಲಿ, ನಾವು ನಮ್ಮ ನೈತಿಕ ಶಕ್ತಿಯನ್ನು ಮರುಅನ್ವೇಷಿಸಿ, ಅದನ್ನು ಸ್ಪಷ್ಟತೆ ಮತ್ತು ಬದ್ಧತೆಯೊಂದಿಗೆ ವ್ಯಕ್ತಪಡಿಸುವ ಅಗತ್ಯವಿದೆ ಎಂದು ಬರೆದಿದ್ದಾರೆ.
ಮಾರ್ಚ್ 1ರಂದು, ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನ ಪರಮೋನ್ನತ ನಾಯಕ ಆಯತೊಲ್ಲಾ ಖಮೇನಿ ಹತ್ಯೆಯಾಗಿರುವುದನ್ನು ಇರಾನ್ ದೃಢಪಡಿಸಿದೆ. ಈಗ ನಡೆಯುತ್ತಿರುವ ಮಾತುಕತೆಗಳ ಮಧ್ಯೆ ಅಧಿಕಾರದಲ್ಲಿದ್ದ ರಾಷ್ಟ್ರನಾಯಕರ ಹತ್ಯೆ ಸಮಕಾಲೀನ ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಗಂಭೀರ ಭಂಗವನ್ನು ಸೂಚಿಸುತ್ತದೆ ಎಂದು ಅವರು ಹೇಳಿದರು.
ಈ ಘಟನೆಯ ಆಘಾತದ ಹೊರತಾಗಿಯೂ, ಭಾರತದ ಮೌನ ಅಚ್ಚರಿಯನ್ನುಂಟುಮಾಡುತ್ತಿದೆ. ಕೇಂದ್ರ ಸರ್ಕಾರ ಇರಾನ್ ನಾಯಕನ ಹತ್ಯೆಯನ್ನು ಅಥವಾ ಇರಾನ್ನ ಸಾರ್ವಭೌಮತ್ವದ ಉಲ್ಲಂಘನೆಯನ್ನು ಖಂಡಿಸುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾರೆ.
ಆರಂಭದಲ್ಲಿ, ಅಮೆರಿಕ–ಇಸ್ರೇಲ್ ದಾಳಿಯನ್ನು ನಿರ್ಲಕ್ಷಿಸಿ, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುಎಇ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯನ್ನು ಮಾತ್ರ ಖಂಡಿಸಿದರು; ಅದರ ಹಿಂದೆ ನಡೆದ ಘಟನೆಗಳನ್ನು ಉಲ್ಲೇಖಿಸಲಿಲ್ಲ. ನಂತರ ರಾಜತಾಂತ್ರಿಕತೆ ಕುರಿತು ಮಾತನಾಡಿದರು. ರಾಜತಾಂತ್ರಿಕ ಪ್ರಕ್ರಿಯೆಯೇ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಪ್ರಚೋದನೆಯಿಲ್ಲದ ದಾಳಿಗೆ ಮುನ್ನ ನಡೆಯುತ್ತಿತ್ತು ಎಂದು ರಾಹುಲ್ ಗಾಂಧಿ ಹೇಳಿದರು.
ವಿದೇಶಿ ರಾಷ್ಟ್ರನಾಯಕನ ಹತ್ಯೆ ಕುರಿತು ನಮ್ಮ ದೇಶದಿಂದ ಸಾರ್ವಭೌಮತ್ವ ಅಥವಾ ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ರಕ್ಷಣೆಯಿಲ್ಲದಿದ್ದರೆ ಮತ್ತು ನಿಷ್ಪಕ್ಷಪಾತ ತೋರಿಸದಿದ್ದರೆ ಅದು ನಮ್ಮ ವಿದೇಶಾಂಗ ನೀತಿಯ ದಿಕ್ಕು ಮತ್ತು ವಿಶ್ವಾಸಾರ್ಹತೆ ಬಗ್ಗೆ ಗಂಭೀರ ಅನುಮಾನ ಹುಟ್ಟಿಸುತ್ತದೆ ಎಂದು ಅವರು ತಮ್ಮ ಲೇಖನದಲ್ಲಿ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮೌನ ತಟಸ್ಥ ನಿಲುವಲ್ಲ ಎಂದು ಸೋನಿಯಾ ಗಾಂಧಿ ಟೀಕಿಸಿದ್ದಾರೆ.
ವಿಶ್ವಸಂಸ್ಥೆಯ ಸಂವಿಧಾನದ ವಿಧಿ 2(4) ಪ್ರಕಾರ, ಯಾವುದೇ ರಾಷ್ಟ್ರದ ಭೌಗೋಳಿಕ ಸಮಗ್ರತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲಪ್ರಯೋಗ ಅಥವಾ ಬೆದರಿಕೆಯನ್ನು ನಿಷೇಧಿಸಲಾಗಿದೆ. ಅಧಿಕಾರದಲ್ಲಿರುವ ರಾಷ್ಟ್ರನಾಯಕನ ಹತ್ಯೆ ಈ ಮೂಲಭೂತ ತತ್ವಗಳ ಹೃದಯಭಾಗವನ್ನೇ ಹೊಡೆಯುತ್ತದೆ ಎಂದು ಹೇಳಿದ್ದಾರೆ.