ಚೆನ್ನೈ: ಭಾರತದಲ್ಲಿ ಈ ವರ್ಷ ಮೂರು ಹೆಚ್ಚುವರಿ ಸ್ವದೇಶಿಯ ಸೆಮಿ ಕಂಡಕ್ಟರ್ ಘಟಕಗಳನ್ನು ಆರಂಭಿಸಲು ಯೋಜಿಸಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MEITY) ಕಾರ್ಯದರ್ಶಿ ಎಸ್ ಕೃಷ್ಣನ್ ಸೋಮವಾರ ತಿಳಿಸಿದ್ದಾರೆ.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ 14ನೇ ಆವೃತ್ತಿಯ ಥಿಂಕ್ಎಡು ಕಾನ್ಕ್ಲೇವ್ 2026ರಲ್ಲಿ ಮಾತನಾಡಿದ ಅವರು, ಈ ಯೋಜನೆಗಳು ದೇಶದ ನವೀನ ಉತ್ಪಾದನಾ ನೆಲೆಯನ್ನು ವಿಸ್ತರಿಸುತ್ತವೆ ಎಂದು ಹೇಳಿದರು.
ಲೇಖಕ ಶಂಕರ್ ಅಯ್ಯರ್ ಅವರೊಂದಿಗೆ 'ಪರಿವರ್ತನೆಗಾಗಿ ತಂತ್ರಜ್ಞಾನ-ಭಾರತದ ಸೆಮಿಕಂಡಕ್ಟರ್ ಕ್ರಾಂತಿ (Technology for Transition- India's semiconductor revolution) ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ಸೆಮಿಕಂಡಕ್ಟರ್ ಉತ್ಪಾದನೆಯು ಬಹು ಹಂತದ ಪ್ರಕ್ರಿಯೆಯಾಗಿರುತ್ತದೆ. ನಂತರ ಜೋಡಣೆ, ಪ್ಯಾಕೇಜಿಂಗ್ ಮತ್ತು ಪರೀಕ್ಷೆಯನ್ನು ಒಳಗೊಂಡಿರುತ್ತದೆ ಎಂದು ಹೇಳಿದರು.
ಇಂಡಿಯಾ ಸೆಮಿಕಂಡಕ್ಟರ್ ಮಿಷನ್ ಅಡಿಯಲ್ಲಿ ಭಾರತದ ಮೊದಲ ಸೆಮಿಕಂಡಕ್ಟರ್ ಫ್ಯಾಬ್ ಪ್ರಾಜೆಕ್ಟ್ ಅನ್ನು ಗುಜರಾತ್ನಲ್ಲಿ ಟಾಟಾ ಗ್ರೂಪ್ ಅಭಿವೃದ್ಧಿಪಡಿಸುತ್ತಿದೆ. ಜಪಾನ್ ಸೇರಿದಂತೆ ಜಾಗತಿಕ ತಯಾರಕರು ಅತ್ಯಾಧುನಿಕ 2-ನ್ಯಾನೊಮೀಟರ್ ತಂತ್ರಜ್ಞಾನದತ್ತ ಸಾಗುತ್ತಿದ್ದಾಗ ಇಂಟೆಲ್ನಂತಹ ಕೆಲವು ಉದ್ದಿಮೆದಾರರಿಗೆ ಇನ್ನೂ ವಾಣಿಜ್ಯತ್ಮಕವಾಗಿ ಸವಾಲಾಗಿದೆ. ಅಂತಹ ಚಿಪ್ಗಳನ್ನು ಉತ್ಪಾದಿಸಲು ದುಬಾರಿಯಾಗಿದೆ. ಭಾರತವು ಇದಕ್ಕೆ ವ್ಯತಿರಿಕ್ತವಾಗಿ ಆಟೋಮೊಬೈಲ್ಗಳು, ಕೈಗಾರಿಕಾ ಉಪಕರಣಗಳು ಮತ್ತು ಗ್ರಾಹಕ ಎಲೆಕ್ಟ್ರಾನಿಕ್ಸ್ಗಳಲ್ಲಿ ವ್ಯಾಪಕವಾಗಿ ಬಳಸಲ್ಪಡುತ್ತಿರುವ ಲೆಗಸಿ ಸೆಮಿಕಂಡಕ್ಟರ್ಗಳ ಮೇಲೆ ಗಮನ ಕೇಂದ್ರೀಕರಿಸುತ್ತಿದೆ ಎಂದು ಅವರು ತಿಳಿಸಿದರು.
ಚಿಪ್ ವಿನ್ಯಾಸದ ಕುರಿತು ಮಾತನಾಡಿದ ಕೃಷ್ಣನ್, ಪ್ರಪಂಚದ ಸುಮಾರು ಶೇ. 20 ರಷ್ಟು ಸೆಮಿಕಂಡಕ್ಟರ್ ಎಂಜಿನಿಯರ್ಗಳು ಭಾರತೀಯರಾಗಿದ್ದಾರೆ. ಚೆನ್ನೈ, ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಅಭಿವೃದ್ಧಿ ಕೇಂದ್ರಗಳು ಬರಲಿವೆ ಎಂದು ಅವರು ಹೇಳಿದರು. ಸೆಮಿ ಕಂಡಕ್ಟರ್ ಗಳನ್ನು ಹೆಚ್ಚಾಗಿ ವ್ಯಾಪಾರ ಮಾಡಬಹುದಾದ ಸರಕುಗಳಾಗಿ ನೋಡಲಾಗಿದ್ದರೂ, ಕೋವಿಡ್ ನಂತರದ ಅವಧಿಯಯಲ್ಲಿ ಸ್ವಾವಲಂಬನೆಯತ್ತ ಗಮನ ಕೇಂದ್ರೀಕರಿಸಲಾಗಿದೆ ಎಂದರು.
ಕೃತಕ ಬುದ್ಧಿಮತ್ತೆ (AI) ಕುರಿತು ಮಾತನಾಡಿದ ಅವರು, AI ಸುತ್ತ ಜಾಗತಿಕ ನಿರೂಪಣೆಯನ್ನು ರೂಪಿಸಲು ಭಾರತ ಪ್ರಯತ್ನಿಸಿದೆ. ಸಾಂಪ್ರದಾಯಿಕ ಕೋಡಿಂಗ್ ಮತ್ತು ಪ್ರೋಗ್ರಾಮಿಂಗ್ನಲ್ಲಿ AI ಕಾರಣದಿಂದ ಸುಮಾರು 20 ಲಕ್ಷ ಉದ್ಯೋಗಗಳನ್ನು ಕಳೆದುಕೊಳ್ಳಬಹುದು, ಆದರೆ ತಂತ್ರಜ್ಞಾನವನ್ನು ಅರ್ಥಮಾಡಿಕೊಳ್ಳುವ ಮತ್ತು ಅದರ ಸುತ್ತಲೂ ಆ್ಯಪ್ ಅಭಿವೃದ್ಧಿಪಡಿಸುವವರಿಗೆ ಇದು ಸುಮಾರು 40 ಲಕ್ಷ ಹೊಸ ಉದ್ಯೋಗಗಳನ್ನು ಸೃಷ್ಟಿಸಬಹುದು ಎಂದು ಅವರು ಹೇಳಿದರು.