ಚೆನ್ನೈ: ದೇಶದ ಆರ್ಥಿಕ ಬೆಳವಣಿಗೆಗೆ ಜನಸಂಖ್ಯೆ, ಸರ್ಕಾರಿ ನೀತಿಗಳು ಮತ್ತು ಉತ್ಪಾದಕತೆಯನ್ನು ಹೇಗೆ ಜೋಡಿಸುವುದು ಅತ್ಯಗತ್ಯ ಎಂಬುದನ್ನು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ನ ಮಾಜಿ ಪ್ರಾಧ್ಯಾಪಕ ಡಾ. ಆರ್. ವೈದ್ಯನಾಥನ್ ವಿವರಿಸಿದರು.
ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಆಯೋಜಿಸಿದ್ದ ಥಿಂಕ್ಎಡು ಕಾನ್ಕ್ಲೇವ್ 2026ರಲ್ಲಿ ಟಿಎನ್ಐಇ ಸಂಪಾದಕಿ ಸಾಂತ್ವಾನ ಭಟ್ಟಾಚಾರ್ಯ ನಿರ್ವಹಿಸಿದ ‘Advantage Bharat: Technology, Economy and Demography as Growth Drivers’ ಎಂಬ ಶೀರ್ಷಿಕೆಯ ಚರ್ಚೆಯಲ್ಲಿ, ಈ ಮೂರು ಅಂಶಗಳು ಭಾರತದ ಬೆಳವಣಿಗೆಯನ್ನು ಹೇಗೆ ಹೆಚ್ಚಿಸಬಹುದು ಎಂಬುದರ ಕುರಿತು ಮಾತನಾಡಿದರು.
ಭಾರತದ ಬೆಳವಣಿಗೆಯು ಬಾಳಿಕೆ ಬರುವ, ಆಳವಾದ ಮತ್ತು ಎಲ್ಲರನ್ನೂ ಒಳಗೊಳ್ಳುವಂತಿದೆಯೇ ಎಂಬುದರ ಕುರಿತು ಮಾತನಾಡಿದ ಡಾ. ವೈದ್ಯನಾಥನ್, ದೇಶದ ಬೆಳವಣಿಗೆ ಅದ್ಭುತವಾಗಿದೆ. ಜೊತೆಗೆ ಜಾಗತಿಕ ಮನ್ನಣೆಯೂ ಇದೆ. ಬಡತನ ಗಣನೀಯವಾಗಿ ಕಡಿಮೆಯಾಗುವುದರೊಂದಿಗೆ ಭಾರತ ಶ್ಲಾಘನೀಯ ಅಭಿವೃದ್ಧಿಯನ್ನು ಕಂಡಿದೆ. ಜಾಗತಿಕ ಮಾಪನಗಳ ಪ್ರಕಾರ, ಕಳೆದ ಎರಡು ದಶಕಗಳಲ್ಲಿ ಬಡತನದ ಪ್ರಮಾಣ ಶೇ 25 ರಿಂದ ಶೇ 10ಕ್ಕೆ ಇಳಿದಿದೆ. ಕಳೆದ 20 ವರ್ಷಗಳಲ್ಲಿ ಅಗಾಧ ಪ್ರಮಾಣದ ಬದಲಾವಣೆಯಾಗಿದೆ; ನಾವು ಅದನ್ನು ಗುರುತಿಸುವುದು ಮುಖ್ಯ' ಎಂದರು.
ಡಾ. ವೈದ್ಯನಾಥನ್ ಅವರ ಮುಖ್ಯ ಕೆಲಸ ಭಾರತೀಯ ಆರ್ಥಿಕತೆಯ ಮೂಲಭೂತ ಕ್ಷೇತ್ರದಲ್ಲಿದೆ. ಮುಖ್ಯವಾಗಿ ಅಸಂಘಟಿತ ವಲಯದ ಮೇಲೆ ಕೇಂದ್ರೀಕರಿಸಿದೆ.
'ಅಡ್ವಾಂಟೇಜ್ ಭಾರತ' ವಾಸ್ತವವೋ ಅಥವಾ ನಿರೂಪಣೆಯೋ ಎಂದು ಕೇಳಿದಾಗ, ಭಾರತ ಕಂಡ ತಂತ್ರಜ್ಞಾನ ಮತ್ತು ಆಡಳಿತದಲ್ಲಿನ ತ್ವರಿತ ಬೆಳವಣಿಗೆಯನ್ನು ಸೂಚಿಸಿದ ಅವರು, ಭ್ರಷ್ಟಾಚಾರವನ್ನು ನಿಭಾಯಿಸಲು ಮತ್ತು ನಾಗರಿಕರ ಜೀವನವನ್ನು ಸುಲಭಗೊಳಿಸಲು ಪರಿಚಯಿಸಲಾದ ವಿವಿಧ ತಾಂತ್ರಿಕ ಪ್ರಗತಿಗಳನ್ನು ಉಲ್ಲೇಖಿಸಿದರು. ಆಫ್ಲೈನ್ ಟಿಕೆಟಿಂಗ್ ವ್ಯವಸ್ಥೆಯನ್ನು ಆನ್ಲೈನ್ ಬುಕಿಂಗ್ಗೆ ಪರಿವರ್ತಿಸುವುದರ ಮೂಲಕ ಅದು ನೀಡುವ ಅನುಕೂಲಗಳ ಕುರಿತು ಮಾತನಾಡಿದರು.
ಭಾರತದಲ್ಲಿ ಹಣಕಾಸು ಸುಧಾರಣೆಗಳನ್ನು ರೂಪಿಸಿದ ಪ್ರಮುಖ ವ್ಯಕ್ತಿಗಳನ್ನು ಡಾ. ವೈದ್ಯನಾಥನ್ ಸ್ಮರಿಸಿದರು. ಅಂತಹ ಒಬ್ಬ ವ್ಯಕ್ತಿ ಎಂದರೆ ಅರ್ಥಶಾಸ್ತ್ರಜ್ಞ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ಮಾಜಿ ಸದಸ್ಯ ಅಸಿಮ್ ದಾಸ್ಗುಪ್ತ ಅವರು ಏಕರೂಪದ ತೆರಿಗೆ ವ್ಯವಸ್ಥೆಯ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಸಿಮ್ ದಾಸ್ಗುಪ್ತ ಅವರು ಮಾರಾಟ ತೆರಿಗೆ ಕುರಿತು ಸಮೀಕ್ಷೆ ನಡೆಸಿ ಜಿಎಸ್ಟಿ ರೂಪರೇಷೆಯನ್ನು ರೂಪಿಸಿದರು.
ಭಾರತದ UPI ಪಾವತಿ ವ್ಯವಸ್ಥೆಯನ್ನು ಶ್ಲಾಘಿಸಿದ ಅವರು, ಅದರ ಅನುಕೂಲಗಳನ್ನು ಎತ್ತಿ ತೋರಿಸಿದರು ಮತ್ತು ಭಾರತವು ವಿಶ್ವದ ಶೇ 45 ರಷ್ಟು ಆನ್ಲೈನ್ ವಹಿವಾಟುಗಳನ್ನು ನಿರ್ವಹಿಸುತ್ತದೆ ಎಂದು ಹೇಳಿದರು. ಯುಪಿಐ ಮೂಲಕ ಭಿಕ್ಷೆ ಬೇಡಿದ ಮುಂಬೈನಲ್ಲಿನ ಭಿಕ್ಷುಕನೊಂದಿಗಿನ ತಮ್ಮ ಮಾತುಕತೆಯನ್ನು ನೆನಪಿಸಿಕೊಂಡರು.
ಡಾ. ವೈದ್ಯನಾಥನ್ ಅವರು ಮಾನವರು 'ಎಲ್ಲವನ್ನೂ ಆವಿಷ್ಕರಿಸುವುದಿಲ್ಲ; ನಾವು ಹೆಚ್ಚಾಗಿ ಅಸ್ತಿತ್ವದಲ್ಲಿರುವ ವಿಚಾರಗಳನ್ನು ಅಳವಡಿಸಿಕೊಳ್ಳುತ್ತೇವೆ' ಎಂದು ಹೇಳಿದರು. AI ಉದ್ಯೋಗಗಳನ್ನು ಕಸಿದುಕೊಳ್ಳುವುದಿಲ್ಲ. ಏಕೆಂದರೆ, ಜನರು ಕೃತಕ ಬುದ್ಧಿಮತ್ತೆಯ ಸುತ್ತ ಕೆಲಸ ಮಾಡಲು ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ ಎಂದು ಅವರು ಹೇಳಿದರು.