ಚೆನ್ನೈ: ಭಾರತದ ಭವಿಷ್ಯವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿದೆ ಕೇಂದ್ರದ ಮಾಜಿ ಸಚಿವೆ ಸ್ಮೃತಿ ಝಡ್ ಇರಾನಿ ಅವರು ಸೋಮವಾರ ಹೇಳಿದ್ದು, ಸಾಮಾಜಿಕ ಜಾಲತಾಣವು ಪ್ರಜಾಪ್ರಭುತ್ವೀಕರಣದ ಸಾಧನದಿಂದ ಧ್ರುವೀಕರಣದ ಸಾಧನವಾಗಿ ಬದಲಾಗಿದೆ ಎಂದು ತಿಳಿಸಿದ್ದಾರೆ.
ThinkEdu Conclave 14ನೇ ಆವೃತ್ತಿಯಲ್ಲಿ ‘From Welfare to Development: Women in Viksit Bharat 2047’ ವಿಷಯದಡಿ ನಡೆದ ಸಂವಾದದಲ್ಲಿ ಟಿಎನ್ಐಇ ಸಂಪಾದಕೀಯ ನಿರ್ದೇಶಕ ಪ್ರಭು ಚಾವ್ಲಾ ಅವರೊಂದಿಗೆ ಮಾತನಾಡಿದರು.
ಒಂದು ಕಾಲದಲ್ಲಿ ಸಾಮಾಜಿಕ ಜಾಲತಾಣ ಜನರ ಧ್ವನಿಗೆ ವೇದಿಕೆಯಾಗಿತ್ತು. ಆದರೆ, ಈಗ ಅದು ಭಿನ್ನಾಭಿಪ್ರಾಯಗಳನ್ನು ಹೆಚ್ಚಿಸುವ, ಸಮಾಜವನ್ನು ವಿಭಜಿಸುವ ಸಾಧನವಾಗಿ ಬಳಕೆಯಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಜವಾಬ್ದಾರಿಯುತ ಬಳಕೆ ಮತ್ತು ಮಾಹಿತಿಯ ಪರಿಶೀಲನೆ ಅಗತ್ಯ ಎಂದು ಹೇಳಿದರು.
ಸಂವಿಧಾನಾತ್ಮಕ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಸಾಮಾಜಿಕ ಜಾಲತಾಣದಿಂದ ದೂರ ಉಳಿದಿರುವ ಕುರಿತು ಮಾತನಾಡಿ, ಸರ್ಕಾರಿ ಜವಾಬ್ದಾರಿ ಹೊತ್ತಿದ್ದಾಗ ಮಾಧ್ಯಮದಿಂದ ದೂರ ಉಳಿಯುವುದು ನನ್ನ ಜಾಗೃತ ನಿರ್ಧಾರವಾಗಿತ್ತು. ಮಾಧ್ಯಮ ಕ್ಷೇತ್ರದಿಂದ ಬಂದವರು ದಶಕದ ಕಾಲ ಸರ್ಕಾರದಲ್ಲಿ ಜವಾಬ್ದಾರಿ ನಿರ್ವಹಿಸುವುದು ಅಪರೂಪ. ಆಡಳಿತದಲ್ಲಿ ಗಮನ ಕೇಂದ್ರೀಕರಿಸಲು ಈ ಕ್ರಮ ಸಹಾಯವಾಯಿತು ಎಂದು ತಿಳಿಸಿದರು.
ಮಹಿಳೆಯರ ಆರ್ಥಿಕ ಭಾಗವಹಿಸುವಿಕೆಯ ಬಗ್ಗೆ ಮಾತನಾಡಿ, ಮಹಿಳಾ ಸಬಲೀಕರಣವನ್ನು ಕೇವಲ ಹಕ್ಕುಗಳ ಚರ್ಚೆಗೆ ಸೀಮಿತಗೊಳಿಸದೆ, ಆರ್ಥಿಕ ಬಲವರ್ಧನೆ ಮೂಲಕ ಸ್ಥಿರವಾದ ಬದಲಾವಣೆ ತರಬೇಕು ಎಂದು ಒತ್ತಿ ಹೇಳಿದರು.
ಮಹಿಳೆ ಆರ್ಥಿಕವಾಗಿ ಬಲಿಷ್ಠಳಾದರೆ, ಆಕೆಯ ಗೌರವ ಮತ್ತು ಹಕ್ಕುಗಳನ್ನು ಕಾಪಾಡುವ ಸಾಮರ್ಥ್ಯ ಸ್ವಯಂ ಹೆಚ್ಚುತ್ತದೆ ಎಂದು ತಿಳಿಸಿದರು.
‘ವಿಕಸಿತ ಭಾರತ 2047’ ಗುರಿಯನ್ನು ಸಾಧಿಸಲು ಮಹಿಳೆಯರ ಆರ್ಥಿಕ ಅಂತರವನ್ನು ಕಡಿಮೆ ಮಾಡುವುದು ಅತ್ಯಗತ್ಯ. ಶಿಕ್ಷಣ, ಉದ್ಯಮಶೀಲತೆ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಿಸುವುದು ದೇಶದ ಅಭಿವೃದ್ಧಿಗೆ ಮಹತ್ವದ್ದಾಗಿದೆ ಎಂದರು.