ಶ್ರೀನಗರ: ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರೀ ಪ್ರತಿಭಟನೆಗಳು ನಡೆದ ನಂತರ ಕಣಿವೆಯಾದ್ಯಂತ ಸತತ ಮೂರನೇ ದಿನವೂ ಭದ್ರತಾ ನಿರ್ಬಂಧಗಳು ಮುಂದುವರೆದಿವೆ.
ಸಾಮಾಜಿಕ ಮಾಧ್ಯದಲ್ಲಿ ಖಮೇನಿ ಹತ್ಯೆ ಕುರಿತು ಪೋಸ್ಟ್ ಹಾಕುವ ಮೂಲಕ ಜನರನ್ನು ತಪ್ಪುದಾರಿಗೆಳೆಯುವ ವಿಷಯ ಪ್ರಸಾರ ಮಾಡಿದ ಆರೋಪದ ಮೇಲೆ ನ್ಯಾಷನಲ್ ಕಾನ್ಫರೆನ್ಸ್ ಸಂಸದ ಅಗಾ ಸೈಯದ್ ರುಹುಲ್ಲಾ ಮೆಹದಿ ಮತ್ತು ಶ್ರೀನಗರ ಮಾಜಿ ಮೇಯರ್ ಜುನೈದ್ ಅಜೀಂ ಮಟ್ಟು ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಖಂಡಿಸಿ ನಡೆದ ಪ್ರತಿಭಟನೆಗಳನ್ನು ತಡೆಯಲು ಅಧಿಕಾರಿಗಳು ವಿಧಿಸಿರುವ ಭದ್ರತಾ ನಿರ್ಬಂಧಗಳು ಇನ್ನೂ ಜಾರಿಯಲ್ಲಿವೆ.
ಏತನ್ಮಧ್ಯೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಶ್ರೀನಗರದಲ್ಲಿರುವ ಪಕ್ಷದ ಕಚೇರಿಯ ಹೊರಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರತಿಕೃತಿಗಳನ್ನು ದಹಿಸಿದರು.
ಇನ್ನು ಸಂಸದ ಮತ್ತು ಮಾಜಿ ಮೇಯರ್ ವಿರುದ್ಧ ಎಫ್ಐಆರ್ ದಾಖಲಿಸಿದ್ದಕ್ಕೆ ಪ್ರತಿಕ್ರಿಯಿಸಿದ ಮೆಹಬೂಬಾ, “ಜಮ್ಮು ಮತ್ತು ಕಾಶ್ಮೀರದಎನ್ಸಿ ಸರ್ಕಾರ ಹಾಗೂ ಕೇಂದ್ರ ಸರ್ಕಾರ, ಇರಾನ್ ವಿರುದ್ಧ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿ ಬಗ್ಗೆ ಮೌನವಾಗಿದೆ. ಆದರೆ ಮಾತನಾಡುವವರು ಅಪರಾಧಿಗಳು ಎಂದು ಕೇಸ್ ಹಾಕುವುದು ಸರಿಯಲ್ಲ” ಎಂದರು.
“ಆಗಾ ರುಹುಲ್ಲಾ ಮತ್ತು ಜುನೈದ್ ಅಜೀಮ್ ವಿರುದ್ಧದ ಎಫ್ಐಆರ್ ಅತ್ಯಂತ ಅನಗತ್ಯ ಮತ್ತು ಇದು ಅನ್ಯಾಯ. ಅದನ್ನು ತಕ್ಷಣವೇ ಹಿಂಪಡೆಯಬೇಕು” ಎಂದು ಪಿಡಿಪಿ ಮುಖ್ಯಸ್ಥೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.