ಜೈರಾಮ್ ರಮೇಶ್- ನರೇಂದ್ರ ಮೋದಿ 
ದೇಶ

ಡೊನಾಲ್ಡ್ ಟ್ರಂಪ್ ನಿಕೋಲಸ್ ಮಡೂರೊಗೆ ಮಾಡಿದ್ದನ್ನು ಮೋದಿ ನಿತೀಶ್ ಕುಮಾರ್‌ಗೆ ಮಾಡಿದ್ದಾರೆ: ಜೈರಾಮ್ ರಮೇಶ್

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿತೀಶ್ ಕುಮಾರ್ ಅವರ ನಿರ್ಧಾರವು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶಕ್ಕೆ ಮಾಡಿದ ದ್ರೋಹವಾಗಿದೆ.

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜ್ಯಸಭೆಗೆ ತೆರಳುವ ನಿರ್ಧಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶುಕ್ರವಾರ ಬಿಜೆಪಿಯನ್ನು ಟೀಕಿಸಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜನವರಿಯಲ್ಲಿ ಆಗಿನ ವೆನೆಜುವೆಲಾ ಅಧ್ಯಕ್ಷ ನಿಕೊಲಸ್‌ ಮಡೂರೊ ಅವರಿಗೆ ಮಾಡಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಈಗ ಜೆಡಿಯು ಮುಖ್ಯಸ್ಥರಿಗೆ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ನಿತೀಶ್ ಕುಮಾರ್ ಅವರ ನಿರ್ಧಾರವು ಕಳೆದ ವರ್ಷ ನವೆಂಬರ್‌ನಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನರು ನೀಡಿದ ಜನಾದೇಶಕ್ಕೆ ಮಾಡಿದ ದ್ರೋಹವಾಗಿದೆ. ರಾಜ್ಯದ ಜನರು ನಿತೀಶ್ ಕುಮಾರ್ ಅವರ ಮರುಚುನಾವಣೆಗೆ ಮತ ಹಾಕಿದ್ದಾರೆಯೇ ಹೊರತು ಬಿಜೆಪಿ ಮುಖ್ಯಮಂತ್ರಿಗಾಗಿ ಅಲ್ಲ ಎಂದು ಅವರು ಹೇಳಿದರು.

ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ರಾಜ್ಯಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಿದ ಒಂದು ದಿನದ ನಂತರ ಜೈರಾಮ್ ರಮೇಶ್ ಹೇಳಿಕೆಗಳು ಬಂದಿವೆ. ಈ ಕ್ರಮವು ಹಿಂದಿ ಹೃದಯಭೂಮಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಗೆ ದಾರಿ ಮಾಡಿಕೊಟ್ಟಿದೆ, ಬಹುಶಃ ಬಿಜೆಪಿ ನೇತೃತ್ವದಲ್ಲಿ ಸರ್ಕಾರ ರಚನೆಯಾಗಲಿದೆ.

ರಾಜ್ಯದ ಜನರಿಗೆ ಕೃತಜ್ಞತೆ ಸಲ್ಲಿಸಿದ ನಿತೀಶ್ ಕುಮಾರ್, 'ಎರಡು ದಶಕಗಳಿಗೂ ಹೆಚ್ಚು ಕಾಲ, ನೀವು ನಿರಂತರವಾಗಿ ನನ್ನ ಮೇಲೆ ನಂಬಿಕೆ ಇಟ್ಟಿದ್ದೀರಿ ಮತ್ತು ಬೆಂಬಲ ನೀಡಿದ್ದೀರಿ. ಆ ನಂಬಿಕೆಯ ಬಲದ ಮೇಲೆ ನಾವು ಬಿಹಾರ ಮತ್ತು ನಿಮ್ಮೆಲ್ಲರಿಗೂ ಸಂಪೂರ್ಣ ಸಮರ್ಪಣೆಯೊಂದಿಗೆ ಸೇವೆ ಸಲ್ಲಿಸಿದ್ದೇವೆ. ನಿಮ್ಮ ನಂಬಿಕೆ ಮತ್ತು ಬೆಂಬಲದ ಶಕ್ತಿಯೇ ಇಂದು ಬಿಹಾರವು ಅಭಿವೃದ್ಧಿ ಮತ್ತು ಘನತೆಯ ಹೊಸ ಆಯಾಮವನ್ನು ಪ್ರಸ್ತುತಪಡಿಸಲು ಅನುವು ಮಾಡಿಕೊಟ್ಟಿದೆ' ಎಂದು ಹೇಳಿದ್ದರು.

ಬಿಹಾರ ರಾಜಕೀಯದಲ್ಲಿನ ಈ ಪ್ರಮುಖ ಬೆಳವಣಿಗೆಯ ಬಗ್ಗೆ ಕೇಳಿದಾಗ ರಮೇಶ್ ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿ, 'ಬಿಹಾರ ಚುನಾವಣಾ ಪ್ರಚಾರದ ಸಮಯದಲ್ಲಿ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ನಿತೀಶ್ ಕುಮಾರ್ ಅವರನ್ನು ಪದಚ್ಯುತಗೊಳಿಸುವುದು ಬಿಜೆಪಿಯ ಉದ್ದೇಶವಾಗಿರುವುದರಿಂದ ಅವರು ಹೆಚ್ಚು ಕಾಲ ಮುಖ್ಯಮಂತ್ರಿಯಾಗಿ ಉಳಿಯುವುದಿಲ್ಲ ಎಂದು ಹೇಳಿದ್ದರು. ಅಂತಿಮವಾಗಿ, ಅದೇ ಸಂಭವಿಸಿತು' ಎಂದರು.

ನಿತೀಶ್ ಕುಮಾರ್ ಸದ್ಯದ ಅವಧಿಯಲ್ಲಿ ನಾಲ್ಕು ತಿಂಗಳೂ ಮುಖ್ಯಮಂತ್ರಿಯಾಗಿಲ್ಲ ಮತ್ತು ಅವರನ್ನು ಪದಚ್ಯುತಗೊಳಿಸಲಾಗುತ್ತಿದೆ ಎಂದು ರಮೇಶ್ ಹೇಳಿದರು.

ಪ್ರಧಾನಿ ಮೋದಿ ಮತ್ತು ಬಿಜೆಪಿಯನ್ನು ಟೀಕಿಸಿದ ರಮೇಶ್, 'ಟ್ರಂಪ್ ಮಡೂರೊಗೆ ಮಾಡಿದ್ದನ್ನು, ಮೋದಿ ಜಿ ನಿತೀಶ್ ಕುಮಾರ್‌ಗೆ ಮಾಡಿದ್ದಾರೆ. ಇದೊಂದು ಬಲವಂತದ ಕ್ರಮ' ಎಂದು ಹೇಳಿದರು.

ಜನವರಿ 3 ರಂದು ವೆನೆಜುವೆಲಾ ಮೇಲೆ ಅಮೆರಿಕದ ಸೇನಾಪಡೆಗಳು ದಾಳಿ ನಡೆಸಿದ್ದವು. ಇದೇ ವೇಳೆ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಬಂಧಿಸಿ ನ್ಯೂಯಾರ್ಕ್‌ಗೆ ಕರೆದೊಯ್ದವು.

ನಿತೀಶ್ ಕುಮಾರ್ ರಾಜ್ಯಸಭೆಗೆ ಆಯ್ಕೆಯಾಗುವ ಬಗ್ಗೆ ಮಾತನಾಡಿದ ರಮೇಶ್, 'ಇದು ಅನಿವಾರ್ಯವಾಗಿತ್ತು. ಇದು ಬಿಹಾರದ ಜನರಿಗೆ ಮತ್ತು ಅವರು ನೀಡಿದ ಜನಾದೇಶಕ್ಕೆ ಮಾಡಿದ ದ್ರೋಹ. ಬಿಜೆಪಿ ಮುಖ್ಯಮಂತ್ರಿಯನ್ನಾಗಿ ಮಾಡುವುದಲ್ಲ, ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವುದೇ ಜನಾದೇಶವಾಗಿತ್ತು' ಎಂದರು.

'ನಾಳೆ (ಚಂದ್ರಬಾಬು) ನಾಯ್ಡು ಅವರನ್ನು ಇಲ್ಲಿಗೆ ಕರೆತಂದು ಸಚಿವರನ್ನಾಗಿ ಮಾಡುವ ಸಾಧ್ಯತೆಯಿದೆ. ಅಲ್ಲಿಯೂ ಒಂದು ಬಲವಂತದ ಕ್ರಮ ಸಂಭವಿಸಬಹುದು. ಮಹಾರಾಷ್ಟ್ರದಲ್ಲೂ ಅದೇ ರೀತಿ ನಡೆಯಿತು, ಎನ್‌ಸಿಪಿ ಮತ್ತು ಶಿವಸೇನೆಯ ವಿಭಜನೆ. ಇದೆಲ್ಲವೂ 'ಜಿ2' ನ ಕೆಲಸ'. ಬಿಹಾರದಲ್ಲಿ ಕಾಂಗ್ರೆಸ್ ಕೇವಲ ಆರು ಶಾಸಕರನ್ನು ಹೊಂದಿದೆ. ಆದರೆ, ಅದು ಜನರ ಸಮಸ್ಯೆಗಳನ್ನು ಎತ್ತುವುದನ್ನು ಮುಂದುವರಿಸುತ್ತದೆ ಮತ್ತು ನಿತೀಶ್ ಕುಮಾರ್ ರಾಜ್ಯಸಭೆಗೆ ಹೋಗುವುದು 'ಜನಮತಕ್ಕೆ ದ್ರೋಹ'' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯೂಯಾರ್ಕ್ ನಲ್ಲೇ ನಿಮ್ಮ ಬುಡ ಗಟ್ಟಿ ಇಲ್ಲ; ಇನ್ನು ನಮ್ಮ ದೇಶದ ಅಧಿಕಾರ ಬದಲಾಯಿಸ್ತೀರಾ?: ಟ್ರಂಪ್ ಬಗ್ಗೆ ಇರಾನ್ ಅಪಹಾಸ್ಯ!

ಕೇಂದ್ರದಿಂದ ಅಸಹಕಾರ, ಮಲತಾಯಿ ಧೋರಣೆ, ಆದರೂ ವಿತ್ತೀಯ ಶಿಸ್ತು ಪಾಲನೆ: CM ಸಿದ್ದರಾಮಯ್ಯ

UPSC ಪರೀಕ್ಷೆ ಫಲಿತಾಂಶ ಪ್ರಕಟ: ಕಿರಣ್ ಕಾಮತೆ ರಾಜ್ಯಕ್ಕೆ ಟಾಪರ್; ಕರ್ನಾಟಕದ 22 ಅಭ್ಯರ್ಥಿಗಳು ಪಾಸ್

ಯುದ್ಧ ಕೊನೆಗೊಳಿಸಲು ಕೆಲವು ರಾಷ್ಟ್ರಗಳು 'ಮಧ್ಯಸ್ಥಿಕೆ' ಬಯಸುತ್ತಿವೆ: ಭೀಕರ ದಾಳಿಗಳ ನಡುವೆ ಇರಾನ್ ಅಧ್ಯಕ್ಷರ ಸ್ಫೋಟಕ ಹೇಳಿಕೆ!

ಸುಖೋಯ್ ವಿಮಾನ ದುರಂತ: Op Sindoor ನಲ್ಲಿ ಪಾಕ್ ಗೆ ನಡುಕ ಹುಟ್ಟಿಸಿದ್ದ ಹುತಾತ್ಮ ಪೈಲಟ್ Purvesh Duragkar

SCROLL FOR NEXT