ಚೆನ್ನೈ: ತಮಿಳುನಾಡು ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿರುವ ಖ್ಯಾತ ನಟ ವಿಜಯ್ ಅವರು, ತಮ್ಮ ಪಕ್ಷ 'ತಮಿಳಗ ವೆಟ್ರಿ ಕಳಗಂ' ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಮದುವೆಗೆ ಚಿನ್ನ, ಉಚಿತ ಬಸ್ ಹಾಗೂ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಸೇರಿದಂತೆ ಭರವಸೆಗಳ ಸರಮಾಲೆಯನ್ನೇ ಘೋಷಿಸಿದ್ದಾರೆ.
ಪಕ್ಷ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಟಿವಿಕೆ ಅಧ್ಯಕ್ಷ ವಿಜಯ್ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಿ ನೌಕರರನ್ನು ಹೊರತುಪಡಿಸಿ, 60 ವರ್ಷ ವಯಸ್ಸಿನವರೆಗಿನ ಎಲ್ಲಾ ಮಹಿಳಾ ಕುಟುಂಬ ಮುಖ್ಯಸ್ಥರಿಗೆ ಮಾಸಿಕ 2,500 ರೂ.ಗಳ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದ್ದಾರೆ.
ಪಕ್ಷವು 'ಅನ್ನಪೂರ್ಣಿ ಸೂಪರ್ ಸಿಕ್ಸ್ ಯೋಜನೆ'ಯನ್ನು ಘೋಷಿಸಿದ್ದು, ಇದರ ಅಡಿಯಲ್ಲಿ ಪ್ರತಿ ಕುಟುಂಬಕ್ಕೆ ಪ್ರತಿ ವರ್ಷ ಆರು ಗ್ಯಾಸ್ ಸಿಲಿಂಡರ್ಗಳನ್ನು ಉಚಿತವಾಗಿ ನೀಡಲಾಗುತ್ತದೆ.
ಇನ್ನು 'ಅಣ್ಣನ್ ಸೀರ್ ತಿಟ್ಟಂ' ಅಡಿಯಲ್ಲಿ, ಮದುವೆಯಾಗುವ ಪ್ರತಿ ಹುಡುಗಿಗೆ ಎಂಟು ಗ್ರಾಂ ಚಿನ್ನ ಮತ್ತು ಗುಣಮಟ್ಟದ ರೇಷ್ಮೆ ಸೀರೆಯನ್ನು ನೀಡಲಾಗುತ್ತದೆ ಎಂದು ವಿಜಯ್ ಹೇಳಿದ್ದಾರೆ.
ಇನ್ನು ಶಾಲೆ ಬಿಡುವುದನ್ನು ತಡೆಗಟ್ಟಲು, ಕಾಮರಾಜರ್ ಶೈಕ್ಷಣಿಕ ಭರವಸೆ ಯೋಜನೆಯನ್ನು ಪರಿಚಯಿಸಲಾಗುವುದು, ಇದರ ಅಡಿಯಲ್ಲಿ ಪ್ರತಿಯೊಬ್ಬ ತಾಯಿ ಅಥವಾ ಪೋಷಕರಿಗೆ ವರ್ಷಕ್ಕೆ 15,000 ರೂ.ಗಳ ಆರ್ಥಿಕ ನೆರವು ನೀಡಲಾಗುವುದು.
ರಾಜ್ಯ ಸಾರಿಗೆ ನಿಗಮದ ಎಲ್ಲಾ ವರ್ಗದ ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು ಮತ್ತು ಅವರು ಬಸ್ ಶುಲ್ಕವನ್ನು ಪಾವತಿಸದೆ ತಮಿಳುನಾಡಿನಾದ್ಯಂತ ಪ್ರಯಾಣಿಸಬಹುದು ಎಂದು ಅವರು ಹೇಳಿದರು.
ಮಹಿಳೆಯರು, ಮಕ್ಕಳು ಮತ್ತು ವೃದ್ಧರನ್ನು ಬೆಂಬಲಿಸಲು ಪ್ರತ್ಯೇಕ ಇಲಾಖೆಯನ್ನು ರಚಿಸಲಾಗುವುದು ಮತ್ತು ಅದು ತಮ್ಮ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದರು.
ಮಹಿಳೆಯರ ಸುರಕ್ಷತೆ ಮತ್ತು ಸಬಲೀಕರಣಕ್ಕಾಗಿ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ವಿಜಯ್ ಪ್ರಕಟಿಸಿದ್ದಾರೆ. “ವಿಜಯದ ಪಯಣ” (Vetri Payanam) ಎಂಬ ಹೆಸರಿನಡಿ ಮಹಿಳೆಯರಿಗೆ ಹಲವು ಕೊಡುಗೆಗಳನ್ನು ಅವರು ಘೋಷಿಸಿದ್ದಾರೆ. ರಾಜ್ಯದ ಎಲ್ಲಾ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದ ಸೌಲಭ್ಯ ಕಲ್ಪಿಸಲಿದೆ.
ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ ರಚನೆ. ಈ ಪಡೆಯ ಮಹಿಳಾ ಅಧಿಕಾರಿಗಳು ಬಾಡಿ ಕ್ಯಾಮೆರಾಗಳೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಭದ್ರತಾ ಕಾರ್ಯ ನಿರ್ವಹಿಸಲಿದ್ದಾರೆ. ಖಾಸಗಿ ಶೇರ್ ಆಟೋಗಳೂ ಸೇರಿದಂತೆ ಎಲ್ಲಾ ಸಾರ್ವಜನಿಕ ವಾಹನಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಕೆ. ತುರ್ತು ಸಂದರ್ಭದಲ್ಲಿ 5 ನಿಮಿಷಗಳಲ್ಲಿ ಸಹಾಯ ಲಭ್ಯವಾಗುವಂತೆ ಕ್ರಮ.
ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ತ್ವರಿತ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ಸ್ಥಾಪನೆ. ಸಿಸಿಟಿವಿ ಮತ್ತು ಸರಿಯಾದ ಬೀದಿ ದೀಪಗಳ ಮೂಲಕ ಕತ್ತಲೆ ಪ್ರದೇಶಗಳನ್ನು ಇಲ್ಲದಂತೆ ಮಾಡುವುದು. ರೇಷನ್ ಅಂಗಡಿಗಳು, ಶಾಲೆ ಮತ್ತು ಕಾಲೇಜುಗಳ ಮೂಲಕ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ. ಮಹಿಳಾ ಸ್ವಸಹಾಯ ಸಂಘಗಳಿಗೆ 5 ಲಕ್ಷದವರೆಗೆ ಬಡ್ಡಿರಹಿತ ಹಣಕಾಸು ನೆರವು.ನೋಂದಾಯಿತ ಸಣ್ಣ ಉದ್ದಿಮೆಗಳಾಗಿ ಬದಲಾಗುವ ಸಂಘಗಳಿಗೆ ವಾರ್ಷಿಕ ₹5 ಲಕ್ಷದವರೆಗೆ ಅನುದಾನ.
ಮಕ್ಕಳಿಗಾಗಿ ‘ತಾಯಿ ಮಾಮನ್’ ಯೋಜನೆ
ತಮಿಳುನಾಡಿನಲ್ಲಿ ಜನಿಸುವ ಪ್ರತಿಯೊಂದು ಮಗುವಿಗೆ ಸರ್ಕಾರದ ವತಿಯಿಂದ ಚಿನ್ನದ ಉಂಗುರ ಉಡುಗೊರೆ. ಮಗುವಿಗೆ ಬೇಕಾದ ಬಟ್ಟೆ, ಸಾಬೂನು, ಆಟಿಕೆಗಳು, ಸೊಳ್ಳೆ ಪರದೆ ಮತ್ತು ನ್ಯಾಪ್ಕಿನ್ ಒಳಗೊಂಡ ಸಂಪೂರ್ಣ ಕಿಟ್ ವಿತರಣೆ.