ಸಂಭಾಲ್: ವಿದೇಶಿ ಸಂಘರ್ಷಗಳು ಭಾರತದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಬೀರಬಾರದು ಮತ್ತು ಅಂತಹ ಘಟನೆಗಳಿಂದ ತೊಂದರೆಗೊಳಗಾದವರು ಇಲ್ಲಿ ಅಶಾಂತಿಯನ್ನು ಸೃಷ್ಟಿಸಬಾರದು ಎಂದು ಉತ್ತರ ಪ್ರದೇಶ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮುಂಬರುವ ಅಲ್ವಿದಾ ಪ್ರಾರ್ಥನೆ ಮತ್ತು ಈದ್ಗಾಗಿ ಸಂಭಾಲ್ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆದ ಶಾಂತಿ ಪರಿಶೀಲನಾ ಸಭೆಯಲ್ಲಿ ವೃತ್ತ ಅಧಿಕಾರಿ ಕುಲದೀಪ್ ಸಿಂಗ್ ಅವರು ಈ ರೀತಿ ಹೇಳಿದ್ದು, ಅದರ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
"ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧದ ಬಗ್ಗೆ ಅನೇಕ ಜನ ತಲೆಕೆಡಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ. ಅವರು ತಮ್ಮ ಎದೆ ಬಡಿದುಕೊಳ್ಳುತ್ತಿದ್ದಾರೆ. ಬ್ರದರ್, ನಿಮಗೆ ತುಂಬಾ ತೊಂದರೆ ಆಗಿದ್ದರೆ, ನೀವು ವಿಮಾನ ಹತ್ತಿ ಇರಾನ್ಗೆ ಹೋಗಿ ಇರಾನ್ ಪರವಾಗಿ ಹೋರಾಡಬೇಕು" ಎಂದು ಅಧಿಕಾರಿ ಹೇಳಿದ್ದಾರೆ.
ಈ ಬಗ್ಗೆ ಪಿಟಿಐಗೆ ಪ್ರತಿಕ್ರಿಯಿಸಿದ ಸಿಂಗ್, ತಮ್ಮ ಹೇಳಿಕೆ ಶಾಂತಿ ಮತ್ತು ಕೋಮು ಸಾಮರಸ್ಯವನ್ನು ಖಚಿತಪಡಿಸಿಕೊಳ್ಳುವ ಉದ್ದೇಶ ಹೊಂದಿದೆ ಎಂದು ಹೇಳಿದರು.
"ವಿದೇಶಿ ನೆಲದಲ್ಲಿ ನಡೆಯುತ್ತಿರುವ ಘಟನೆಗಳು ಇಲ್ಲಿನ ವಾತಾವರಣವನ್ನು ಹಾಳು ಮಾಡಬಾರದು ಎಂಬುದು ನನ್ನ ಉದ್ದೇಶವಾಗಿತ್ತು. ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವುದು ನಮ್ಮ ಉದ್ದೇಶ" ಎಂದು ಅವರು ತಿಳಿಸಿದರು.
ಸಭೆಯಲ್ಲಿ, ಪ್ರಾರ್ಥನೆಯ ಸಮಯದಲ್ಲಿ ಯಾವುದೇ ಇತರ ದೇಶವನ್ನು ಬೆಂಬಲಿಸಿ ಅಥವಾ ವಿರುದ್ಧವಾಗಿ ಘೋಷಣೆಗಳನ್ನು ಕೂಗಬಾರದು ಅಥವಾ ಫಲಕಗಳನ್ನು ಪ್ರದರ್ಶಿಸಬಾರದು ಎಂದು ಸಿಂಗ್ ಜನರಿಗೆ ಸಲಹೆ ನೀಡಿದರು.