ನವದೆಹಲಿ: ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಇಸ್ರೇಲ್- ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ ನಡುವೆಯೂ ಭಾರತದ ತೈಲ ಟ್ಯಾಂಕರ್ ಮತ್ತು ಕಂಟೈನರ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸಲು ಇರಾನ್ ಅನುಮತಿ ನೀಡಿದೆ ಎನ್ನಲಾಗುತ್ತಿದೆ.
ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಾಗ್ಚಿ ನಡುವಿನ ದೂರವಾಣಿ ಮಾತುಕತೆಯ ನಂತರ ಅನುಮತಿ ಸಿಕ್ಕಿದೆ. ಇದಾದ ನಂತರ ಭಾರತೀಯ ಟ್ಯಾಂಕರ್ಗಳು ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದುಹೋಗುತ್ತಿವೆ ಎಂದು ವರದಿಯಾಗಿದೆ.
ಈ ಮಧ್ಯೆ ಹಾರ್ಮುಜ್ ಜಲಸಂಧಿಯಿಂದ ಕಚ್ಚಾ ತೈಲ ಹೊತ್ತ ಹಡಗು ಭಾರತಕ್ಕೆ ಆಗಮಿಸಿದೆ. ಸೌದಿ ಅರೇಬಿಯಾದಿಂದ ಕಚ್ಚಾ ತೈಲವನ್ನು ಹೊತ್ತ ಲೈಬೀರಿಯನ್ ಧ್ವಜದ ಟ್ಯಾಂಕರ್ ಮುಂಬೈ ಬಂದರಿಗೆ ಆಗಮಿಸಿದೆ.
ಯುದ್ಧ ಪ್ರಾರಂಭವಾದ ಬಳಿಕ ಹಾರ್ಮುಜ್ ಜಲಸಂಧಿಯಿಂದ ಭಾರತಕ್ಕೆ ಆಗಮಿಸಿದ ಮೊದಲ ತೈಲ ಟ್ಯಾಂಕರ್ ಇದಾಗಿದ್ದು, ಬುಧವಾರ ಮುಂಬೈ ಬಂದರಿಗೆ ಆಗಮಿಸಿದೆ.
ಲೈಬೀರಿಯಾ ಧ್ವಜದ ಶೆನ್ ಲಾಗ್ ಸೂಯೆಜ್ಮ್ಯಾಕ್ಸ್ ಹಡಗು ಮಾರ್ಚ್ 1 ರಂದು ಸೌದಿ ಬಂದರಾದ ರಾಸ್ ತನುರಾದಿಂದ ಕಚ್ಚಾ ತೈಲವನ್ನು ಹೊತ್ತುಕೊಂಡು ಭಾರತದತ್ತ ಹೊರಟಿತ್ತು. ಈ ಸಂದರ್ಭದಲ್ಲಿ ತನ್ನ ಮೇಲೆ ಅಮೆರಿಕ ಮತ್ತು ಇಸ್ರೇಲ್ ಪ್ರಬಲ ದಾಳಿ ನಡೆಸಿದ್ದಕ್ಕೆ ಹಾರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿತ್ತು. ಹೀಗಾಗಿ ಹಡಗು ಸಮುದ್ರದಲ್ಲೇ ನಿಂತಿತ್ತು. ಮಾ.8 ರಂದು ಜಲಸಂಧಿಯೊಳಗೆ ಹಡಗಿನ ಕೊನೆಯ ಸಿಗ್ನಲ್ ಸ್ಥಳವನ್ನು ತೋರಿಸಿತ್ತು. ಮಾ.9 ರಂದು ಟ್ರ್ಯಾಕಿಂಗ್ ಡೇಟಾಬೇಸ್ಗಳಲ್ಲಿ ಮತ್ತೆ ಹಡಗು ಕಾಣಿಸಿಕೊಡಿತು.
1,35,335 ಮೆಟ್ರಿಕ್ ಟನ್ ಕಚ್ಚಾ ತೈಲವನ್ನು ಹೊತ್ತುಕೊಂಡು ಬಂದ ಶೆನ್ಲಾಂಗ್ ಹಡಗಿನಿಂದ ಸರಕುಗಳನ್ನು ತೆಗೆಯುವ ಪ್ರಕ್ರಿಯೆ ಆರಂಭವಾಗಿದೆ. ಪೂರ್ವ ಮುಂಬೈನ ಮಹುಲ್ ಸಂಸ್ಕರಣಾಗಾರಗಳಿಗೆ ಬಿಡುಗಡೆ ಮಾಡಲು 36 ಗಂಟೆಗಳು ಬೇಕಾಗುತ್ತದೆ ಎಂದು ಮುಂಬೈ ಬಂದರು ಪ್ರಾಧಿಕಾರ ತಿಳಿಸಿದೆ.
ಅಥೆನ್ಸ್ ಮೂಲದ ಡೈನಕಾಮ್ ಟ್ಯಾಂಕರ್ ಮ್ಯಾನೇಜ್ಮೆಂಟ್ ಲಿಮಿಟೆಡ್ ಈ ಹಡಗನ್ನು ನಿರ್ವಹಿಸುತ್ತಿದೆ. ಮುಂಬೈಗೆ ಬಂದ ಹಡಗಿನಲ್ಲಿ 29 ಭಾರತೀಯ, ಪಾಕಿಸ್ತಾನಿ ಮತ್ತು ಫಿಲಿಪೈನ್ಸ್ ಸಿಬ್ಬಂದಿ ಇದ್ದಾರೆ. ಯುದ್ಧ ಪ್ರಾರಂಭವಾದಾಗಿನಿಂದ ಇನ್ನೂ 28 ಭಾರತೀಯ ಧ್ವಜವನ್ನು ಹೊಂದಿರುವ ಹಡಗುಗಳು ಜಲಮಾರ್ಗದಲ್ಲಿ ಸಿಲುಕಿಕೊಂಡಿವೆ ಎಂದು ಭಾರತದ ಹಡಗು ನಿರ್ದೇಶನಾಲಯದ ಜನರಲ್ ತಿಳಿಸಿದೆ.