ಪಾಲ್ಘರ್: ಇತ್ತೀಚಿಗೆ ಬಿಡುಗಡೆಯಾದ 'ದಿ ಕೇರಳ ಸ್ಟೋರಿ 2' ವೀಕ್ಷಣೆ ಬಳಿಕ ಹಿಂದೂಗಳು, ಮುಸ್ಲಿಂರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಬಹಿಷ್ಕರಿಸುವ ಪ್ರತಿಜ್ಞೆ ಕೈಗೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಭಾರಿ ಚರ್ಚೆಯಾಗುತ್ತಿದೆ.
ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವಸಾಯಿ ಚಿತ್ರಮಂದಿರದಲ್ಲಿ ಮಾರ್ಚ್ 10 ರಂದು ಈ ವಿಡಿಯೋ ಶೂಟ್ ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದರೊಬ್ಬರು ಹೇಳಿದ್ದಾರೆ. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮೀರಾ-ಭಯಂದರ್ ವಸಾಯಿ-ವಿರಾರ್ (MBVV)ಪೊಲೀಸ್ ಕಮಿಷನರೇಟ್ನ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವೀಡಿಯೊದ ಸತ್ಯಾಸತ್ಯತೆ ಇನ್ನೂ ಖಚಿತವಾಗಿಲ್ಲ ಎಂದು ತಿಳಿಸಿದ್ದಾರೆ.
ಅದನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ಖಚಿತವಾಗಿಲ್ಲ. ಕೆಲವರು ಕಿಡಿಗೇಡಿಗಳು ಇದನ್ನು ಮಾಡಿರಬಹುದು ಎಂದಿದ್ದಾರೆ.
ವಿವಾದಾತ್ಮಕ ಚಿತ್ರ 'ದಿ ಕೇರಳ ಸ್ಟೋರಿ 2' ವೀಕ್ಷಿಸಿದ ನಂತರ ಒಂದು ಗುಂಪು ಮುಸ್ಲಿಮರನ್ನು ಬಹಿಷ್ಕರಿಸುವ ಶಪಥ ಮಾಡಿರುವುದು ವಿಡಿಯೋದಲ್ಲಿದೆ ಎಂದು ಕಾಂಗ್ರೆಸ್ ಸಂಸದ ಸಯ್ಯದ್ ನಾಸೀರ್ ಹುಸೇನ್ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಮುಸ್ಲಿಂರ ಟಾರ್ಗೆಟ್ ಹಾಗೂ ಕೋಮು ವಿಭಜನೆ ಮುಂದುವರೆದಿದೆ. ಸಿನಿಮಾವನ್ನು ಒಂದು ಸಮುದಾಯದ ರಾಜಕೀಯ ಆಸ್ತ್ರವಾಗಿ ಬಳಸಿಕೊಂಡಾಗ ಪೂರ್ವಾಗ್ರಹವನ್ನು ಸಂಘಟಿತ ತಾರತಮ್ಯವಾಗಿ ಪರಿವರ್ತಿಸುವ ಅಪಾಯವನ್ನುಂಟುಮಾಡುತ್ತದೆ ಮತ್ತು ಮುಸ್ಲಿಂ ವಿರೋಧಿ ಭಾವನೆಯನ್ನು ಮತ್ತಷ್ಟು ಉತ್ತೇಜಿಸುತ್ತದೆ ಎಂದು ಕಿಡಿಕಾರಿದ್ದಾರೆ.
ಭಾರತದ ಪ್ರಜಾಸತ್ತಾತ್ಮಕ ನೀತಿಯು ಜಾತ್ಯತೀತತೆ, ಸಮಾನತೆ ಮತ್ತು ಭ್ರಾತೃತ್ವದ ಮೇಲೆ ದೃಢವಾಗಿ ನಿಂತಿದೆ. ಯಾವುದೇ ಸಮುದಾಯವನ್ನು ಆರ್ಥಿಕ ಅಥವಾ ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಮ್ಮ ಸಂವಿಧಾನದಲ್ಲಿ ನಿರ್ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರೊಬ್ಬರು, ಮುಸ್ಲಿಂ ರಾಷ್ಟ್ರಗಳಿಂದ ಇಂಧನ ಮತ್ತು ತೈಲ ಬರುತ್ತವೆ. ಗಣಿತಕ್ಕೂ ಮುಸ್ಲಿಮರ ಕೊಡುಗೆ ಇದೆ. ಈಗ ಅವರು ಪೆಟ್ರೋಲ್, ಡೀಸೆಲ್ ಮತ್ತು ಗಣಿತವನ್ನು ಬಹಿಷ್ಕರಿಸುತ್ತಾರೆಯೇ?" ಎಂದು ಪ್ರಶ್ನಿಸಿದ್ದಾರೆ.