ಬೆಂಗಳೂರು: ಮಾಜಿ ಪ್ರಧಾನಿ ಹಾಗೂ ಜೆಡಿ(ಎಸ್) ವರಿಷ್ಠ ಎಚ್.ಡಿ. ದೇವೇಗೌಡ ಅವರು ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದು ಒಂದು ಬಲವಂತದ ಮದುವೆಯಾಗಿತ್ತು. ಅದು 'ದುರುದ್ದೇಶಪೂರಿತ ಸಂಬಂಧ'ವಾದ್ದರಿಂದ ರಾಷ್ಟ್ರೀಯ ಪಕ್ಷಕ್ಕೆ 'ವಿಚ್ಛೇದನ' ನೀಡಬೇಕಾಯಿತು ಎಂದು ಬುಧವಾರ ಹೇಳಿದ್ದಾರೆ.
ಇಂದು ರಾಜ್ಯಸಭೆಯಲ್ಲಿ ನಿವೃತ್ತಿಯಾಗಲಿರುವ ಸದಸ್ಯರಿಗೆ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ದೇವೇಗೌಡರು 'ಪ್ರೀತಿ ಮಾಡಿದ್ದು ನಮ್ಮನ್ನು, ಆದರೆ ಮದುವೆಯಾಗಿದ್ದು ಮೋದಿಯನ್ನು' ಎಂದು ಹಾಸ್ಯಮಯವಾಗಿ ಹೇಳಿದ್ದರು.
ಎಐಸಿಸಿ ಅಧ್ಯಕ್ಷರೂ ಆಗಿರುವ ಖರ್ಗೆ, ದೇವೇಗೌಡರೊಂದಿಗಿನ ತಮ್ಮ ಸಂಬಂಧವನ್ನು ನೆನಪಿಸಿಕೊಂಡರು ಮತ್ತು ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದು, ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದರು ಎಂದು ಹೇಳಿದ್ದರು.
ಖರ್ಗೆ ಅವರ ಹಾಸ್ಯಮಯ ಹೇಳಿಕೆಗೆ ಅದೇ ಶೈಲಿಯಲ್ಲಿಯಲ್ಲಿಯೇ ತಿರುಗೇಟು ನೀಡಿರುವ ದೇವೇಗೌಡರು, "ನನ್ನ ಆತ್ಮೀಯ ಮತ್ತು ದೀರ್ಘಕಾಲದ ಸ್ನೇಹಿತ ಮಲ್ಲಿಕಾರ್ಜುನ ಖರ್ಗೆ ಅವರು ಇಂದು ಸಂಸತ್ತಿನಲ್ಲಿ ನಾನು ಅವರನ್ನು(ಕಾಂಗ್ರೆಸ್) "ಪ್ರೀತಿ" ಮಾಡಿ, ಅಂತಿಮವಾಗಿ ಮೋದಿ ಜಿ(ಬಿಜೆಪಿ) ಅವರನ್ನು "ಮದುವೆಯಾದೆ" ಎಂದು ಹೇಳಿದ್ದಾರೆ. ಆದರೆ ನಾನು ಹಾಗೆ ಮಾಡಲು ಕಾರಣವೇನೆಂದು ಅವರಿಗೆ ಗೊತ್ತಿಲ್ಲ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ನಾನು ಯುಗಾದಿ ಹಬ್ಬಕ್ಕಾಗಿ ಬೆಂಗಳೂರಿಗೆ ಹೋಗುತ್ತಿದ್ದರಿಂದ, ರಾಜ್ಯಸಭೆಯಲ್ಲಿ ಖರ್ಗೆ ಅವರು ಮಾತನಾಡುವಾಗ ನಾನು ಸದನದಲ್ಲಿ ಇರಲಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ.
"ನನ್ನ ಸ್ನೇಹಿತನಿಗೆ ಮದುವೆಯ ಭಾಷೆಯಲ್ಲಿಯೇ ನಾನು ಪ್ರತಿಕ್ರಿಯಿಸುತ್ತೇನೆ. ಕಾಂಗ್ರೆಸ್ ಜೊತೆಗಿನದ್ದು ಪ್ರೀತಿಯಲ್ಲ, ಅದು "ಬಲವಂತದ ಮದುವೆ" ಮಾಡಿಕೊಂಡಿದ್ದೆ. ಆದರೆ ಅದು ದುರುದ್ದೇಶಪೂರಿತ ಸಂಬಂಧವಾದ್ದರಿಂದ ಮತ್ತು ಆ ಸಂಬಂಧದಲ್ಲಿ ಕಿರುಕುಳ, ಹಿಂಸೆ ಇದ್ದ ಕಾರಣ "ವಿಚ್ಛೇದನ" ನೀಡಬೇಕಾಯಿತು ಎಂದು ಮಾಜಿ ಪ್ರಧಾನಿ ತಿಳಿಸಿದ್ದಾರೆ.
ಖರ್ಗೆ ಸಿಎಂ ಮಾಡಲು ಬಯಸಿದ್ದೆ
2018 ರಲ್ಲಿ ಕಾಂಗ್ರೆಸ್ ತನ್ನ ನಾಯಕ ಗುಲಾಂ ನಬಿ ಆಜಾದ್ ಅವರನ್ನು ಕಳುಹಿಸಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಹುದ್ದೆಯನ್ನು ನೀಡಿತ್ತು ಎಂದು ಮಾಜಿ ಪ್ರಧಾನಿ, ಖರ್ಗೆ ಅವರಿಗೆ ನೆನಪಿಸಿದ್ದಾರೆ.
"ನಾನು ಇದಕ್ಕೆ ಒಪ್ಪಲಿಲ್ಲ." "ಖರ್ಗೆ ಅವರನ್ನು ಮುಖ್ಯಮಂತ್ರಿ ಮಾಡಬೇಕೆಂದು ನಾನು ಎಲ್ಲರ ಸಮ್ಮುಖದಲ್ಲಿ ಹೇಳಿದ್ದೆ. ಸಿದ್ದರಾಮಯ್ಯ ಕೂಡ ಅಲ್ಲಿದ್ದರು. ಆದಾಗ್ಯೂ, ಆಜಾದ್ ಅವರು ಕುಮಾರಸ್ವಾಮಿ ಅವರ ನಾಯಕತ್ವಕ್ಕೆ ಒತ್ತಾಯಿಸಿದರು. ಆದರೆ ಇಷ್ಟೆಲ್ಲಾ ಹಾಡು, ನೃತ್ಯ ಮತ್ತು ಮದುವೆಯ ನಂತರ ಅವರು 2019 ರಲ್ಲಿ ಏನು ಮಾಡಿದರು? ಅವರು ನಮ್ಮನ್ನು ಕೈಬಿಟ್ಟರು. ಎಷ್ಟು ಕಾಂಗ್ರೆಸ್ ಶಾಸಕರು ಬಿಜೆಪಿಗೆ ಪಕ್ಷಾಂತರ ಮಾಡಿದರು ಮತ್ತು ಅವರನ್ನು ಯಾರು ಕಳುಹಿಸಿದರು ಎಂಬುದು ಈಗ ಎಲ್ಲರಿಗೂ ಗೊತ್ತಿದೆ" ಎಂದು ಹೇಳಿದ್ದಾರೆ.
ಆ ದಿನ ಪಕ್ಷಾಂತರಕ್ಕೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧ ಕಾಂಗ್ರೆಸ್ ಕ್ರಮ ಕೈಗೊಂಡಿದ್ದರೆ, "ಇಂದು ನನ್ನ ಸ್ನೇಹಿತ ಖರ್ಗೆ ಎಐಸಿಸಿ ಅಧ್ಯಕ್ಷರಾಗಿ ಇನ್ನೂ ಉತ್ತಮ ಸ್ಥಾನದಲ್ಲಿರುತ್ತಿದ್ದರು" ಎಂದು ದೇವೇಗೌಡ ಹೇಳಿದ್ದಾರೆ.
ನಾನು ಕಾಂಗ್ರೆಸ್ ಮೈತ್ರಿಯನ್ನು ಬಿಟ್ಟು ಬರಲಿಲ್ಲ. ಅವರೇ ನಮ್ಮಿಂದ ದೂರ ಹೋದರು. ನನಗೆ ಬೇರೆ ದಾರಿಯಿಲ್ಲದೆ ಸುಸ್ಥಿರ ಮೈತ್ರಿಗಾಗಿ ಕಾಂಗ್ರೆಸ್ಗೆ ವಿಚ್ಛೇದನ ನೀಡಿ ಹೊರಬರಬೇಕಾಯಿತು ಎಂದು ದೇವೇಗೌಡರು ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.