ಮಿರ್ಜಾಪುರ: ನಾಲ್ಕು ತಿಂಗಳ ಹಿಂದೆ ನಾಯಿ ಕಚ್ಚಿದ್ದ ಬಾಲಕನೊರ್ವ ಸಂಪೂರ್ಣ ಲಸಿಕೆ ಪಡೆಯದ ಕಾರಣ ರೇಬೀಸ್ ಕಾಯಿಲೆಗೊಳಗಾಗಿದ್ದು, ರೋಗ ಉಲ್ಬಣಗೊಂಡು ಇದೀಗ ನಾಯಿಯಂತೆ ವರ್ತಿಸುತ್ತಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ರೇಬಿಸ್ ಕಾಯಿಲೆಯಿಂದ ಬಳಲುತ್ತಿರುವ ಬಾಲಕನನ್ನು ಕರಣ್ ಎಂದು ಗುರ್ತಿಸಲಾಗಿದ್ದು, ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗುತ್ತಿದೆ.
ಸುಮಾರು ನಾಲ್ಕು ತಿಂಗಳ ಹಿಂದೆ ಕರಣ್ಗೆ ಬೀದಿನಾಯಿ ಕಚ್ಚಿತ್ತು. ಬಡತನದ ಕಾರಣದಿಂದಾಗಿ ಆತನ ಕುಟುಂಬವು ಪೂರ್ಣ ಪ್ರಮಾಣದ ಚಿಕಿತ್ಸೆ ಕೊಡಿಸಲು ಸಾಧ್ಯವಾಗಲಿಲ್ಲ. ಕೇವಲ ಎರಡು ಡೋಸ್ ಲಸಿಕೆ ಪಡೆದಿದ್ದ ಬಾಲಕನಿಗೆ ಇತ್ತೀಚೆಗೆ ಇದ್ದಕ್ಕಿದ್ದಂತೆ ರೇಬಿಸ್ ರೋಗದ ತೀವ್ರ ಲಕ್ಷಣಗಳು ಕಾಣಿಸಿಕೊಂಡಿವೆ.
ಆದರೆ ಕುಟುಂಬಕ್ಕೆ ಇದರ ಅರಿವು ಇಲ್ಲದ ಕಾರಣ ದೆವ್ವವೇನೋ ಮೆಟ್ಟಿಕೊಂಡಿರಬೇಕೆಂದು ವಿವಿಧ ದೇವಸ್ಥಾನಗಳಿಗೆ ಸುತ್ತಿದ್ದಾರೆ. ಆದರೆ, ಬಾಲಕ ಗುಣಮುಖನಾಗಿಲ್ಲ.
ಕಾಯಿಲೆ ಉಲ್ಬಣಗೊಂಡಿದ್ದು, ಈ ವೇಳೆ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಪರೀಕ್ಷಿಸಿ ರೇಬಿಸ್ ಇರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕನನ್ನು ಚಿಕಿತ್ಸೆಗಾಗಿ ಉನ್ನತ ವೈದ್ಯಕೀಯ ಕೇಂದ್ರಕ್ಕೆ ತೆರಳುವಂತೆ ಸೂಚಿಸಿದ್ದಾರೆ. ಇದೀಗ ಬಾಲಕನ ಸ್ಥಿತಿ ಅತ್ಯಂತ ಗಂಭೀರವಾಗಿದೆ ಎನ್ನಲಾಗುತ್ತಿದೆ.
ರೇಬಿಸ್ ರೋಗ ಲಕ್ಷಣಗಳು ಒಮ್ಮೆ ಕಾಣಿಸಿಕೊಂಡರೆ ಬದುಕುಳಿಯುವ ಸಾಧ್ಯತೆ ತೀರಾ ಕಡಿಮೆ ಎಂದು ವೈದ್ಯರು ಹೇಳಿದ್ದಾರೆ.