ಲಖನೌ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆದ ಕುಂಭಮೇಳದಲ್ಲಿ ಖ್ಯಾತಿ ಪಡೆದ ಮೊನಾಲಿಸಾ ಭೋಸ್ಲೆ ಮದುವೆ ವಿವಾದ ತಕ್ಷಣಕ್ಕೆ ನಿಲ್ಲುವ ಯಾವುದೇ ಲಕ್ಷಣಗಳೂ ಕಾಣುತ್ತಿಲ್ಲ.. ಆಕೆಯನ್ನು ಹೀರಿಯಿನ್ ಮಾಡುವುದಾಗಿ ಹೇಳಿದ್ದ ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಇದು 'ಲವ್ ಜಿಹಾದ್' ಪಿತೂರಿ ಎಂದು ಕಿಡಿಕಾರಿದ್ದಾರೆ.
ಇತ್ತೀಚೆಗೆ ಎಲ್ಲರ ಇಚ್ಛೆಗೆ ವಿರುದ್ಧವಾಗಿ ಮೊನಾಲಿಸಾ, ಪೊಲೀಸ್ ರಕ್ಷಣೆಯಲ್ಲಿ ತನ್ನ ಮುಸ್ಲಿಂ ಗೆಳೆಯ ಫರ್ಮಾನ್ ಖಾನ್ ಅವರನ್ನು ವಿವಾಹವಾಗಿದ್ದರು.
ಈ ಬೆಳವಣಿಗೆ ಬಳಿಕ ಆಕೆಯ ವಿವಾಹವನ್ನು ಮೊನಾಲಿಸಾ ಅವರ ಕುಟುಂಬವು ವಿರೋಧಿಸಿದ್ದಲ್ಲದೇ, ಮದುವೆಯ ಬಗ್ಗೆ ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಮಧ್ಯೆ, ಮೊನಾಲಿಸಾ ಅವರ ಚೊಚ್ಚಲ ಚಿತ್ರ ‘ದಿ ಡೈರಿ ಆಫ್ ಮಣಿಪುರ’ದ ನಿರ್ದೇಶಕ ಸನೋಜ್ ಮಿಶ್ರಾ ಅವರ ಹೇಳಿಕೆ ಕೂಡ ಬೆಳಕಿಗೆ ಬಂದಿದ್ದು, ಇದು ಲವ್ ಜಿಹಾದ್ ಎಂದು ಅವರು ಕಿಡಿಕಾರಿದ್ದಾರೆ.
ನಿರ್ದೇಶಕ ಸನೋಜ್ ಮಿಶ್ರಾ ಅವರು ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹದ ಬಗ್ಗೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಮೊನಾಲಿಸಾ ಮತ್ತು ಫರ್ಮಾನ್ ಅವರ ವಿವಾಹವನ್ನು ‘ಲವ್ ಜಿಹಾದ್’ ಎಂದು ಆರೋಪಿಸಿದ್ದಾರೆ. ಈ ವಿಷಯವು ಇನ್ನು ಮುಂದೆ ಮದುವೆಗೆ ಸೀಮಿತವಾಗಿಲ್ಲ. ಇದರ ಹಿಂದೆ ದೊಡ್ಡ ಜಾಲದ ಪಿತೂರಿ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಫರ್ಮಾನ್ ಖಾನ್
‘ದೆಹಲಿ ಮತ್ತು ಮಧ್ಯಪ್ರದೇಶದಿಂದ ಹುಡುಗಿಯರು ಕಣ್ಮರೆಯಾಗುವ ಸುದ್ದಿಗಳು ಬರುತ್ತಲೇ ಇರುತ್ತವೆ. ಇದನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು. ಸಂಪೂರ್ಣವಾಗಿ ತನಿಖೆ ಮಾಡಿದರೆ, ಕೇರಳ ಸರ್ಕಾರ ಇದರಲ್ಲಿ ಪ್ರಮುಖ ಪಾತ್ರ ವಹಿಸಿರಬೇಕು.
ಸನಾತನ ಧರ್ಮವನ್ನು ಕೆಣಕುವಲ್ಲಿ ಕೇರಳ ಸರ್ಕಾರ ಯಾವಾಗಲೂ ಮುಂಚೂಣಿಯಲ್ಲಿದೆ. ಸಿಎಎ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಫರ್ಮಾನ್ ಖಾನ್ ಶಾರ್ಜೀಲ್ ಇಮಾಮ್ ಅವರೊಂದಿಗೆ ಹಲವು ಬಾರಿ ಕಾಣಿಸಿಕೊಂಡಿದ್ದರು’ ಎಂದು ಸನೋಜ್ ಆರೋಪಿಸಿದ್ದಾರೆ.
ಫರ್ಮಾನ್ ನಟನೇ ಅಲ್ಲ..
ಇದೇ ವೇಳೆ ‘ಫರ್ಮಾನ್ ಒಬ್ಬ ನಟನೇ ಅಲ್ಲ. ಅವರ ಯಾವುದೇ ಚಿತ್ರಗಳು ಬಿಡುಗಡೆಯಾಗಿಲ್ಲ. ಈ ವಿಷಯವನ್ನು ತನಿಖೆ ಮಾಡುವಂತೆ ಸನೋಜ್ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರಿಗೆ ಮನವಿ ಮಾಡಿದ್ದಾರೆ. ಏಕೆಂದರೆ ಇದು ಭಾರತದ ಪ್ರತಿಯೊಬ್ಬ ಹುಡುಗಿಯ ಸುರಕ್ಷತೆಯ ವಿಷಯವಾಗಿದೆ ಎಂದು ಸನೋಜ್ ಒತ್ತಾಯಿಸಿದ್ದಾರೆ.