ಥಾಣೆ: ಮನುಷ್ಯತ್ವವನ್ನೇ ಮರೆತ ದಾಳಿಕೋರರು ಕೋತಿಯ ಕುತ್ತಿಗೆಗೆ ಬಾಣ ಹೊಡೆದು ಗಾಯಗೊಳಿಸಿರುವ ಘಟನೆ ಮಹಾರಾಷ್ಟ್ರದಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಥಾಣೆಯಲ್ಲಿ ಈ ಘಟನೆ ನಡೆದಿದ್ದು, ಕೋತಿಗಳ ಕಾಟದಿಂದ ಬೇಸತ್ತ ಜನ ಮನಷ್ಯತ್ವ ಮರೆತು ಇದೀಗ ಕೋತಿಗಳ ಮೇಲೆಯೇ ಹಲ್ಲೆಗೆ ಮುಂದಾಗಿದ್ದಾರೆ. ಈ ಪೈಕಿ ಓರ್ವ ವ್ಯಕ್ತಿ ಬಿಟ್ಟ ಬಾಣವೊಂದು ಕೋತಿ ಮರಿಯ ಕುತ್ತಿಗೆ ಮಾರ್ಗವಾಗಿ ದವಡೆಯನ್ನೂಸೀಳಿಕೊಂಡು ಹೊರಬಂದಿರುವ ವಿದ್ರಾವಕ ಘಟನೆ ನಡೆದಿದೆ.
ಗಾಯಗೊಂಡ ಪ್ರಾಣಿ, ಬಾನೆಟ್ ಮಕಾಕ್ ಜಾತಿಯ ಕೋತಿಯನ್ನು ಮೊದಲು ಸ್ಥಳೀಯ ನಿವಾಸಿಗಳು ನೋಡಿದರು. ಬಳಿಕ ಥಾಣೆಯ ವನ್ಯಜೀವಿ ಕಲ್ಯಾಣ ಸಂಘ (WWA),ಕ್ಕೆ ಮಾಹಿತಿ ನೀಡಿದ್ದು, ಸುದ್ದಿ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಸಿಬ್ಬಂದಿ ಯೇಯೂರ್ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಾಯದಿಂದ, ರಕ್ಷಣಾ ತಂಡವು 10-15 ನಿಮಿಷಗಳಲ್ಲಿ ಮಂಗವನ್ನು ಸುರಕ್ಷಿತವಾಗಿ ಸೆರೆಹಿಡಿದು ಆಸ್ಪತ್ರೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ.
ಬಾಣವು ಕುತ್ತಿಗೆಯ ಮೂಲಕ ಪ್ರವೇಶಿಸಿ ದವಡೆಯ ಬಳಿ ನಿರ್ಗಮಿಸಿದೆ. ಮಂಗವನ್ನು ಐಸಿಯು ಸೌಲಭ್ಯಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಲ್ಲಿನ ಪಶುವೈದ್ಯ ತಜ್ಞರು ಅದರ ಚಿಕಿತ್ಸೆಯನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
4 ದಿನದಲ್ಲಿ 2ನೇ ಪ್ರಕರಣ
ಇನ್ನು ಮಂಗಗಳ ಮೇಲಿನ ಈ ದಾಳಿ ಪ್ರಕರಣ ಇದೇ ಮೊದಲೇನಲ್ಲ.. ಈ ಹಿಂದೆಯೂ ಕೂಡ ಇಂತಹುದೇ ಪ್ರಕರಣ ವರದಿಯಾಗಿತ್ತು. ಆ ಪ್ರಕರಣ ನಡೆದ 4 ದಿನಗಳ ಅಂತರದಲ್ಲಿ ಇದು 2ನೇ ಪ್ರಕರಣ ದಾಖಲಾದಂತಾಗಿದೆ. ನಾಲ್ಕು ದಿನಗಳ ಹಿಂದೆ, ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಬಳಿ ಮತ್ತೊಂದು ಮಂಗ ತೀವ್ರವಾಗಿ ಗಾಯಗೊಂಡಿರುವುದು ಕಂಡುಬಂದಿತ್ತು.
ಆ ಘಟನೆಯಲ್ಲೂ, ಬಾಣವು ಕೋತಿಯ ಹೊಟ್ಟೆಗೆ ಚುಚ್ಚಿತ್ತು. ನಾಲ್ಕು ದಿನಗಳಲ್ಲಿ ಈ ಪ್ರದೇಶದಲ್ಲಿ ನಡೆದ ಎರಡನೇ ದಾಳಿ ಇದಾಗಿದೆ. ಪುನರಾವರ್ತಿತ ಘಟನೆಗಳು ಪ್ರಾಣಿ ಕಲ್ಯಾಣ ಗುಂಪುಗಳು ಮತ್ತು ಅರಣ್ಯ ಅಧಿಕಾರಿಗಳಲ್ಲಿ ಕಳವಳವನ್ನು ಹುಟ್ಟುಹಾಕಿವೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ತನಿಖೆ
ಇನ್ನು ಬೇಟೆಗಾರರಿಂದ ದಾಳಿ ನಡೆದಿರಬಹುದು ಎಂದು ಅರಣ್ಯ ಅಧಿಕಾರಿಗಳು ಶಂಕಿಸಿದ್ದಾರೆ. ಈ ಸಂಬಂಧ ಮಹಾರಾಷ್ಟ್ರ ಅರಣ್ಯ ಇಲಾಖೆ, ಥಾಣೆ ವಲಯವು ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಗುರುತಿಸಲು ಮತ್ತು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ.
ದಾಳಿಕೋರನನ್ನು ಪತ್ತೆಹಚ್ಚಲು ಅರಣ್ಯ ಅಧಿಕಾರಿಗಳು ಹತ್ತಿರದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಅಪರಾಧಿಯನ್ನು ಶೀಘ್ರದಲ್ಲೇ ನ್ಯಾಯಕ್ಕೆ ತರಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದ್ದಾರೆ.