ನವದೆಹಲಿ: “ಅಮೆರಿಕಾ ದಾಳಿ ಮಾಡಿದರೆ ಭಾರತದ ನಗರಗಳ ಮೇಲೆ ಬಾಂಬ್ ಹಾಕುತ್ತೇವೆ” ಎಂಬ ಪಾಕಿಸ್ತಾನದ ಮಾಜಿ ರಾಯಭಾರಿ ಅಬ್ದುಲ್ ಬಾಸಿತ್ ಅವರ ಹೇಳಿಕೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಭಾರತೀಯ ಜನತಾ ಪಕ್ಷ, ಪಾಕಿಸ್ತಾನ ಭಯೋತ್ಪಾದನೆಯಿಲ್ಲದೆ ಬದುಕಲು ಸಾಧ್ಯವಿಲ್ಲ ಎಂದು ಕಿಡಿಕಾರಿದೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ತುಹಿನ್ ಸಿನ್ಹಾ ಅವರು ಮಾತನಾಡಿ, ದೆಹಲಿ ಮತ್ತು ಮುಂಬೈ ಮೇಲೆ ದಾಳಿ ಮಾಡುವ ಬೆದರಿಕೆ ಪಾಕಿಸ್ತಾನದ ಮನೋಭಾವ ಇನ್ನೂ ಬದಲಾಗಿಲ್ಲ ಎಂಬುದನ್ನು ತೋರಿಸುತ್ತದೆ. ಆ ದೇಶ ಮಾನಸಿಕ ಸಮತೋಲನ ಕಳೆದುಕೊಂಡಂತಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಾಕಿಸ್ತಾನವು ಭಯೋತ್ಪಾದಕ ರಾಷ್ಟ್ರ ಎಂಬುದನ್ನು ಹೇಳಬೇಕಾದ ಅಗತ್ಯವಿಲ್ಲ. ಆ ದೇಶದ ಸೇನಾ ನಾಯಕತ್ವ ಮತ್ತು ರಾಜತಾಂತ್ರಿಕರು ಬಳಸುತ್ತಿರುವ ಭಾಷೆ ನೋಡಿದರೆ, ಭಯೋತ್ಪಾದನೆ ಅವರ ಸ್ವಭಾವದಲ್ಲೇ ಬೆಳೆದಿದೆ ಎಂಬುದನ್ನು ತೋರಿಸುತ್ತದೆ.
ಕಳೆದ ವರ್ಷ, ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರು ಅಗತ್ಯವಿದ್ದರೆ, ಜಾಮ್ನಗರದಲ್ಲಿರುವ ತೈಲ ಸಂಸ್ಕರಣಾಗಾರಗಳನ್ನು ಸ್ಫೋಟಿಸಲಾಗುವುದು ಎಂದು ಅಮೆರಿಕಕ್ಕೆ ಹೇಳಿದ್ದರು. ಈಗ, ಅದೇ ದೇಶದ ಮಾಜಿ ರಾಯಭಾರಿ ಈ ರೀತಿಯ ಭಾಷೆಯನ್ನು ಬಳಸಿದ್ದಾರೆ. ಭಯೋತ್ಪಾದನೆ ಅವರ ಸ್ವಭಾವದಲ್ಲಿ ಬೇರೂರಿದೆ ಎಂಬುದನ್ನು ಇದು ತೋರಿಸುತ್ತದೆ. ಭಯೋತ್ಪಾದನೆ ಇಲ್ಲದೆ ಪಾಕಿಸ್ತಾನ ಬದುಕಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಅಬ್ದುಲ್ ಬಾಸಿತ್ ಅವರು, ಅಮೆರಿಕಾ ಪಾಕಿಸ್ತಾನದ ಅಣು ಸ್ಥಾವರಗಳ ಮೇಲೆ ದಾಳಿ ನಡೆಸಿದರೆ, ಅದರ ಪ್ರತಿಯಾಗಿ ಭಾರತದಲ್ಲಿನ ಪ್ರಮುಖ ನಗರಗಳಾದ ದೆಹಲಿ ಮತ್ತು ಮುಂಬೈ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದರು.
ಯಾರಾದರೂ ನಮನ್ನು ಕೆಟ್ಟ ದಷ್ಟಿಯಿಂದ ನೋಡಿದರೆ ಪಾಕಿಸ್ತಾನಕ್ಕೆ ಭಾರತದ ಮೇಲೆ ಎಲ್ಲಿ ಬೇಕಾದರೂ ದಾಳಿ ಮಾಡುವುದನ್ನು ಬಿಟ್ಟು ಬೇರೆ ದಾರಿ ಇರುವುದಿಲ್ಲ. ನಾವು ಹಾಗೆ ಆಗಬಾರದು ಎಂದು ಬಯಸುತ್ತೇವೆ, ಭಾರತವೂ ಹಾಗೆ ಬಯಸುವುದಿಲ್ಲ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಈ ಹೇಳಿಕೆ ಆಕ್ರೋಶಕ್ಕೆ ಕಾರಣವಾಗಿದೆ.