ಮುಂಬೈ: 100ಕ್ಕೂ ಹೆಚ್ಚು ಮಹಿಳೆಯರ ಮೇಲಿನ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಂಧನಕ್ಕೀಡಾಗಿರುವ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ನನ್ನು ಗಲ್ಲಿಗೇರಿಸಬೇಕು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಸುಧೀರ್ ಮುಂಗಂಟಿವಾರ್ ಒತ್ತಾಯಿಸಿದ್ದಾರೆ. ಅತ್ಯಾಚಾರ ಆರೋಪಗಳ ಸಂಬಂಧ ಮಾರ್ಚ್ 18ರಂದು ಖರತ್ ನನ್ನು ಬಂಧಿಸಲಾಗಿತ್ತು. ಆತನ ವಿರುದ್ಧ ಲೈಂಗಿಕ ದೌರ್ಜನ್ಯ, ಸುಲಿಗೆ ಮತ್ತು ಆಕ್ಷೇಪಾರ್ಹ ವಸ್ತುಗಳ ಪ್ರಸರಣದ ಆರೋಪದ ಮೇಲೆ ಹಲವಾರು ದೂರುಗಳು ಬಂದಿದ್ದು ಇದುವರೆಗೆ ಎಂಟು ಎಫ್ಐಆರ್ ದಾಖಲಿಸಲಾಗಿದೆ.
ನಾನು ಕಾನೂನು ಪಾಲಿಸುವ ನಾಗರಿಕ, ಆದರೆ ಅಶೋಕ್ ಖರತ್ ಅವರ ಅನಾಗರಿಕ ಕೃತ್ಯಗಳನ್ನು ನೋಡಿದ ಮತ್ತು ಕೇಳಿದ ನಂತರ, ಅವನಿಗೆ ಯಾವುದೇ ಕಾನೂನು ವಿನಾಯ್ತಿ ಸಿಗಬಾರದು ಎಂದು ನಾನು ಭಾವಿಸುತ್ತೇನೆ. ಕೋರ್ಟ್ ಬೇಡ, ಯಾವುದೇ ವಿಚಾರಣೆ ಬೇಡ. ಅಂತಹ ವ್ಯಕ್ತಿಯನ್ನು ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು. ಆತ ಛತ್ರಪತಿ ಶಿವಾಜಿ ಮಹಾರಾಜರ ಪರಂಪರೆಯನ್ನು ಅವಮಾನಿಸಿದ್ದಾನೆ. ಮಹಿಳೆಯರನ್ನು ಅಗೌರವಿಸಿದ್ದಾನೆ. ಇಂತಹ ಕೃತ್ಯಗಳು ಮಹಾರಾಷ್ಟ್ರ ಮತ್ತು ಅದರ ಮೌಲ್ಯಗಳಿಗೆ ಮಾಡಿದ ಅವಮಾನ ಎಂದು ಸುಧೀರ್ ಮುಂಗಂಟಿವಾರ್ ಹೇಳಿದ್ದಾರೆ.
ಬಲವಾದ ಕ್ರಮ ಕೈಗೊಳ್ಳುವುದರಿಂದ ಇತರ ಸ್ವಯಂ ಘೋಷಿತ ದೇವಮಾನವರಿಗೆ ಸಂದೇಶ ರವಾನೆಯಾಗುತ್ತದೆ. ಡಾ. ಬಾಬಾಸಾಹೇಬ್ ಅಂಬೇಡ್ಕರ್, ಸಾವಿತ್ರಿಬಾಯಿ ಫುಲೆ ಮತ್ತು ಶಾಹು ಮಹಾರಾಜ್ ಸೇರಿದಂತೆ ಸುಧಾರಕರ ಬೋಧನೆಗಳನ್ನು ಶಾಲೆಗಳಲ್ಲಿ ನೀಡಲಾಗುತ್ತಿದ್ದರೂ ಧರ್ಮಕ್ಕೆ ಅಪಖ್ಯಾತಿ ತರುವ ಇಂತಹ ಘಟನೆಗಳು ನಡೆಯುತ್ತಲೇ ಇವೆ ಎಂದು ಅವರು ಹೇಳಿದರು.
ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸ್ಥಾನಕ್ಕೆ ಎನ್ಸಿಪಿ ನಾಯಕಿ ರೂಪಾಲಿ ಚಕಂಕರ್ ಅವರ ರಾಜೀನಾಮೆ ಕುರಿತು ಮಾತನಾಡಿದ ಅವರು, ಗಂಭೀರ ಆರೋಪಗಳು ಮುನ್ನೆಲೆಗೆ ಬಂದಾಗ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದರು. ತನಿಖೆಗಳ ಮೇಲೆ ಪ್ರಭಾವ ಬೀರದಂತೆ ಇದು ಖಚಿತಪಡಿಸುತ್ತದೆ ಎಂದು ಅವರು ಹೇಳಿದರು.