ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತರೂಢ ಡಿಎಂಕೆ ಭಾನುವಾರ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಅಧಿಕಾರ ಉಳಿಸಿಕೊಳ್ಳಲು ಮಹಿಳೆಯರಿಗೆ ತಿಂಗಳಿಗೆ 2,000 ರೂ. ಸೇರಿದಂತೆ ಭರಪೂರ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ.
ಇಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. 8ನೇ ತರಗತಿ ವರೆಗೆ ಉಪಾಹಾರ ಯೋಜನೆ ವಿಸ್ತರಿಸುವುದು ಮತ್ತು ಮಹಿಳೆಯರಿಗೆ ಮಾಸಿಕ ಸಹಾಯಧನವನ್ನು 2,000 ರೂ.ಗಳಿಗೆ ಹೆಚ್ಚಿಸುವುದು ಸೇರಿದಂತೆ ಪ್ರಮುಖ ಕಲ್ಯಾಣ ಕ್ರಮಗಳನ್ನು ಘೋಷಿಸಿದರು.
ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಿಎಂಕೆ ಅಧ್ಯಕ್ಷ ಸ್ಟಾಲಿನ್ ಅವರು, ದ್ರಾವಿಡ ಮಾದರಿಯ ಆಡಳಿತದಲ್ಲಿ ತಮಿಳುನಾಡು ಪ್ರಮುಖ ರಾಜ್ಯವಾಗಿ ಹೊರಹೊಮ್ಮಿದೆ ಎಂದರು. ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ಎತ್ತಿ ತೋರಿಸಿದರು ಮತ್ತು ಡಿಎಂಕೆ ಏಳನೇ ಅವಧಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಪ್ರಣಾಳಿಕೆ ಸಾಮಾನ್ಯವಾಗಿ "ಹೀರೋ" ಆಗಿರುತ್ತದೆ. ಆದರೆ ಈ ಬಾರಿ ಅದು "ಸೂಪರ್ಸ್ಟಾರ್" ಆಗಿದೆ ಎಂದು ಸ್ಟಾಲಿನ್ ಹೇಳಿದರು.
ಭಾರತದಲ್ಲಿ ಬೇರೆ ಯಾವುದೇ ರಾಜ್ಯವು ತಮಿಳುನಾಡಿನಷ್ಟು ಪರಿಣಾಮಕಾರಿಯಾಗಿ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿಲ್ಲ ಮತ್ತು ತಮ್ಮ ಸರ್ಕಾರ ಇತರರಿಗೆ ಮಾದರಿ ಎಂದು ವಿವರಿಸಿದರು.
ಡಿಎಂಕೆ ಹೊಸದಾಗಿ 'ಇಲ್ಲಥರಸಿ' ಯೋಜನೆ ಘೋಷಿಸಿದ್ದು, ಇದು ಮಹಿಳೆಯರು ಏನಾದರೂ ಹೊಸದನ್ನು ಖರೀದಿಸಲು ಅಥವಾ ದೂರದರ್ಶನದಂತಹ ಗೃಹೋಪಯೋಗಿ ವಸ್ತುಗಳನ್ನು ಬದಲಾಯಿಸಲು ರೂ. 8,000 ಮೌಲ್ಯದ ಕೂಪನ್ ನೀಡುವುದಾಗಿ ಭರವಸೆ ನೀಡಿದೆ.
ಸ್ವಸಹಾಯ ಗುಂಪುಗಳ ಸದಸ್ಯರಾಗಿರುವ ಮಹಿಳೆಯರಿಗೆ ಉದ್ಯಮಶೀಲತೆಯನ್ನು ಬೆಂಬಲಿಸಲು ಸಬ್ಸಿಡಿ ಮತ್ತು 5 ಲಕ್ಷದವರೆಗೆ ಬ್ಯಾಂಕ್ ಸಾಲ ಸಹಾಯ ನೀಡಲಾಗುವುದು ಎಂದು ಹೇಳಿದೆ.
ಇನ್ನೂ ಪ್ರಣಾಳಿಕೆಯಲ್ಲಿ ಮುಖ್ಯಮಂತ್ರಿಗಳ ಉಪಾಹಾರ ಯೋಜನೆಯನ್ನು 8ನೇ ತರಗತಿಯವರೆಗೆ ವಿಸ್ತರಿಸುವುದಾಗಿ ಭರವಸೆ ನೀಡಲಾಗಿದೆ. ಅಲ್ಲದೆ ಹೆಣ್ಣು ಮಕ್ಕಳಿಗೆ ನೀಡುವ ಮಾಸಿಕ ಉನ್ನತ ಶಿಕ್ಷಣ ಸಹಾಯ ಧನವನ್ನು ರೂ. 1,000 ರಿಂದ ರೂ. 1,500 ಕ್ಕೆ ಹೆಚ್ಚಿಸುವುದಾಗಿ ಹೇಳಿದೆ.
ವೃದ್ಧರ ಪಿಂಚಣಿಯನ್ನು 1,200 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸಲಾಗುವುದು ಮತ್ತು ಅಂಗವಿಕಲರ ಪಿಂಚಣಿಯನ್ನು 1,500 ರೂ.ಗಳಿಂದ 2,500 ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಕೃಷಿಗೆ ಸಂಬಂಧಿಸಿದಂತೆ, ಡಿಎಂಕೆ ಭತ್ತದ ಖರೀದಿಯನ್ನು ಕ್ವಿಂಟಲ್ಗೆ 3,500 ರೂ.ಗಳಿಗೆ ಹೆಚ್ಚಿಸುವುದಾಗಿ ಮತ್ತು ಕಬ್ಬು ಖರೀದಿ ಬೆಲೆಯನ್ನು ಪ್ರತಿ ಟನ್ಗೆ 4,500 ರೂ.ಗಳಿಗೆ ನಿಗದಿಪಡಿಸುವುದಾಗಿ ಭರವಸೆ ನೀಡಿದೆ. ಅಲ್ಲದೆ ಉಚಿತ ವಿದ್ಯುತ್ ಯೋಜನೆಯಡಿಯಲ್ಲಿ, ಪಕ್ಷವು ರೈತರಿಗೆ ಮೀಟರ್ ಇಲ್ಲದ ಆಧುನಿಕ ಪಂಪ್ಸೆಟ್ಗಳ ಜೊತೆಗೆ ಐದು ವರ್ಷಗಳಲ್ಲಿ 10 ಲಕ್ಷ ಹೊಸ ಮನೆಗಳ ನಿರ್ಮಾಣ ಮಾಡುವ ಭರವಸೆ ನೀಡಿದೆ.