ಮುಂಬೈ: ರೇಮಂಡ್ ಗ್ರೂಪ್ನ ಮಾಜಿ ಅಧ್ಯಕ್ಷ ಹಾಗೂ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಉದ್ಯಮಿ ವಿಜಯಪತ್ ಸಿಂಘಾನಿಯಾ (87) ಅವರು ಶನಿವಾರ ನಿಧನರಾಗಿದ್ದಾರೆ.
ಸಿಂಘಾನಿಯಾ ಅವರು ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ರವಿವಾರ ಅವರ ಅಂತ್ಯಕ್ರಿಯೆಗಳು ನೆರವೇರಲಿವೆ ಎಂದು ರೇಮಂಡ್ ಗ್ರೂಪ್ ವಕ್ತಾರರು ತಿಳಿಸಿದ್ದಾರೆ.
ಅವರ ನಿಧನದ ವಿಚಾರವನ್ನು ಮಗ ಹಾಗೂ ರೇಮಂಡ್ ಗ್ರೂಪ್ ನ ಪ್ರಸ್ತುತ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಗೌತಮ್ ಸಿಂಘಾನಿಯಾ ಅವರು ಸಾಮಾಜಿಕ ಜಾಲತಾಣ ‘X’ನಲ್ಲಿ ಪ್ರಕಟಿಸಿದ್ದಾರೆ.
1980-2000ರವರೆಗೆ ರೇಮಂಡ್ನ ನೇತೃತ್ವ ವಹಿಸಿದ್ದ ವಿಜಯಪತ್ ಸಿಂಘಾನಿಯಾ ಅವರು, ಜವಳಿ ಉದ್ಯಮದಲ್ಲಿ ಪ್ರಸಿದ್ಧರಾಗಿದ್ದರು.
ವಿಜಯಪತ್ ಸಿಂಘಾನಿಯಾ ಅವರ ನೇತೃತ್ವದಲ್ಲಿ ರೇಮಂಡ್ ಕಂಪನಿ ದೇಶದ ಪ್ರಮುಖ ಸೂಟಿಂಗ್ ಫ್ಯಾಬ್ರಿಕ್ ಬ್ರ್ಯಾಂಡ್ ಆಗಿ ಬೆಳೆದಿತು. ದೇಶದಷ್ಟೇ ಅಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಕಂಪನಿಯನ್ನು ವಿಸ್ತರಿಸಿ, ಉನ್ನತ ಮಟ್ಟದ ವಸ್ತ್ರ ಉತ್ಪಾದನೆಯಲ್ಲಿ ರೇಮಂಡ್ಗೆ ವಿಶಿಷ್ಟ ಸ್ಥಾನಮಾನವನ್ನು ತಂದಿದ್ದರು.
ಉದ್ಯಮದ ಜೊತೆಗೆ ವಿಮಾನಯಾನದಲ್ಲೂ ಅಪಾರ ಆಸಕ್ತಿ ಹೊಂದಿದ್ದರು. ಹಾಟ್ ಏರ್ ಬಲೂನಿಂಗ್ನಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿ, ಮೈಕ್ರೋಲೈಟ್ ವಿಮಾನದಲ್ಲಿ ವಿಶ್ವ ಸುತ್ತಿದ ಮೊದಲ ಭಾರತೀಯರಾಗಿ ಖ್ಯಾತಿ ಗಳಿಸಿದ್ದರು.
ಇತ್ತೀಚಿನ ವರ್ಷಗಳಲ್ಲಿ ಕುಟುಂಬದೊಳಗಿನ ಆಸ್ತಿ ಹಾಗೂ ವ್ಯವಹಾರ ಸಂಬಂಧಿತ ವಿವಾದಗಳಿಂದಲೂ ಅವರು ಸುದ್ದಿಯಲ್ಲಿದ್ದರು. ಈ ವಿಚಾರಗಳು ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದವು.
ಸಿಂಘಾನಿಯಾ ಅವರ ನಿಧನಕ್ಕೆ ಉದ್ಯಮಿಗಳು, ರಾಜಕೀಯ ನಾಯಕರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಭಾರತೀಯ ವಸ್ತ್ರೋದ್ಯಮದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ ದೂರದರ್ಶಿ ಉದ್ಯಮಿಯಾಗಿ ವಿಜಯಪತ್ ಸಿಂಘಾನಿಯಾ ಅವರನ್ನು ಸ್ಮರಿಸಲಾಗುತ್ತಿದೆ.