ಕೊಚ್ಚಿನ್: ಕೇರಳ ಚುನಾವಣೆ ನಿಮಿತ್ತ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದ ವೇಳೆ ದಿಢೀರ್ ಕಾಣಿಸಿಕೊಂಡ ಹೊಗೆ ಕೆಲಕಾಲ ಆತಂಕ ಸೃಷ್ಟಿಸಿತ್ತು.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ಜನತಾ ಪಕ್ಷದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ನಿಗದಿಯಾಗಿದ್ದ ಸ್ಥಳದಲ್ಲಿ ದಿಢೀರ್ ಹೊಗೆ ಕಾಣಿಸಿಕೊಂಡಿದ್ದು, ಹೊಗೆ ಎಲ್ಲಿಂದ ಬರುತ್ತಿದೆ ಎಂಬುದು ತಿಳಿಯದೇ ಅಧಿಕಾರಿಗಳು ಕೆಲಕಾಲ ಆತಂಕಕ್ಕೊಳಗಾಗಿದ್ದರು.
ಅಧಿಕಾರಿಗಳ ಪರಿಶೀಲನೆ ಬಳಿಕ ಅಳವಡಿಸಲಾಗಿದ್ದ ಆಂಪ್ಲಿಫೈಯರ್ ನಿಂದ ಹೊಗೆ ಬರುತ್ತಿದೆ ಎಂದು ಕಂಡುಕೊಂಡಿದ್ದಾರೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಆಂಪ್ಲಿಫೈಯರ್ ನಿಂದ ಹೊಗೆ ಬರಲಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಪ್ರಧಾನಿ ಪಾಲಕ್ಕಾಡ್ ನ ರ್ಯಾಲಿ ಸ್ಥಳವಾದ ಕೊಟ್ಟಮೈಡನಂಗೆ ಆಗಮಿಸುವ ಸ್ವಲ್ಪ ಸಮಯದ ಮೊದಲು ಈ ಘಟನೆ ಸಂಭವಿಸಿದೆ. ಧ್ವನಿ ವ್ಯವಸ್ಥೆ ನಿರ್ವಾಹಕರು ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ ಆಂಪ್ಲಿಫೈಯರ್ ಅನ್ನು ತೆಗೆದುಹಾಕಿದರು.
ಪ್ರಧಾನಿ ಮೋದಿ ಪಾಲಕ್ಕಾಡ್ ತಲುಪುವ ಸುಮಾರು ಅರ್ಧ ಗಂಟೆ ಮೊದಲು, ಮೈಕ್ರೊಫೋನ್ ಗಳಿಗೆ ಸಂಪರ್ಕಗೊಂಡಿರುವ ಆಂಪ್ಲಿಫೈಯರ್ ನಿಂದ ಹೊಗೆ ಬರುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಹೊಗೆಯನ್ನು ಗಮನಿಸಿದ ತಕ್ಷಣ ಕ್ರಮ ಕೈಗೊಳ್ಳಲಾಯಿತು. ಓವರ್ ಲೋಡ್ ನಿಂದ ಆಂಪ್ಲಿಫೈಯರ್ ಹೆಚ್ಚು ಬಿಸಿಯಾಗಿರಬಹುದು ಎಂದು ಮೈಕ್ ನಿರ್ವಾಹಕರು ಹೇಳಿದರು. ಮತ್ತೊಂದು ಆಂಪ್ಲಿಫೈಯರ್ ಅನ್ನು ತ್ವರಿತವಾಗಿ ಸ್ಥಳದಲ್ಲಿ ಇರಿಸಲಾಯಿತು ಮತ್ತು ಸಮಸ್ಯೆಯನ್ನು ಪರಿಹರಿಸಲಾಯಿತು ಎಂದು ಅಧಿಕಾರಿಗಳು ಹೇಳಿದರು.
ರ್ಯಾಲಿಯನ್ನು ವೀಕ್ಷಿಸಲು ಕೊಟ್ಟಮೈಡನಂನಲ್ಲಿ ಕಿಕ್ಕಿರಿದ ಜನಸಮೂಹವೇ ಜಮಾಯಿಸಿತ್ತು.