ನವದೆಹಲಿ: ಪಂಚರಾಜ್ಯಗಳ ಚುನಾವಣೆಯಲ್ಲಿ ಕೇರಳ ಹೊರತುಪಡಿಸಿದರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್ ನೇತೃತ್ವದ INDI ಕೂಟ ಹೀನಾಯ ಪ್ರದರ್ಶನ ತೋರಿರುವಂತೆಯೇ ಅದರ ವಿರುದ್ಧ ಬಿಜೆಪಿ ತೀವ್ರ ವಾಗ್ದಾಳಿ ನಡೆಸಿದೆ.
ಪಂಚ ರಾಜ್ಯಗಳ ಚುನವಣಾ ಫಲಿತಾಂಶದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿ ಭಾರಿಸಿದ್ದರೆ, ಪುದುಚೇರಿಯಲ್ಲಿ ಎನ್ ಡಿಎ ಮೈತ್ರಿಕೂಟ ಅಧಿಕಾರದ ಗುದ್ದುಗೆ ಏರುತ್ತಿದೆ. ತಮಿಳುನಾಡಿನಲ್ಲಿ ನಟ ವಿಜಯ್ ರ ಟಿವಿಕೆ ಪಕ್ಷ ಮ್ಯಾಜಿಕ್ ನಂಬರ್ ನತ್ತ ದಾಪುಗಾಲಿರಿಸಿದ್ದು, ಕಾಂಗ್ರೆಸ್ ಮತ್ತು ಡಿಎಂಕೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕೇರಳದಲ್ಲಿ ಮಾತ್ರ ಯುಡಿಎಫ್ ಜೊತೆ ಸೇರಿ ಕಾಂಗ್ರೆಸ್ ಅಧಿಕಾರ ರಚನೆಯತ್ತ ಸಾಗಿದೆ.
ಈ ಬೆಳವಣಿಗೆಗಳ ನಡುವೆಯೇ ಬಿಜೆಪಿ ರಾಷ್ಟ್ರೀಯ ವಕ್ತಾರ ಶೆಹಜಾದ್ ಪೂನವಾಲ್ಲಾ INDI ಕೂಟದ ವಿರುದ್ಧ ಕೆಂಡಕಾರಿದ್ದಾರೆ. ಈ ಕುರಿತು ಎಕ್ಸ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, INDI ಕೂಟಕ್ಕೆ ಭವಿಷ್ಯವೇ ಇಲ್ಲ ಎಂದು ಹೇಳಿದ್ದಾರೆ.
'ಈ ಚುನಾವಣೆಯ ದೊಡ್ಡ ತೀರ್ಮಾನವೆಂದರೆ 'INDI' ಮೈತ್ರಿಕೂಟ ಸಂಪೂರ್ಣವಾಗಿ ಮುರಿದು ಕಣ್ಮರೆಯಾಗಿದೆ. ರಾಹುಲ್ ಗಾಂಧಿ ಮೈತ್ರಿಕೂಟವನ್ನು ಮುನ್ನಡೆಸುವಲ್ಲಿ ವಿಫಲರಾಗಿದ್ದಾರೆ. ರಾಹುಲ್ ಗಾಂಧಿ 'INDI' ಮೈತ್ರಿಕೂಟವನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಇಡೀ ಚುನಾವಣೆಯಲ್ಲಿ ತೋರಿಸಲಾಗಿದೆ" ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಲ್ಲಿ ಮತ ಎಣಿಕೆ, ಅಲ್ಲಿ ರಾಹುಲ್ ಗಾಂಧಿ ವಿದೇಶದಲ್ಲಿ ರಜಾ-ಮಜಾ
ಅಂತೆಯೇ ಮತ ಎಣಿಕೆ ದಿನದಂದು ರಾಹುಲ್ ಗಾಂಧಿ ಇಲ್ಲದಿರುವುದಕ್ಕೆ ಅವರು ಟೀಕಿಸಿದರು. "ಇಂದು ಚುನಾವಣಾ ಫಲಿತಾಂಶಗಳು ಬರುತ್ತಿವೆ ಮತ್ತು ರಾಹುಲ್ ಗಾಂಧಿ ಮತ್ತೆ ರಜಾದಿನಗಳನ್ನು ಆಚರಿಸಲು ವಿದೇಶದಲ್ಲಿದ್ದಾರೆ. ಮೈತ್ರಿಕೂಟದ ಪಾಲುದಾರರ ನಡುವೆ ಯಾವುದೇ ಸಮನ್ವಯವಿರಲಿಲ್ಲ. ವಿರೋಧ ಪಕ್ಷದ ಬಣದಲ್ಲಿ ಒಗ್ಗಟ್ಟು ಮತ್ತು ನಿರ್ದೇಶನದ ಕೊರತೆಯಿದೆ ಎಂದು ಹೇಳಿದರು.
"ಈಗ ದೇಶದಲ್ಲಿ 'INDI' ಮೈತ್ರಿಕೂಟ ಎಂಬುದೇ ಇಲ್ಲ. ಅದಕ್ಕೆ ಭವಿಷ್ಯವಿಲ್ಲ. 'INDI' ಮೈತ್ರಿಕೂಟವನ್ನು ತಿರಸ್ಕರಿಸಿ" ಎಂದು ಅವರು ಹೇಳಿದರು.
ಬಿಜೆಪಿಯ ಬೆಳೆಯುತ್ತಿರುವ ಹೆಜ್ಜೆಗುರುತಿಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪೂನವಾಲ್ಲಾ ಮನ್ನಣೆ ನೀಡಿದರು. "ದೇಶದಲ್ಲಿ 12 ವರ್ಷಗಳ ಕಾಲ ನಿರಂತರವಾಗಿ ಅಧಿಕಾರದಲ್ಲಿದ್ದರೂ, ಹೊಸ ರಾಜ್ಯಗಳಲ್ಲಿ ಬಿಜೆಪಿ ಸರ್ಕಾರಗಳು ರಚನೆಯಾಗುತ್ತಿವೆ ಮತ್ತು ಬಿಜೆಪಿಯ ಮತಗಳ ಪಾಲು ಹೆಚ್ಚುತ್ತಿದೆ ಮತ್ತು ಮೋದಿ ಜಿ ಅವರಿಂದಾಗಿ ಬಿಜೆಪಿಯ ಮೇಲಿನ ಜನರ ವಿಶ್ವಾಸ ಬಲಗೊಳ್ಳುತ್ತಿದೆ" ಎಂದು ಅವರು ಹೇಳಿದರು.
"ಅಸ್ಸಾಂನಲ್ಲಿ ಭಾರತೀಯ ಜನತಾ ಪಕ್ಷ ಕೆಲಸ ಮಾಡಿದ ರೀತಿಯನ್ನು ನೋಡಿದರೆ, ನಾವು ಅಲ್ಲಿ ಹ್ಯಾಟ್ರಿಕ್ ಗಳಿಸಲಿದ್ದೇವೆ. ಮೂರನೇ ಬಾರಿಗೆ ಸರ್ಕಾರ ರಚನೆಯಾಗಲಿದೆ. ಅದು ಕೇರಳ, ತಮಿಳುನಾಡು ಅಥವಾ ಪುದುಚೇರಿ ಆಗಿರಲಿ, ಅಲ್ಲಿಯೂ ಎನ್ಡಿಎ ಭಾರಿ ಬಹುಮತದೊಂದಿಗೆ ಸರ್ಕಾರ ರಚಿಸುವುದನ್ನು ನೀವು ನೋಡುತ್ತೀರಿ. ಎಲ್ಲರ ಕಣ್ಣುಗಳು ಇಂದು ಪಶ್ಚಿಮ ಬಂಗಾಳದ ಮೇಲೆ ಇವೆ.
ಮೋಡಗಳು ತೆರವುಗೊಳ್ಳುತ್ತವೆ, ಸೂರ್ಯ ಉದಯಿಸುತ್ತಾನೆ ಮತ್ತು ಕಮಲವು ಅಲ್ಲಿಯೂ ಅರಳುತ್ತದೆ ಎಂದು ನಾನು ಹೇಳಬಲ್ಲೆ. ಮಮತಾ ಬ್ಯಾನರ್ಜಿ ಹದಿನೈದು ವರ್ಷಗಳ ಕಾಲ ದುರಾಡಳಿತದ ಸರ್ಕಾರವನ್ನು ನಡೆಸುತ್ತಿರುವ ರೀತಿ, ಪಶ್ಚಿಮ ಬಂಗಾಳದ ಜನರು ಈ ಸರ್ಕಾರವನ್ನು ಕಿತ್ತೊಗೆಯಲು ದೃಢನಿಶ್ಚಯ ಮಾಡಿದ್ದರು..." ಎಂದು ಶೆಹಜಾದ್ ಪೂನವಾಲಾ ಹೇಳಿದ್ದಾರೆ.