ಕೋಲ್ಕತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿರುವಂತೆಯೇ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸ್ಪಷ್ಟ ಬಹುಮತದತ್ತ ದಾಪುಗಾಲಿರಿಸಿದ್ದು, ಆಡಳಿತಾ ರೂಢ ಟಿಎಂಸಿ ತೀವ್ರ ಮುಖಭಂಗ ಅನುಭವಿಸಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಚಾಲ್ತಿಯಲ್ಲಿರುವಂತೆಯೇ ಮಾಧ್ಯಮಗಳೊಂದಿಗೆ ನೀಡಿದ ಮೊದಲ ಹೇಳಿಕೆಯಲ್ಲಿ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಬಿಜೆಪಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ. ಬಿಜೆಪಿ "ಯೋಜನೆ"ಯನ್ನು ಜಾರಿಗೊಳಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಬಂಗಾಳದಲ್ಲಿ ಬಿಜೆಪಿ ಮೊದಲ ಬಾರಿಗೆ ಅಧಿಕಾರಕ್ಕೆ ಬರುತ್ತಿರುವುದನ್ನು ಟ್ರೆಂಡ್ಗಳು ತೋರಿಸುತ್ತಿವೆ. ಇದರ ನಡುವೆಯೇ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಡಿಯೊ ಹೇಳಿಕೆಯಲ್ಲಿ, ಬಿಜೆಪಿ ಮೊದಲು ತಮ್ಮ ಫಲಿತಾಂಶಗಳನ್ನು ಯೋಜನೆಯ ಭಾಗವಾಗಿ ತೋರಿಸುತ್ತದೆ ಎಂದು ತಿಳಿದಿತ್ತು. ಭಾರತೀಯ ಜನತಾ ಪಕ್ಷವು (ಬಿಜೆಪಿ) ಫಲಿತಾಂಶಗಳನ್ನು ತಮಗೆ ಅನುಕೂಲವಾಗುವಂತೆ ಬಿಂಬಿಸಲು "ಸಂಚು" ರೂಪಿಸಿದೆ ಎಂದರು.
ಮೊದಲು ಅವರ ಫಲಿತಾಂಶ ಪ್ರದರ್ಶನ
ಅಂತೆಯೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕಾರ್ಯಕರ್ತರ ಧೈರ್ಯ ಕುಗ್ಗಿಸಲು, ಬಿಜೆಪಿ ಮೊದಲು ತಮಗೆ ಅನುಕೂಲಕರವಾಗಿರುವ ಕ್ಷೇತ್ರಗಳ ಫಲಿತಾಂಶಗಳನ್ನು ತೋರಿಸುತ್ತಿದೆ ಮತ್ತು ಟಿಎಂಸಿ ಮುನ್ನಡೆ ಸಾಧಿಸಿರುವ ಫಲಿತಾಂಶಗಳನ್ನು ತಡವಾಗಿ ತೋರಿಸುವ ಯೋಜನೆ ಹೊಂದಿದೆ.
ಮೂರು ಅಥವಾ ನಾಲ್ಕು ಸುತ್ತುಗಳನ್ನು ಎಣಿಸಲಾಗಿದ್ದರೂ, ಒಟ್ಟು 14-18 ಸುತ್ತುಗಳಿವೆ. ಆಗ ನೀವು ಗೆಲ್ಲುತ್ತೀರಿ. ಕಾದು ನೋಡಿ. ನಾವು ನಿಮ್ಮೊಂದಿಗಿದ್ದೇವೆ. ಭಯಪಡಬೇಡಿ. ನಾವು ಹುಲಿ ಮರಿಗಳಂತೆ ಹೋರಾಡುತ್ತೇವೆ" ಎಂದು ಅವರು ಹೇಳಿದರು.
ಕೊನೇ ಕ್ಷಣದವರೆಗೂ ಮತ ಎಣಿಕೆ ಕೇಂದ್ರ ಬಿಟ್ಟು ಬರಬೇಡಿ
ಎಣಿಕೆ ಕೇಂದ್ರಗಳಿಂದ ಯಾವುದೇ ಕಾರಣಕ್ಕೂ ಹೊರಬರಬೇಡಿ ಎಂದು ಅವರು ತಮ್ಮ ಪಕ್ಷದ ಅಭ್ಯರ್ಥಿಗಳು ಮತ್ತು ಏಜೆಂಟ್ಗಳಿಗೆ ಮನವಿ ಮಾಡಿದ್ದಾರೆ. "ನಿಜವಾದ ಫಲಿತಾಂಶಗಳು ಸೂರ್ಯಾಸ್ತದ ನಂತರವಷ್ಟೇ ತಿಳಿಯಲಿವೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸುಮಾರು 100 ಕಡೆಗಳಲ್ಲಿ ಮತ ಎಣಿಕೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಇವಿಎಂ (EVM) ಗಳಲ್ಲಿ ವ್ಯತ್ಯಾಸಗಳಾಗಿವೆ ಎಂದು ಮಮತಾ ದೂರಿದ್ದಾರೆ. ಇದಲ್ಲದೆ ಸುಮಾರು 90 ಲಕ್ಷ ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿರುವ 'ವಿಶೇಷ ತೀವ್ರ ಪರಿಷ್ಕರಣೆ' (SIR) ಬಗ್ಗೆಯೂ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರುವ ತಂತ್ರ ಎಂದು ಟೀಕಿಸಿದ್ದಾರೆ.