ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ ಎಂದಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ, ರಾಜೀನಾಮೆ ನೀಡದಿದ್ರೆ ಕಿತ್ತೆಸಲಾಗುವುದು ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ದೇಶ ಅವರ ಇಚ್ಚೆಯಂತೆ ನಡೆಯುವುದಿಲ್ಲ. ಅವರು ರಾಜೀನಾಮೆ ನೀಡದಿದ್ರೆ ವಜಾಗೊಳಿಸಲಾಗುತ್ತದೆ. ಒಂದು ನಿರ್ದಿಷ್ಟ ಅವಧಿಯವರೆಗೆ ರಾಜ್ಯಪಾಲರು ಕಾಯುತ್ತಾರೆ. ತದನಂತರ ಅವರನ್ನು ವಜಾಗೊಳಿಸಲಾಗುತ್ತದೆ - ಅದು ಅಷ್ಟು ಸರಳವಾಗಿದೆ" ಎಂದು ಶರ್ಮಾ ಅವರು ಸುದ್ದಿವಾಹಿನಿಯೊಂದಕ್ಕೆ ತಿಳಿಸಿದ್ದಾರೆ.
ಫಲಿತಾಂಶ ಹೊರಬಂದಿದೆ. ಚುನಾವಣಾ ಫಲಿತಾಂಶ ಘೋಷಿಸಲಾಗಿದೆ. 100 ಸ್ಥಾನಗಳನ್ನು ನಿಮ್ಮಿಂದ ಕಸಿದುಕೊಳ್ಳಲಾಗಿದೆ ಎಂದು ಹೇಳುತ್ತಿದ್ದೀರಾ? ಹಾಗಾದರೆ, ಅಸ್ಸಾಂನಲ್ಲಿ ಕಾಂಗ್ರೆಸ್ ಗೆದ್ದ 19 ಸ್ಥಾನಗಳನ್ನು ನನ್ನಿಂದ ಕಸಿದುಕೊಳ್ಳಲಾಗಿದೆ ಎಂದು ನಾನು ಹೇಳಬಹುದು. ನನಗೂ 126 ಸಿಗಬೇಕಿತ್ತು ಎದು ಹೇಳುತ್ತೇನೆ. ಹಾಗೆ ದೇಶ ನಡೆಯಲು ಸಾಧ್ಯವಿಲ್ಲ ಎಂದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ರಾಜಭವನಕ್ಕೆ ಹೋಗುವುದಿಲ್ಲ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು.
ಭಾರತ ಕರುಣೆ ಹೊಂದಿರುವ ದೇಶವಾದ್ದರಿಂದ ಬಂಗಾಳ ಜನರು ಬ್ಯಾನರ್ಜಿಯನ್ನು ಇಷ್ಟು ದಿನ ಸಹಿಸಿಕೊಂಡಿದ್ದಾರೆ. ಗಡಿಯಲ್ಲಿ ಬೇಲಿ ಹಾಕಲು ಅವಕಾಶ ನೀಡದ ಮಮತಾ, ನಂತರ ಸೀಟುಗಳನ್ನು ಕಸಿದುಕೊಳ್ಳಲಾಗಿದೆ ಎಂದು ಹೇಳ್ತಾರೆ.
ಈ ಫಲಿತಾಂಶ ಬಹಳ ಹಿಂದೆಯೇ ಬರಬೇಕಿತ್ತು. ಪಶ್ಚಿಮ ಬಂಗಾಳದ ಜನರು ಅವರಿಗೆ ಬಹಳಷ್ಟು ನೀಡಿದ್ದಾರೆ. ಈಗ ಬಿಜೆಪಿಗೆ ಜನಾದೇಶ ನೀಡಿದ್ದು, ರಾಜೀನಾಮೆ ನೀಡಲ್ಲ ಅಂತಿದ್ದಾರೆ. ಅವರು ರಾಜೀನಾಮೆ ನೀಡ್ತಾರೋ , ಇಲ್ಲವೋ ಎಂಬುದರ ಆಧಾರದ ಮೇಲೆ ಸಮಾಜ ಕಾರ್ಯನಿರ್ವಹಿಸುತ್ತದೆ ಎಂದು ಅವರು ವಾರ್ನಿಂಗ್ ನೀಡಿದರು.
ಮತ ಕಳ್ಳತನ ಮಾಡಲು ಎಸ್ಐಆರ್ ಬಳಸಲಾಗಿದೆ. ಚುನಾವಣಾ ಆಯೋಗ ಮತ್ತು ಸರ್ಕಾರ ಪಿತೂರಿ ನಡೆಸಿದೆ ಎಂಬ ಬ್ಯಾನರ್ಜಿ ಮತ್ತು ಅವರ ಪಕ್ಷದ ವಾದಕ್ಕೆ ಪುರಾವೆ ಎಲ್ಲಿದೆ" ಎಂದು ಕೇಳಿದರು. ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯನ್ನು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಸುಪ್ರೀಂಕೋರ್ಟ್ ಕೂಡಾ ಚುನಾವಣಾ ಆಯೋಗ ಸರಿಯಾಗಿದೆ ಎಂದು ಹೇಳಿತು. ಎಸ್ಐಆರ್ ಮತದಾರರ ಪಟ್ಟಿಯಿಂದ ತೆಗೆದುಹಾಕಿದ ಹೆಸರುಗಳನ್ನು ಎಣಿಕೆಗೆ ಸೇರಿಸಿದ್ರು ಮಮತಾ ಗೆಲ್ಲುತ್ತಾರಾ ಎಂದು ಪ್ರಶ್ನಿಸಿದರು.
ಬಂಗಾಳದ 293 ಸ್ಥಾನಗಳಲ್ಲಿ ಬಿಜೆಪಿ 206 ಸ್ಥಾನಗಳನ್ನು ಗೆದ್ದಿದೆ. ತೃಣಮೂಲ ಕಾಂಗ್ರೆಸ್ ಪಕ್ಷ 80 ಸ್ಥಾನಗಳನ್ನು ಗೆದ್ದಿದೆ.