ಚೆನ್ನೈ: ಅತಂತ್ರ ಫಲಿತಾಂಶದಿಂದಾಗಿ ತಮಿಳುನಾಡಿನಲ್ಲಿ ಈಗ ನಂಬರ್ ಗೇಮ್ ಆಟ ಶುರುವಾಗಿದ್ದು, ಇಕ್ಕಟ್ಟಿನ ಪರಿಸ್ಥಿತಿ ತಲೆದೋರಿದೆ.
ನಟ-ರಾಜಕಾರಣಿ ವಿಜಯ್ 112 ಶಾಸಕರ ಬೆಂಬಲದೊಂದಿಗೆ ಸರ್ಕಾರ ರಚಿಸಲು ರಾಜಭವನಕ್ಕೆ ಬುಧವಾರ ತೆರಳಿದ್ದರು. ಆದರೆ ಅದು ಸಾಕಾಗುವುದಿಲ್ಲ, 118 ಸದಸ್ಯರೊಂದಿಗೆ ಬನ್ನಿ ಎಂದು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ವಿಜಯ್ ಹೇಳಿದ್ದು, ಹೊಸ ರೀತಿಯ ರಾಜಕೀಯ ಹೈಡ್ರಾಮಕ್ಕೆ ನಾಂದಿ ಹಾಡುವರೇ? ಎಂಬ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ನಿಂದ ಬೆಂಬಲವನ್ನು ಪಡೆದುಕೊಂಡಿದ್ದೇನೆ ಎಂದು ವಿಜಯ್ ಮೌಖಿಕವಾಗಿ ಹೇಳಿದ್ದಾರೆ. ಆದರೆ, ಸಂಖ್ಯಾಬಲವನ್ನು ಹೆಚ್ಚಿಸಲು ಸಮಯ ಕೇಳಿರುವುದಾಗಿ ಮೂಲಗಳು ತಿಳಿಸಿವೆ.
ಭಾರತೀಯ ಸಂವಿಧಾನದ 164(1) ನೇ ವಿಧಿಯು ರಾಜ್ಯಪಾಲರಿಗೆ ಮುಖ್ಯಮಂತ್ರಿಯನ್ನು ನೇಮಿಸುವ ಅಧಿಕಾರವನ್ನು ನೀಡುತ್ತದೆ. ಅತಂತ್ರ ವಿಧಾನಸಭೆಯ ಸಂದರ್ಭದಲ್ಲಿ ಮುಖ್ಯಮಂತ್ರಿ ಕುರ್ಚಿಗೆ ಸರಿಯಾದ ಅಭ್ಯರ್ಥಿಯನ್ನು ನಿರ್ಧರಿಸಲು ಸಂವಿಧಾನವು ರಾಜ್ಯಪಾಲರಿಗೆ ವಿವೇಚನಾ ಅಧಿಕಾರ ನೀಡುತ್ತದೆ. ಅನೇಕ ರಾಜ್ಯಗಳಲ್ಲಿ ರಾಜ್ಯಪಾಲರು ಸಂಖ್ಯಾ ಬಲ ಕೊರತೆಯಿದ್ದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಪಕ್ಷದ ನಾಯಕನನ್ನು ಸರ್ಕಾರ ರಚಿಸಲು ಆಹ್ವಾನಿಸಿರುವ ನಿದರ್ಶನಗಳಿವೆ.
ಈ ಹಿಂದೆ 2018 ರಲ್ಲಿ ಕರ್ನಾಟಕದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ 104 ಸೀಟುಗಳನ್ನು ಗೆಲ್ಲುವ ಮೂಲಕ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಮ್ಯಾಜಿಕ್ ನಂಬರ್ 113 ದಾಟುವಲ್ಲಿ ವಿಫಲವಾಗಿತ್ತು. ಆಗ 80 ಸ್ಥಾನ ಗಳಿಸಿದ್ದ ಕಾಂಗ್ರೆಸ್ 37 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಗೆ ಬೆಂಬಲ ನೀಡಿತ್ತು. ಆದರೆ ಆಗಿನ ರಾಜ್ಯಪಾಲರಾಗಿದ್ದ ವಜೂಭಾಯಿ ವಾಲಾ, ಬಿಎಸ್ ಯಡಿಯೂರಪ್ಪ ಅವರನ್ನು ಸರ್ಕಾರ ರಚನೆಗೆ ಕರೆದಿದ್ದರು.
ಸರ್ಕಾರ ರಚನೆಯಾಗಿ ಮೂರು ದಿನವಾಗಿದ್ದಾಗ ಕೂಡಲೇ ವಿಶ್ವಾಸಮತ ಯಾಚಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಬಿಜೆಪಿಗೆ ಅಗತ್ಯ ಬೆಂಬಲ ಇಲ್ಲದಿದ್ದುರಿಂದ ಅಗತ್ಯ ಬಹುಮತ ತೋರಿಸುವಲ್ಲಿ ವಿಫಲವಾಯಿತು. ಈ ನಿದರ್ಶನವನ್ನು ಗಮನಿಸಿದರೆ ತಮಿಳುನಾಡು ರಾಜ್ಯಪಾಲ ಅರ್ಲೇಕರ್ ಮೊದಲು ವಿಜಯ್ ಅವರನ್ನು ಅಲ್ಪಸಂಖ್ಯಾತ ಸರ್ಕಾರ ರಚಿಸಲು ಆಹ್ವಾನಿಸಬಹುದು. ತದನಂತರ ಬಹುಮತ ಸಾಬೀತುಪಡಿಸಲು ಸೂಚಿಸಬಹುದಾಗಿದೆ.
ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) 234 ಸ್ಥಾನಗಳಲ್ಲಿ 108 ಸ್ಥಾನಗಳನ್ನು ಗೆದ್ದುಕೊಂಡಿದೆ. ಆದರೆ ಬಹುಮತಕ್ಕೆ 10 ಸ್ಥಾನಗಳ ಕೊರತೆಯಿದೆ. ಮಿತ್ರಪಕ್ಷಗಳು ಇನ್ನೂ ಬೆಂಬಲ ಘೋಷಿಸಿಲ್ಲ. ಡಿಎಂಕೆ ಮಿತ್ರಪಕ್ಷವಾಗಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಗುರುವಾರ ಬೆಳಿಗ್ಗೆ 10 ಗಂಟೆಗೆ ಪ್ರಮುಖ ಸಭೆ ನಡೆಸಲಿದೆ. ಬಳಿಕ ತೀರ್ಮಾನ ತೆಗೆದುಕೊಳ್ಳಲಿದೆ ಎನ್ನಲಾಗಿದೆ.
ಎಡ ಪಕ್ಷಗಳು ಶುಕ್ರವಾರ ತಮ್ಮ ನಿರ್ಧಾರ ತಿಳಿಸುವುದಾಗಿ ಹೇಳಿವೆ. ವಿಸಿಕೆ ಮತ್ತು ಎಡ ಪಕ್ಷಗಳೆರಡೂ ಡಿಎಂಕೆ ನೇತೃತ್ವದ ಜಾತ್ಯತೀತ ಪ್ರಗತಿಪರ ಒಕ್ಕೂಟದ (ಎಸ್ಪಿಎ) ಭಾಗವಾಗಿದೆ. ಹೀಗಾಗಿ ವಿಜಯ್ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಆದರೆ ಸಿಎಂ ಕುರ್ಚಿ ಪಡೆಯಲು ಇನ್ನೂ ಕಸರತ್ತು ಮಾಡುವಂತಾಗಿದೆ.