ನವದೆಹಲಿ: ಭಾರತೀಯ ಮುಸ್ಲಿಮರು ಜಾತ್ಯತೀತ ಪಕ್ಷಗಳ ಮತಬ್ಯಾಂಕ್ ಆಗಿ ಉಳಿಯುವುದಕ್ಕಿಂತ ಸ್ವತಂತ್ರ ರಾಜಕೀಯ ನಾಯಕತ್ವವನ್ನು ನಿರ್ಮಿಸಬೇಕು. ಮುಸ್ಲಿಂ ಮತಗಳು ವ್ಯರ್ಥವಾಗಬಾರದು, ಬದಲಾವಣೆ ಅಗತ್ಯ, ಮುಸ್ಲಿಮರ ಪ್ರತ್ಯೇಕ ನಾಯಕತ್ವಕ್ಕೆ ಇದು ಸಕಾಲ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿಯ ಗೆಲುವನ್ನು ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಿಸಿರುವ ಅಸಾದುದ್ದೀನ್ ಓವೈಸಿ, 'ರಾಷ್ಟ್ರ ರಾಜಕಾರಣದಲ್ಲಿ ಪ್ರತ್ಯೇಕ ಮುಸ್ಲಿಂ ನಾಯಕತ್ವ ಸೃಷ್ಟಿಸಲು ಇದು ಸಕಾಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಭಾರತದ ರಾಜಕೀಯ ರಚನೆಯ ಬದಲಾವಣೆಗೆ ಕರೆ ನೀಡಿರುವ ಅವರು, ಅಸ್ತಿತ್ವದಲ್ಲಿರುವ ಜಾತ್ಯಾತೀತ ಪಕ್ಷಗಳು ಬಿಜೆಪಿಯನ್ನು ಎಂದೂ ಸೋಲಿಸಲಾರವು ಎಂದು ಗುಡುಗಿದ್ದಾರೆ.
ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ 2026 ಪ್ರಕಟವಾದ ಬೆನ್ನಲ್ಲೇ ಈ ಫಲಿತಾಂಶ ಭಾರತದ ರಾಜಕಾರಣದಲ್ಲಿ ಪ್ರತ್ಯೇಕ ಮುಸ್ಲಿಂ ನಾಯಕತ್ವ ಸೃಷ್ಟಿಯ ಅಗತ್ಯವನ್ನು ಒತ್ತಿ ಹೇಳುತ್ತಿದೆ ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಒವೈಸಿ ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಸೋಲಿಸಲು ಜ್ಯಾತ್ಯಾತೀತ ಪಕ್ಷಗಳಿಂದಸಾಧ್ಯವಿಲ್ಲ
"ಮುಸ್ಲಿಂ ನಾಯಕತ್ವ ಬೆಳೆಸಲು ಇದು ಸಕಾಲ ಎಂಬ ಸಂದೇಶವನ್ನು ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆ ಫಲಿತಾಂಶ ಗಟ್ಟಿಯಾಗಿ ಕೂಗಿ ಹೇಳುತ್ತಿದೆ. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿಯ ಗೆಲುವು ಪ್ರಜಾಪ್ರಭುತ್ವಕ್ಕೆ ಹೆಚ್ಚಿನ ಅಪಾಯಗಳನ್ನು ತಂದೊಡ್ಡಲಿದ್ದು, ಪ್ರತ್ಯೇಕ ಮುಸ್ಲಿಂ ನಾಯಕತ್ವ ಇದನ್ನು ಎದುರಿಸಲು ಇರುವ ಮಾರ್ಗ.
ದೇಶದಲ್ಲಿ ಅಸ್ತಿತ್ವದಲ್ಲಿರುವ ಜಾತ್ಯಾತೀತ ಪಕ್ಷಗಳು ಬಿಜೆಪಿಯನ್ನು ಚುನಾವಣಾ ರಾಜಕೀಯದಲ್ಲಿ ಸೋಲಿಸಲು ಸಾಧ್ಯವಿಲ್ಲ. ಇದು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರ ಟಿಎಂಸಿಗೆ, ಅರವಿಂದ್ ಕೇಜ್ರಿವಾಲ್ ಅವರ ಆಪ್ಗೆ, ರಾಹುಲ್ ಗಾಂಧಿ ಅವರ ಕಾಂಗ್ರೆಸ್ ಪಕ್ಷಕ್ಕೆ ಅನ್ವಯಿಸುತ್ತದೆ. ಅವರು ಬಿಜೆಪಿಯನ್ನು ಮತ್ತಷ್ಟು ಗಟ್ಟಿ ಮಾಡುತ್ತಿದ್ದಾರೆಯೇ ಹೊರತು, ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ" ಎಂದು ಅಸಾದುದ್ಧೀನ್ ಓವೈಸಿ ಕಿಡಿಕಾರಿದ್ದಾರೆ.
"ಭಾರತದಲ್ಲಿ ಮುಸ್ಲಿಮರ ಸ್ವತಂತ್ರ ರಾಜಕೀಯ ನಾಯಕತ್ವ ಸೃಷ್ಟಿ ಆಗಬೇಕಿದೆ. ಜಾತ್ಯಾತೀತ ಪಕ್ಷಗಳಿಗೆ ಮತ ಹಾಕುವ ಮೂಲಕ ಮುಸ್ಲಿಮರು ತಮ್ಮ ಮತಗಳನ್ನು ವ್ಯರ್ಥ ಮಾಡುತ್ತಿದ್ದಾರೆ. ಈ ಪಕ್ಷಗಳು ಬಿಜೆಪಿಯನ್ನು ಪರಿಣಾಮಕಾರಿಯಾಗಿ ಎದುರಿಸಲು ಪದೇ ಪದೇ ವಿಫಲವಾಗಿವೆ. ಮುಸ್ಲಿಮರ ನಿರಂತರ ಬೆಂಬಲಕ್ಕೆ ಪ್ರತಿಯಾಗಿ, ಜಾತ್ಯಾತೀತ ಪಕ್ಷಗಳು ಏನನ್ನೂ ಮರಳಿ ನೀಡುತ್ತಿಲ್ಲ. ಫಲಿತಾಂಶಗಳನ್ನು ನೀಡದ ಮೈತ್ರಿಗಳನ್ನು ಅವಲಂಬಿಸುವ ಬದಲು, ಮುಸ್ಲಿಮರು ತಮ್ಮದೇ ಆದ ರಾಜಕೀಯ ಧ್ವನಿ ಮತ್ತು ನಾಯಕತ್ವವನ್ನು ಪ್ರತಿಪಾದಿಸುವ ಸಮಯ ಬಂದಿದೆ" ಎಂದು ಎಐಎಂಐಎಂ ಮುಖ್ಯಸ್ಥ ಹರಿಹಾಯ್ದರು.
ಕೆಲವು ರಾಜ್ಯಗಳಲ್ಲಿ AIMIM ಪಕ್ಷವು ಬಿಜೆಪಿ ವಿರೋಧಿ ಮತಗಳನ್ನು ವಿಭಜಿಸುತ್ತದೆ ಎಂಬ ಆರೋಪವನ್ನು ವಿರೋಧ ಪಕ್ಷಗಳು ಮಾಡುತ್ತವೆ. ಆದರೆ ಪ್ರಜಾಪ್ರಭುತ್ವದಲ್ಲಿ ಮುಸ್ಲಿಮರು ತಮ್ಮ ಪ್ರತಿನಿಧಿಗಳನ್ನು ಸ್ವತಂತ್ರವಾಗಿ ಆಯ್ಕೆಮಾಡುವ ಹಕ್ಕು ಹೊಂದಿದ್ದಾರೆ; ತಂತ್ರಾತ್ಮಕ ಮತದಾನದ ಒತ್ತಡ ಇರಬಾರದು ಎಂದು ಓವೈಸಿ ಹೇಳಿದ್ದಾರೆ.
ಬಂಗಾಳದಲ್ಲಿ ಹೀನಾಯ ಸೋಲು
ಇನ್ನು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಮೊದಲು ಹುಮಾಯೂ ಕಬೀರ್ ಅವರ ಆಮ್ ಜನತಾ ಉನ್ನಾಯನ್ ಪಕ್ಷ (ಎಜೆಯುಪಿ) ಜೊತೆ ಮೈತ್ರಿ ಮಾಡಿಕೊಂಡಿದ್ದ ಎಐಎಂಐಎಂ, ಬಳಿಕ ಮೈತ್ರಿ ಮುರಿದುಕೊಂಡು ಏಕಾಂಗಿಯಾಗಿಒ ಸ್ಪರ್ಧೆ ಮಾಡಿತ್ತು. ಆದರೆ ತಾನು ಸ್ಪರ್ಧಿಸಿದ್ದ ಎಲ್ಲಾ 7 ಕ್ಷೇತ್ರಗಳಲ್ಲೂ ಪಕ್ಷ ಹೀನಾಯವಾಗಿ ಸೋತಿದೆ.