ಕೋಲ್ಕತಾ: ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ಸುವೇಂದು ಅಧಿಕಾರಿಯ ಆಪ್ತನ ಕೊಲೆಗೆ ಬಳಸಲಾಗಿದ್ದ ಎರಡು ಮೋಟಾರ್ಬೈಕ್ಗಳಲ್ಲಿ ಒಂದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿಯವರ ಆಪ್ತ ಸಹಾಯಕ ಮತ್ತು ಮಾಜಿ ವಾಯುಪಡೆ ಸಿಬ್ಬಂದಿ ಚಂದ್ರನಾಥ್ ರಥ್ ಅವರನ್ನು ಬುಧವಾರ ರಾತ್ರಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು.
ದುಷ್ಕರ್ಮಿಗಳು ಎರಡು ಮೋಟಾರ್ಬೈಕ್ ಮತ್ತು ಒಂದು ಕಾರಿನಲ್ಲಿ ಬಂದು ರಥ್ ಅವರ ವಾಹನವನ್ನು ತಡೆದು ಅತಿ ಸಮೀಪದಿಂದ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ರಥ್ ಮೃತಪಟ್ಟರೆ, ಅವರ ಚಾಲಕ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಬಂಗಾಳ ಪೊಲೀಸರು ಇದೀಗ ಆರೋಪಿಗಳು ಬಳಸಿದ್ದ ಬೈಕ್ ವೊಂದನ್ನು ಪತ್ತೆ ಮಾಡಿದ್ದಾರೆ.
ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಮಧ್ಯಮಗ್ರಾಮ ಎಂಬಲ್ಲಿ ಟೀ ಅಂಗಡಿಯೊಂದರ ಬಳಿ ಬೈಕ್ ಪತ್ತೆಯಾಗಿದ್ದು, ಈ ಬೈಕ್ಗೆ ನಕಲಿ ನೋಂದಣಿ ಸಂಖ್ಯೆ ಅಳವಡಿಸಲಾಗಿತ್ತು ಮತ್ತು ಮಾಲೀಕರ ಗುರುತು ಸಿಗದಂತೆ ಅದರ ಚಾಸಿಸ್ ಸಂಖ್ಯೆಯನ್ನು ಅಳಿಸಿಹಾಕಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಸ್ತುತ ಸಿಐಡಿ ಮತ್ತು ರಾಜ್ಯ ಪೊಲೀಸರ ವಿಶೇಷ ತಂಡವು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಎರಡನೇ ಬೈಕ್ ಮತ್ತು ಆರೋಪಿಗಳಿಗಾಗಿ ಶೋಧ ನಡೆಸುತ್ತಿದೆ. ಅಲ್ಲದೆ ಕೊಲೆಗೆ ಬಳಸಲಾದ ಕಾರಿನ ನಂಬರ್ ಪ್ಲೇಟ್ ಸಿಲಿಗುರಿಯ ನಿವಾಸಿ ವಿಲಿಯಂ ಜೋಸೆಫ್ ಎಂಬುವವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
SIT ರಚನೆ
ಇನ್ನು ಬಂಗಾಳದ ಭಾವಿ ಸಿಎಂ ಎಂದೇ ಹೇಳಲಾಗುತ್ತಿರುವ ಸುವೇಂದು ಅಧಿಕಾರಿ ಪಿಎ ಹತ್ಯೆ ಪ್ರಕರಣವನ್ನು ಬಂಗಾಳ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಈ ಹೈಪ್ರೊಫೈಲ್ ಕೊಲೆಯ ತನಿಖೆಗಾಗಿ ಪಶ್ಚಿಮ ಬಂಗಾಳ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದಾರೆ.
ಈ ತಂಡದಲ್ಲಿ CID ಯ ಹೋಮಿಸೈಡ್ ವಿಭಾಗದ ಅಧಿಕಾರಿಗಳು ಸೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಅತ್ಯಾಧುನಿಕ ಪಿಸ್ತೂಲ್ ಬಳಕೆ
ಕೊಲೆಗೆ ಅತ್ಯಾಧುನಿಕ ಗ್ಲಾಕ್ 47X ಪಿಸ್ತೂಲ್ಗಳನ್ನು (Glock 47X pistols) ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದಾಳಿಕೋರರು ವೃತ್ತಿಪರ ಶೂಟರ್ಗಳಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ರಥ್ ಅವರ ಚಾಲಕ ಬುದ್ಧದೇವ್ ಬೆರಾ ಅವರ ಸ್ಥಿತಿ ಇನ್ನೂ ಚಿಂತಾಜನಕವಾಗಿದೆ ಮತ್ತು ಅವರಿಗೆ ಚಿಕಿತ್ಸೆ ಮುಂದುವರಿದಿದೆ.
ಪ್ರಸ್ತುತ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು, ತಲೆಮರೆಸಿಕೊಂಡಿರುವ ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಯೋಜಿತ ಪಿತೂರಿ ಎಂದ ಸುವೇಂದು ಅಧಿಕಾರಿ
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಸುವೇಂದು ಅಧಿಕಾರಿ, ' ಇದು ಸಂಪೂರ್ಣವಾಗಿ ಪೂರ್ವಯೋಜಿತ ಕೊಲೆಯಾಗಿದ್ದು, ಚಂದ್ರನಾಥ್ ರಥ್ ಅವರ ಮೇಲೆ 2-3 ದಿನಗಳ ಕಾಲ ನಿಗಾ ಇಡಲಾಗಿತ್ತು. ಆದಾಗ್ಯೂ, ಪೊಲೀಸರು ಸರಿಯಾದ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ದಾಳಿಕೋರರು ಮತ್ತು ಅದರ ಹಿಂದಿರುವವರ ಹೆಡೆಮುರಿ ಕಟ್ಟಲಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.