ಭೋಪಾಲ್: ಇದು ಯಾವುದೋ ಸಿನೆಮಾ ಕಥೆಯಲ್ಲ, ಮಧ್ಯಪ್ರದೇಶದ ಸತ್ನಾದಲ್ಲಿ ನಡೆದ ನೈಜ ಘಟನೆ. ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಸಹಾಯಕ ಜೈಲರ್ ಆಗಿ ಕಾರ್ಯನಿರ್ವಹಿಸುತ್ತಿರುವ ಫಿರೋಜಾ ಖಾತೂನ್ ಎಂಬ ಮಹಿಳಾ ಅಧಿಕಾರಿಯೊಬ್ಬರು, ಅದೇ ಜೈಲಿನಲ್ಲಿ ಕೊಲೆ ಆರೋಪದ ಮೇಲೆ ಶಿಕ್ಷೆ ಅನುಭವಿಸುತ್ತಿದ್ದ ಧರ್ಮೇಂದ್ರ ಸಿಂಗ್ ಎಂಬುವವರನ್ನು ಪ್ರೀತಿಸಿ, ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದು, ಈ ಮೂಲಕ ಎಲ್ಲರ ಗಮನಸೆಳೆದಿದ್ದಾರೆ.
ಧರ್ಮೇಂದ್ರ ಸಿಂಗ್ 2007ರಲ್ಲಿ ಚಂದ್ಲಾ ಪ್ರದೇಶದ ಮುನ್ಸಿಪಲ್ ಕೌನ್ಸಿಲ್ ಉಪಾಧ್ಯಕ್ಷ ಕೃಷ್ಣ ದತ್ ದೀಕ್ಷಿತ್ ಅವರ ಹತ್ಯೆ ಪ್ರಕರಣದಲ್ಲಿ ದೋಷಿಯಾಗಿದ್ದು, ಸತ್ನಾ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.
ಅದೇ ಜೈಲಿನಲ್ಲಿ ಸಹಾಯಕ ಜೈಲು ಅಧೀಕ್ಷಕರಾಗಿ ನೇಮಕಗೊಂಡಿದ್ದ ಫಿರೋಜಾ ಖಾತೂನ್ ಅವರಿಗೆ ವಾರಂಟ್ ವಿಭಾಗದ ಜವಾಬ್ದಾರಿ ನೀಡಲಾಗಿತ್ತು.
ಕರ್ತವ್ಯದ ವೇಳೆ ಇಬ್ಬರ ನಡುವಿನ ವೃತ್ತಿಪರ ಸಂಪರ್ಕ ಕ್ರಮೇಣ ಸ್ನೇಹವಾಗಿ, ನಂತರ ಪ್ರೀತಿಯಾಗಿ ಬೆಳೆದಿದೆ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 14 ವರ್ಷಗಳ ಶಿಕ್ಷೆಯ ಬಳಿಕ ಉತ್ತಮ ನಡವಳಿಕೆ ಆಧಾರದಲ್ಲಿ ಧರ್ಮೇಂದ್ರ ಸಿಂಗ್ ಬಿಡುಗಡೆಗೊಂಡಿದ್ದು, ನಂತರ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ.
ಮೇ 5ರಂದು ಛತ್ತರ್ಪುರ ಜಿಲ್ಲೆಯ ಲವಕುಶ್ ನಗರದಲ್ಲಿ ಹಿಂದೂ ಸಂಪ್ರದಾಯದಂತೆ ಇಬ್ಬರ ವಿವಾಹ ನೆರವೇರಿದೆ. ಆದರೆ ಫಿರೋಜಾ ಅವರ ಕುಟುಂಬ ಈ ವಿವಾಹಕ್ಕೆ ಒಪ್ಪಿಲ್ಲ.
ಕುಟುಂಬದ ಅನುಪಸ್ಥಿತಿಯಲ್ಲಿ ವಿಶ್ವ ಹಿಂದೂ ಪರಿಷತ್ (VHP) ಜಿಲ್ಲಾ ಉಪಾಧ್ಯಕ್ಷ ರಾಜ್ ಬಹದ್ದೂರ್ ಮಿಶ್ರಾ ಮತ್ತು ಅವರ ಪತ್ನಿ ಕನ್ಯಾದಾನ ನೆರವೇರಿಸಿದರು. ಬಜರಂಗ ದಳದ ಸದಸ್ಯರೂ ಮದುವೆಯಲ್ಲಿ ಭಾಗವಹಿಸಿದ್ದರು. ಜೈಲು ಅಧಿಕಾರಿಗಳು ಮತ್ತು ಸಹ ಕೈದಿಗಳು ನವ ದಂಪತಿಗಳಿಗೆ ಶುಭ ಹಾರೈಸಿದರು.