ಚೆನ್ನೈ: ಇತ್ತೀಚಿಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ತಮಿಳುನಾಡು ರಾಜ್ಯಪಾಲರು ತಮಿಳಗ ವೆಟ್ರಿ ಕಳಗಂ(ಟಿವಿಕೆ)ಗೆ ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕುವುದಾಗಿ ಮಧುರೈ ಕಾರ್ಪೊರೇಷನ್ ಜಿಲ್ಲಾ ಕಾಂಗ್ರೆಸ್ ಸಮಿತಿ(ಡಿಸಿಸಿ) ಅಧ್ಯಕ್ಷ ನಲ್ಲಮಣಿ ಅವರು ಶುಕ್ರವಾರ ಎಚ್ಚರಿಸಿದ್ದಾರೆ.
"ಸರ್ಕಾರ ರಚನೆಯ ಮೊದಲ ಹಂತದಿಂದಲೇ ರಾಜ್ಯಪಾಲರು ಟಿವಿಕೆಗೆ ಅಡ್ಡಿಯಾಗುತ್ತಿದ್ದಾರೆ" ಎಂದು ನಲ್ಲಮಣಿ ಆರೋಪಿಸಿದ್ದಾರೆ.
ಇಂದು ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಮಧುರೈ ನಗರ ಕಾಂಗ್ರೆಸ್ ಅಧ್ಯಕ್ಷ ನಲ್ಲಮಣಿ, "ತಮಿಳುನಾಡಿನ ರಾಜ್ಯಪಾಲರು ಬಿಜೆಪಿಯ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾನೂನಿನ ಪ್ರಕಾರ, ರಾಜ್ಯಪಾಲರು ಟಿವಿಕೆಯನ್ನು ಸರ್ಕಾರ ರಚಿಸಲು ಆಹ್ವಾನಿಸಬೇಕು. ರಾಜ್ಯಪಾಲರು ತಮಿಳಗ ವೆಟ್ರಿ ಕಳಗಂಗೆ ಸರ್ಕಾರ ರಚಿಸಲು ಆಹ್ವಾನಿಸದಿದ್ದರೆ, ನಾವು ರಾಜಭವನಕ್ಕೆ ಮುತ್ತಿಗೆ ಹಾಕುತ್ತೇವೆ" ಎಂದು ಹೇಳಿದ್ದಾರೆ.
"ಸರ್ಕಾರ ರಚನೆಯನ್ನು ತಡೆಯಲು ಬಿಜೆಪಿ ತೆರೆಮರೆಯಲ್ಲಿ ಕೆಲಸ ಮಾಡುತ್ತಿದೆ. ಬಹುಮತ ಸಾಬೀತುಪಡಿಸುವ ಸ್ಥಳ ರಾಜಭವನವಲ್ಲ, ವಿಧಾನಸಭೆ. ಆದ್ದರಿಂದ, ರಾಜ್ಯಪಾಲರು ವಿಜಯ್ ಅವರನ್ನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಆಹ್ವಾನಿಸಬೇಕು" ಎಂದು ಕಾಂಗ್ರೆಸ್ ಅಧ್ಯಕ್ಷ ನಲ್ಲಮಣಿ ಆಗ್ರಹಿಸಿದ್ದಾರೆ.
ಇಂದು ಮಧುರೈನಲ್ಲಿ ಕಾಂಗ್ರೆಸ್ ಮುಖಂಡರು, ತಮಿಳಗ ವೆಟ್ರಿ ಕಳಗಂ ಸರ್ಕಾರ ರಚಿಸದಂತೆ ಬಿಜೆಪಿ ತಡೆಯುತ್ತಿದೆ ಎಂದು ಆರೋಪಿಸಿ ಮತ್ತು ರಾಜ್ಯಪಾಲರನ್ನು ನಡೆ ಖಂಡಿಸಿ ಪ್ರತಿಭಟನೆ ನಡೆಸಿದರು.
ಮಧುರೈ ನಗರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ನಲ್ಲಮಣಿ ನೇತೃತ್ವದಲ್ಲಿ 100 ಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಮಧುರೈನ ಝಾನ್ಸಿ ರಾಣಿ ಪಾರ್ಕ್ ಬಳಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.