ಚೆನ್ನೈ: ಕಳೆದ ಐದು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ರಾಜಕೀಯ ಕಣ್ಣಾ ಮುಚ್ಚಾಲೆಗೆ ಕೊನೆಗೂ ತೆರೆಬಿದ್ದಿದೆ. ಶತಪ್ರಯತ್ನಗಳ ಬಳಿಕ ವಿಜಯ್ ನೇತೃತ್ವದ ಟಿವಿಕೆಗೆ 120 ಶಾಸಕರ ಬಲ ಸಿಕ್ಕಿದ್ದು ಬಳಿಕ ವಿಜಯ್ ಲೋಕಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿದರು.
ವಿಸಿಕೆಯ ಬೆಂಬಲದಿಂದ ಟಿವಿಕೆಗೆ ಅತ್ಯಂತ ಮಹತ್ವದ ಎರಡು ಸ್ಥಾನಗಳು ಸೇರ್ಪಡೆಯಾಗುತ್ತವೆ. ವಿಜಯ್ ನೇತೃತ್ವದ ಮೈತ್ರಿಗೆ ಈಗಾಗಲೇ 116 ಶಾಸಕರ ಬೆಂಬಲವಿತ್ತು. ಇದರಲ್ಲಿ ಕಾಂಗ್ರೆಸ್ನ ಐದು ಶಾಸಕರು ಹಾಗೂ ಎಡಪಂಥೀಯ ಪಕ್ಷಗಳ ನಾಲ್ವರು ಶಾಸಕರೂ ಸೇರಿದ್ದಾರೆ. ವಿಸಿಕೆಯ ಇಬ್ಬರು ಶಾಸಕರ ಬೆಂಬಲ ಸಿಕ್ಕಿದ್ದರಿಂದ ಮೈತ್ರಿಯ ಬಲ 118ಕ್ಕೆ ಏರಿತ್ತು. ಇದೀಗ ಐಯುಎಂಎಲ್ ನ ಇಬ್ಬರು ಶಾಸಕರು ಸಹ ಬೆಂಬಲ ಸೂಚಿಸಿದ್ದರಿಂದ ಟಿವಿಕೆ ಬಲ 120ಕ್ಕೆ ತಲುಪಿದೆ.
ಇನ್ನು ರಾಜ್ಯಪಾಲ ರಾಜೇಂದ್ರ ಅರ್ಲೇಕರ್ ಅವರು ಎರಡು ದಿನಗಳ ಕೇರಳ ಪ್ರವಾಸ ಕೈಗೊಳ್ಳಬೇಕಿತ್ತು. ಆದರೆ ಇದೀಗ ವಿಜಯ್ ಗೆ ಸರ್ಕಾರ ರಚಿಸಲು ಬೇಕಿರುವಷ್ಟು ಶಾಸಕರ ಬಲ ಸಿಕ್ಕಿದ್ದರಿಂದ ರಾಜ್ಯಪಾಲರು ತಮ್ಮ ಕೇರಳ ಪ್ರವಾಸವನ್ನು ರದ್ದು ಪಡಿಸಿದರು. ಸಂಜೆ ಲೋಕಭವನಕ್ಕೆ ತೆರಳಿದ ವಿಜಯ್ 120 ಶಾಸಕರ ಬೆಂಬಲದ ಪತ್ರವನ್ನು ರಾಜ್ಯಪಾಲರಿಗೆ ರವಾನಿಸಿದ್ದು ಸರ್ಕಾರ ರಚನೆಗೆ ಹಕ್ಕು ಮಂಡಿಸಿದರು.
108 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅತಿ ದೊಡ್ಡ ಪಕ್ಷವಾಗಿ ಟಿವಿಕೆ ಹೊರಹೊಮ್ಮಿದ ಬಳಿಕ ವಿಜಯ್ ನಾಲ್ಕು ದಿನದಲ್ಲಿ ನಾಲ್ಕು ಬಾರಿ ರಾಜ್ಯಪಾಲರನ್ನು ಭೇಟಿ ಮಾಡಿದ್ದರು. ಆದರೆ ಪ್ರಯತ್ನಗಳು ವಿಫಲವಾಗಿದ್ದವು. ಆದರೆ ಇಂದು 5ನೇ ಬಾರಿಗೆ ರಾಜ್ಯಪಾಲರನ್ನು ವಿಜಯ್ ಭೇಟಿಯಾಗಿದ್ದು ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡಿದ್ದಾರೆ. ಇನ್ನು ನಾಳೆ ಮಧ್ಯಾಹ್ನ 3 ಗಂಟೆಗೆ ವಿಜಯ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.