ಲಖನೌ: ಉತ್ತರ ಪ್ರದೇಶ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಅವರ ಪುತ್ರಿ ಅನಾರ್ ಪಟೇಲ್ ಅವರು ಸೋಮವಾರ ಶಾಕಿಂಗ್ ಹೇಳಿಕೆ ನೀಡಿದ್ದು, ಪಟೇಲ್ ಹುಡುಗಿಯರು ತಮ್ಮ ಸಮುದಾಯದ ಹೊರಗಿನ ಹುಡುಗರನ್ನು ಮದುವೆಯಾಗುತ್ತಿದ್ದಾರೆ. ಏಕೆಂದರೆ ನಮ್ಮ ಸಮುದಾಯದ ಅನೇಕ ಯುವಕರು 'ಸಾಕಷ್ಟು ಸಾಮರ್ಥ್ಯ' ಹೊಂದಿಲ್ಲ ಮತ್ತು ಮದ್ಯಪಾನ ಹಾಗೂ ಕೆಲಸದ ಕೊರತೆಯಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಲ್ಯುವಾ ಪಾಟಿದಾರ್ ಸಮುದಾಯವನ್ನು ಪ್ರತಿನಿಧಿಸುವ ಶ್ರೀ ಖೋಡಲ್ಧಾಮ್ ಟ್ರಸ್ಟ್(ಎಸ್ಕೆಟಿ) ಅಧ್ಯಕ್ಷೆಯಾಗಿರುವ ಅನಾರ್ ಪಟೇಲ್, ಸಮಾಜವು ಈ ವಿಷಯದ ಬಗ್ಗೆ ಪ್ರಾಥಮಿಕವಾಗಿ ಹೆಣ್ಣುಮಕ್ಕಳಿಗೆ ಸಲಹೆ ನೀಡುವುದನ್ನು ಏಕೆ ಮುಂದುವರಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಬನಸ್ಕಾಂತದ ಗಢ್ ಗ್ರಾಮದಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅನಾರ್ ಪಟೇಲ್ ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
"(ಪಟೇಲ್) ಹುಡುಗಿಯರು ಇತರ ಸಮುದಾಯದ ಹುಡುಗರನ್ನು ಮದುವೆಯಾಗುತ್ತಿದ್ದಾರೆ. ಏಕೆಂದರೆ ಸಮುದಾಯದ ಅನೇಕ ಹುಡುಗರು ಸಾಕಷ್ಟು ಸಾಮರ್ಥ್ಯ ಹೊಂದಿಲ್ಲ. ನಮ್ಮ ಗಂಡು ಮಕ್ಕಳು ಮದ್ಯಪಾನ ಮಾಡುತ್ತಿದ್ದರೆ. ಹೊರಗೆ ತಿರುಗಾಡುತ್ತಿದ್ದರೆ ಮತ್ತು ಕೆಲಸ ಮಾಡದಿದ್ದರೆ ನಮ್ಮ ಹೆಣ್ಣುಮಕ್ಕಳು ಸಮುದಾಯದ ಹೊರಗೆ ಬೇರೆ ಜಾತಿಯ ಹುಡುಗರನ್ನು ಮದುವೆಯಾಗುತ್ತಾರೆ" ಎಂದು ಅವರು ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಅನಾರ್ ಪಟೇಲ್, ಸಮಾಜದಲ್ಲಿ ವಿಭಜನೆಗಳನ್ನು ಸೃಷ್ಟಿಸಲು ಕಾರಣರಾದವರನ್ನು ಗುರುತಿಸುವಂತೆ ಕರೆ ನೀಡಿದರು.
ಶ್ರೀ ಖೋಡಲ್ಧಾಮ್ ಟ್ರಸ್ಟ್ ಅನ್ನು ಲೆವಾ ಪಾಟಿದಾರ್ ಸಮುದಾಯವನ್ನು ಪ್ರತಿನಿಧಿಸುವ ಅತಿದೊಡ್ಡ ಸಂಸ್ಥೆ ಎಂದು ಶ್ಲಾಘಿಸಿದ ಅವರು, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಎಲ್ಲರಿಗೂ ಸಂಘಟನೆಯ ಬಗ್ಗೆ ಹೇಳಿಕೊಟ್ಟರು ಎಂದರು.