ನವದೆಹಲಿ: ಆಪರೇಷನ್ ಸಿಂಧೂರ್ ವೇಳೆ ಪಾಕಿಸ್ತಾನಕ್ಕೆ ಚೀನಾದ ಬೆಂಬಲದ ಬಗ್ಗೆ ಭಾರತ ಹಲವು ದಿನಗಳಿಂದ ಹೇಳುತ್ತಾ ಬಂದಿತ್ತು. ಆದರೆ, ಅದನ್ನು ಇದೀಗ ಚೀನಾದ ರಾಜ್ಯ ಮಾಧ್ಯಮಗಳಲ್ಲಿನ ವರದಿಗಳು ದೃಢಪಡಿಸಿವೆ.
ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರತಿಕ್ರಿಯಿಸಿದ್ದು, ಪಾಕಿಸ್ತಾನಕ್ಕೆ ಸಂಬಂಧಿಸಿದ ಭಯೋತ್ಪಾದಕ ಮೂಲಸೌಕರ್ಯಗಳನ್ನು ರಕ್ಷಿಸಲು "ಜವಾಬ್ದಾರಿಯುತ" ರಾಷ್ಟ್ರಗಳು ಸಹಾಯ ಮಾಡುತ್ತವೆಯೇ ಎಂಬ ಪ್ರಶ್ನೆಯನ್ನೂ ಎತ್ತಿದೆ.
2025 ರಲ್ಲಿ ಮಿಲಿಟರಿ ಕಾರ್ಯಾಚರಣೆ ವೇಳೆ ಚೀನಾದ ಸಿಬ್ಬಂದಿ ಪಾಕಿಸ್ತಾನಕ್ಕೆ ತಾಂತ್ರಿಕ ಬೆಂಬಲವನ್ನು ನೀಡಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಈ ವರದಿಗಳು ಚೀನಾದ ಒಳಗೊಳ್ಳುವಿಕೆಯ ಬಗ್ಗೆ ಭಾರತ ಈ ಹಿಂದೆ ಹೇಳಿಕೊಂಡಿದ್ದನ್ನು ದೃಢಪಡಿಸುತ್ತವೆ ಎಂದು ಹೇಳಿದರು.
ಪಾಕಿಸ್ತಾನ ಮತ್ತು ಅವರ ಪರವಾಗಿರುವವರ ಭಯೋತ್ಪಾದಕ ಮೂಲಸೌಕರ್ಯವನ್ನು ನಾಶಮಾಡುವ ಗುರಿಯೊಂದಿಗೆ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ "ಆಪರೇಷನ್ ಸಿಂಧೂರ್ ನಡೆಸಲಾಯಿತು. ಭಯೋತ್ಪಾದಕ ಮೂಲಸೌಕರ್ಯಗಳನ್ನು ರಕ್ಷಿಸುವ ಪ್ರಯತ್ನಗಳು ತಮ್ಮ ಖ್ಯಾತಿ ಮತ್ತು ಸ್ಥಾನಮಾನದ ಮೇಲೆ ಪರಿಣಾಮ ಬೀರುತ್ತವೆಯೇ ಎಂದು ಯೋಚಿಸುವುದು ತಮ್ಮನ್ನು 'ಜವಾಬ್ದಾರಿಯುತ' ಎಂದು ಪರಿಗಣಿಸುವ ರಾಷ್ಟ್ರಗಳ ಜವಾಬ್ದಾರಿಯಾಗಿದೆ" ಎಂದು ಅವರು ಹೇಳಿದರು.
ಮೇ 7 ರಂದು ಚೀನಾದ ಸರ್ಕಾರಿ ಟಿವಿ ಚಾನೆಲ್ ಚೀನಾ ಸೆಂಟ್ರಲ್ ಟೆಲಿವಿಷನ್ ಪ್ರಸಾರ ಮಾಡಿದ ಸಂದರ್ಶನಗಳನ್ನು ಉಲ್ಲೇಖಿಸಿ, ಭಾರತದೊಂದಿಗಿನ ಸಂಘರ್ಷದ ಸಮಯದಲ್ಲಿ ಪಾಕಿಸ್ತಾನಕ್ಕೆ ಸ್ಥಳದಲ್ಲೇ ಬೆಂಬಲ ನೀಡಿರುವುದನ್ನು ಚೀನಾದ ವಾಯುಯಾನ ಉದ್ಯಮ ನಿಗಮದ ಎಂಜಿನಿಯರ್ಗಳು ಒಪ್ಪಿಕೊಂಡಿದ್ದಾರೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದ ನಂತರ MEA ಈ ಹೇಳಿಕೆ ನೀಡಿದೆ.
ನಾಲ್ಕು ದಿನಗಳ ಭಾರತ-ಪಾಕಿಸ್ತಾನ ಘರ್ಷಣೆ ಒಂದು ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಚೆಂಗ್ಡು ವಿಮಾನ ವಿನ್ಯಾಸ ಮತ್ತು ಸಂಶೋಧನಾ ಸಂಸ್ಥೆಗೆ ಸಂಬಂಧಿಸಿದ ಎಂಜಿನಿಯರ್ಗಳು ಸಂಘರ್ಷದ ಸಮಯದಲ್ಲಿ ಪಾಕಿಸ್ತಾನ ವಾಯುಪಡೆಯೊಂದಿಗೆ ಕೆಲಸ ಮಾಡುವುದನ್ನು ವಿವರಿಸಿದ್ದಾರೆ.
ಚೀನಾ ಪೂರೈಕೆ ಮಾಡಿದ ಮಿಲಿಟರಿ ಉಪಕರಣಗಳು ಅಂದರ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತವೆ" ಎಂಬುದರ ಖಾತ್ರಿಗೆ ತಮ್ಮ ತಂಡವು ತೀವ್ರ ಪರಿಸ್ಥಿತಿಗಳಲ್ಲಿ" ಕಾರ್ಯನಿರ್ವಹಿಸಿತು ಎಂದು ಜಾಂಗ್ ಹೆಂಗ್ ಎಂಬ ಒಬ್ಬ ಎಂಜಿನಿಯರ್ ಹೇಳಿದರು.
ಪಾಕಿಸ್ತಾನ ಬಳಸಿದ J-10CE ಯುದ್ಧ ವಿಮಾನವು ಯುದ್ಧದಲ್ಲಿ ತನ್ನ ದಕ್ಷತೆಯನ್ನು ಸಾಬೀತುಪಡಿಸಿತು ಎಂದು ಮತ್ತೊಬ್ಬ ಎಂಜಿನಿಯರ್ ಕ್ಸು ಡಾ ಹೇಳಿರುವುದಾಗಿ ವರದಿಯಾಗಿದೆ. ಏಪ್ರಿಲ್ 22 ರಂದು 26 ನಾಗರಿಕರನ್ನು ಕೊಂದ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತವು ಮೇ 7, 2025 ರಂದು ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು.