ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಧೂಳು ಬಿರುಗಾಳಿಯಿಂದ ರಸ್ತೆಯ ಮೇಲೆ ಉರುಳಿಬಿದ್ದ ಮರದ ನಡುವೆ ಸಂಚಾರಿಗಳು ದಾರಿ ಮಾಡಿಕೊಂಡು ಸಾಗುತ್ತಿರುವ ದೃಶ್ಯ. 
ದೇಶ

ಬಿರುಗಾಳಿ, ಸಿಡಿಲು ಮಳೆಗೆ ಉತ್ತರ ಪ್ರದೇಶದಲ್ಲಿ ಮೃತರ ಸಂಖ್ಯೆ 89ಕ್ಕೆ ಏರಿಕೆ; ಪರಿಹಾರ-ಹಾನಿ ಮೌಲ್ಯಮಾಪನಕ್ಕೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ; Video

ಉತ್ತರ ಪ್ರದೇಶ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಗೆ ಬೀಸಿದ ಪ್ರಬಲ ಗಾಳಿ-ಮಳೆಯಿಂದ ಮರಗಳು ಉರುಳಿ ಮನೆಗಳು ಹಾನಿಗೊಳಗಾಗಿದ್ದು ಭಾರೀ ಪ್ರಮಾಣದಲ್ಲಿ ಜೀವಹಾನಿಯಾಗಿದೆ. ಪರಿಣಾಮ 89 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಇಂದು ಗುರುವಾರ ತಿಳಿಸಿದ್ದಾರೆ.

ಭಾರೀ ಗಾಳಿ, ಮಳೆ, ಆಲಿಕಲ್ಲು ಮಳೆ ಮತ್ತು ಸಿಡಿಲಿನಿಂದ ಉತ್ತರ ಪ್ರದೇಶದ ಹಲವು ಜಿಲ್ಲೆಗಳು ತತ್ತರಿಸಿದ್ದು, ಮರಗಳು ಹಾಗೂ ವಿದ್ಯುತ್ ಕಂಬಗಳು ಉರುಳಿ ಮನೆಗಳಿಗೆ ಹಾನಿಯಾಗಿರುವ ಪರಿಣಾಮ ಕನಿಷ್ಠ 89 ಮಂದಿ ಮೃತಪಟ್ಟಿದ್ದಾರೆ ಎಂದು ಪರಿಹಾರ ಆಯುಕ್ತರ ಕಚೇರಿ ತಿಳಿಸಿದೆ.

ಅಕಾಲಿಕ ಮಳೆಯಿಂದ ಉಂಟಾದ ಜೀವಹಾನಿ ಮತ್ತು ಆಸ್ತಿ ನಷ್ಟವನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗಂಭೀರವಾಗಿ ಪರಿಗಣಿಸಿ, ಪೀಡಿತ ಕುಟುಂಬಗಳಿಗೆ 24 ಗಂಟೆಗಳೊಳಗೆ ಪರಿಹಾರ ತಲುಪುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಇಂದು ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿದ ಪೋಸ್ಟ್‌ನಲ್ಲಿ ಪರಿಹಾರ ಆಯುಕ್ತರ ಕಚೇರಿ, “ಮೇ 13ರಂದು ಬಿರುಗಾಳಿ, ಮಳೆ, ಆಲಿಕಲ್ಲು ಮಳೆ ಮತ್ತು ಸಿಡಿಲು ಸೇರಿದಂತೆ ಪ್ರಾಕೃತಿಕ ವಿಕೋಪದಿಂದ ರಾಜ್ಯದಲ್ಲಿ 89 ಸಾವುಗಳು, 53 ಮಂದಿ ಗಾಯಾಳುಗಳು, 114 ಜಾನುವಾರು ನಷ್ಟಗಳು ಮತ್ತು 87 ಮನೆಗಳಿಗೆ ಹಾನಿಯಾದ ವರದಿಗಳು ಬಂದಿವೆ. ಇದನ್ನು ಮುಖ್ಯಮಂತ್ರಿಗಳು ಗಮನಕ್ಕೆ ತೆಗೆದುಕೊಂಡಿದ್ದಾರೆ” ಎಂದು ತಿಳಿಸಿದೆ.

ಪ್ರಯಾಗ್‌ರಾಜ್ ಜಿಲ್ಲಾ ಆಡಳಿತ ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಹಂಡಿಯಾ ಪ್ರದೇಶದಲ್ಲಿ 7, ಫುಲ್ಪುರ್‌ನಲ್ಲಿ 4, ಸೋರಾವ್‌ನಲ್ಲಿ 3, ಮೇಜಾದಲ್ಲಿ 2 ಮತ್ತು ಸದರ್ ಪ್ರದೇಶದಲ್ಲಿ ಒಬ್ಬರು ಗಾಳಿ-ಮಳೆಯ ಪರಿಣಾಮ ಮೃತಪಟ್ಟಿದ್ದಾರೆ.

ಭದೋಹಿಯಲ್ಲಿ ಗಾಳಿ-ಮಳೆಗೆ ಸಂಬಂಧಿಸಿದ ವಿವಿಧ ಘಟನೆಗಳಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಡಳಿತ ಮೂಲಗಳು ತಿಳಿಸಿವೆ.

ಹೆಚ್ಚುವರಿ ಜಿಲ್ಲಾಧಿಕಾರಿ ಕುನ್ವರ್ ವೀರೇಂದ್ರ ಕುಮಾರ್ ಮೌರ್ಯ, ಹಲವು ಪ್ರದೇಶಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿದ್ದು, ಅನೇಕ ಮನೆಗಳು ಹಾನಿಗೊಳಗಾಗಿವೆ ಎಂದರು.

ಫತೇಹ್‌ಪುರದಲ್ಲಿ ಗಾಳಿ-ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ 9 ಮಂದಿ ಮೃತಪಟ್ಟಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅವಿನಾಶ್ ತ್ರಿಪಾಠಿ ತಿಳಿಸಿದ್ದಾರೆ. ಖಾಗಾ ತಹಸೀಲಿನಲ್ಲಿ ಐದು ಮಹಿಳೆಯರು ಸೇರಿದಂತೆ ಎಂಟು ಮಂದಿ ಮೃತಪಟ್ಟಿದ್ದು, ಸದರ್ ತಾಲ್ಲೂಕಿನಲ್ಲಿ ಮನೆಯ ಗೋಡೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.

ಪ್ರತಾಪ್‌ಗಢದಲ್ಲಿ ಬಿರುಗಾಳಿ ಮತ್ತು ಮಳೆಯ ನಡುವೆ ಗೋಡೆ ಹಾಗೂ ಸಿಮೆಂಟ್ ಶೆಡ್ ಕುಸಿತ ಮತ್ತು ಸಿಡಿಲು ಬಡಿತದ ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

ಪೊಲೀಸ್ ಅಧೀಕ್ಷಕ ದೀಪಕ್ ಭುಕರ್, ಲಾಲ್‌ಗಂಜ್ ಕೋಟ್ವಾಲಿ ವ್ಯಾಪ್ತಿಯ ಓಜಾ ಕಾ ಪುರವಾ ಗ್ರಾಮದಲ್ಲಿ ಸಿಮೆಂಟ್ ಶೆಡ್ ಕುಸಿದು ಅವಶೇಷಗಳಡಿ ಸಿಲುಕಿದ ಭೀಮ್ ಯಾದವ್ (25ವ) ಮೃತಪಟ್ಟಿದ್ದಾರೆ ಎಂದರು. ಹಾಗೆಯೇ ಬಘ್ರಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರಿ ಸ್ವಾಮಿ ಗ್ರಾಮದಲ್ಲಿ ಗೋಡೆ ಕುಸಿದು ಭೂಷಣ್ ಪಾಂಡೆ (56) ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ನರಂಗ್‌ಪುರ ಗ್ರಾಮದ ಶಾಂತಿ ದೇವಿ (46) ಹಾಗೂ ಛತ್ರಪುರ ಶಿವಾಲಾ ರಘ್ನಾ ಗ್ರಾಮದ ಲಾಲ್ ಬಹಾದುರ್ (44) ಕೂಡ ಗಾಳಿ-ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಮೃತಪಟ್ಟಿದ್ದಾರೆ ಎಂದು ಭುಕರ್ ಹೇಳಿದರು. ಕಾನ್ಪುರ ದೇಹಾತ್ ಜಿಲ್ಲೆಯಲ್ಲಿ ಮಳೆಗೆ ಸಂಬಂಧಿಸಿದ ಘಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ರಸೂಲಾಬಾದ್ ಪ್ರದೇಶದ ಭೌಥಾರಿ ಗ್ರಾಮದಲ್ಲಿ ಭಾರೀ ಮಳೆಯ ವೇಳೆ ಆಡುಗಳೊಂದಿಗೆ ಬೇವು ಮರದ ಕೆಳಗೆ ನಿಂತಿದ್ದ 19 ವರ್ಷದ ರೂಚಿ ಎಂಬ ಯುವತಿ ಸಿಡಿಲು ಬಡಿದು ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಹಲವು ಆಡುಗಳೂ ಸಾವಿಗೀಡಾಗಿವೆ. ಅಲ್ಲೇ ನಿಂತಿದ್ದ 60 ವರ್ಷದ ವ್ಯಕ್ತಿಯೊಬ್ಬರೂ ಗಾಯಗೊಂಡಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ (ಹಣಕಾಸು ಮತ್ತು ಆದಾಯ) ದುಶ್ಯಂತ್ ಕುಮಾರ್, ಮಾನವ ಮತ್ತು ಪಶುಹಾನಿಗೆ ಸಂಬಂಧಿಸಿದ ವರದಿಗಳನ್ನು ಸ್ಥಳೀಯ ಅಧಿಕಾರಿಗಳಿಂದ ಕೋರಲಾಗಿದೆ. ಸರ್ಕಾರದ ನಿಯಮಾನುಸಾರ ಆರ್ಥಿಕ ನೆರವು ನೀಡಲಾಗುವುದು ಎಂದರು.

ದಿಯೋರಿಯಾದ ಭೀಂಪುರ್ ಗೌರಾ ಗ್ರಾಮದ ನಿವಾಸಿ ಕೋಮಲ್ ಯಾದವ್ (62ವ) ಸಿಡಿಲು ಬಡಿದು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆಡಳಿತ ಮೂಲಗಳು ತಿಳಿಸಿವೆ. ಈ ಘಟನೆಯಲ್ಲಿ ಇನ್ನಿಬ್ಬರು ಗಾಯಗೊಂಡಿದ್ದಾರೆ.

ಮತ್ತೊಂದು ಘಟನೆಯಲ್ಲಿ, ನೆರುವಾರಿ ಗ್ರಾಮದ ನಿವಾಸಿ ರಾಮನಾಥ್ ಪ್ರಸಾದ್ (65) ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಸೋನ್‌ಭದ್ರ ಜಿಲ್ಲೆಯಲ್ಲಿ ಬಿರುಗಾಳಿ ಮತ್ತು ಮಳೆಯಿಂದ ಉರುಳಿದ ಮರದಡಿ ಸಿಲುಕಿ ಮಾಧವ್ ಸಿಂಗ್ (38ವ) ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜಿಲ್ಲಾಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಕೃತಿ ವಿಕೋಪ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂತ್ರಸ್ತರು ಮತ್ತು ಅವರ ಕುಟುಂಬಗಳಿಗೆ ಅಗತ್ಯವಿರುವ ಎಲ್ಲ ನೆರವು ನೀಡುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿರುವ ಅವರು, ಆದಾಯ ಮತ್ತು ಕೃಷಿ ಇಲಾಖೆಗಳು ಹಾಗೂ ವಿಮಾ ಕಂಪನಿಗಳು ಹಾನಿಯ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

SIR Stage 3: ಕರ್ನಾಟಕ ಸೇರಿ ಮೇ 30ರಿಂದ 16 ರಾಜ್ಯಗಳು, 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ಚುನಾವಣಾ ಆಯೋಗ

ಕೇರಳ ಸಸ್ಪೆನ್ಸ್ ಗೆ ಕೊನೆಗೂ ಬಿತ್ತು ತೆರೆ: ನೂತನ ಮುಖ್ಯಮಂತ್ರಿಯಾಗಿ VD Satheesan ಆಯ್ಕೆ

ಅಮೆರಿಕ-ಚೀನಾ ಶೃಂಗಸಭೆ ಆರಂಭವಾಗುತ್ತಿದ್ದಂತೆ ಟ್ರಂಪ್‌ಗೆ 'ಖಡಕ್' ವಾರ್ನಿಂಗ್‌ ಕೊಟ್ಟ ಕ್ಸಿ ಜಿನ್‌ಪಿಂಗ್‌!

Video: ಇಂಧನ ಉಳಿಸಲು ಬುಲೆಟ್ ಏರಿ ಬಂದ ಮಹಾ ಸಿಎಂ ಫಡ್ನವೀಸ್; ನಡೆದುಕೊಂಡೇ ಬಂದ ಸಚಿವ ರಾಣೆ!

IPL 2026: ಕಳಪೆ ಪ್ರದರ್ಶನ, ಮೂರು ನಾಯಕರ ಮೇಲೆ 'ಗೇಟ್ ಪಾಸ್' ತೂಗುಗತ್ತಿ, ಸಂಚಲನಕಾರಿ ವರದಿ ಬಹಿರಂಗ

SCROLL FOR NEXT