ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ಕೇಂದ್ರದ ಮೇಲೆ ವಾಗ್ದಾಳಿ ನಡೆಸಿದ್ದು, ಮೋದಿ ಸರ್ಕಾರದ ತಪ್ಪಿಗೆ ಸಾರ್ವಜನಿಕರು ಬೆಲೆ ತೆರುತ್ತಿದ್ದಾರೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಲೀಟರ್ಗೆ ತಲಾ ₹3 ಹೆಚ್ಚಿಸಿದ ನಂತರ ಕಾಂಗ್ರೆಸ್ ನಾಯಕ ಟೀಕಿಸಿದ್ದಾರೆ.
ಇರಾನ್-ಅಮೆರಿಕ ನಡುವಿನ ಯುದ್ಧದಿಂದಾಗಿ ಜಾಗತಿಕ ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿದ್ದರಿಂದ ಉಂಟಾದ ಹೊರೆಯ ಒಂದು ಭಾಗವನ್ನು ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಭರಿಸಿದ್ದರಿಂದ ಇದೀಗ ಬೆಲೆ ಏರಿಕೆ ಸಂಭವಿಸಿದೆ. ಇರಾನ್ ಯುದ್ಧ ಪ್ರಾರಂಭವಾದ ನಂತರ ಭಾರತದಲ್ಲಿ ಮೊದಲ ಬಾರಿಗೆ ಇಂಧನ ಬೆಲೆಗಳನ್ನು ಹೆಚ್ಚಿಸಲಾಗಿದೆ.
ಈ ಕುರಿತು ಎಕ್ಸ್ನಲ್ಲಿ ಹಿಂದಿಯಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, 'ಘಲ್ತಿ ಮೋದಿ ಸರ್ಕಾರ್ ಕಿ, ಕೀಮತ್ ಜನ್ತಾ ಚುಕಾಯೇಗಿ (ಮೋದಿ ಸರ್ಕಾರದ ತಪ್ಪಿಗೆ ಸಾರ್ವಜನಿಕರು ಬೆಲೆ ತೆರುವಂತಾಗಿದೆ)' ಎಂದಿದ್ದಾರೆ.
'3 ರೂಪಾಯಿಗಳ ಆಘಾತ ಈಗಾಗಲೇ ಬಂದಿದೆ, ಉಳಿದ 'ವಸೂಲಿ'ಯನ್ನು ಕಂತುಗಳಲ್ಲಿ ಮಾಡಲಾಗುತ್ತದೆ' ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಬರೆದಿದ್ದಾರೆ.
ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ ಸಿಎನ್ಜಿ ಬೆಲೆಯನ್ನು ಕೆಜಿಗೆ ₹2 ಹೆಚ್ಚಿಸಲಾಗಿದೆ.
ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 94.77 ರೂ.ಗಳಿಂದ 97.77 ರೂ.ಗಳಿಗೆ ಹೆಚ್ಚಿಸಲಾಗಿದೆ. ಡೀಸೆಲ್ ಈಗ ಪ್ರತಿ ಲೀಟರ್ಗೆ 87.67 ರೂ.ಗಳಿಂದ 90.67 ರೂ.ಗಳಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಮೌಲ್ಯವರ್ಧಿತ ತೆರಿಗೆಯಲ್ಲಿನ ವ್ಯತ್ಯಾಸಗಳಿಂದಾಗಿ ಪ್ರತಿ ರಾಜ್ಯಗಳಲ್ಲಿಯೂ ಈ ದರಗಳು ಬದಲಾಗುತ್ತವೆ.
ಫೆಬ್ರುವರಿ 28 ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ಮಾಡಿದ ನಂತರ ಮತ್ತು ಟೆಹ್ರಾನ್ನ ಪ್ರತೀಕಾರದ ಪರಿಣಾಮವಾಗಿ ಜಾಗತಿಕ ತೈಲ ಸಾಗಣೆಗೆ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯಲ್ಲಿ ಇಂಧನ ಹರಿವಿಗೆ ಅಡ್ಡಿಯುಂಟಾಗಿದೆ. ಬಳಿಕ ಜಾಗತಿಕ ಕಚ್ಚಾ ತೈಲ ಬೆಲೆಗಳು ಶೇ 50ಕ್ಕಿಂತ ಹೆಚ್ಚು ಏರಿಕೆಯಾಗಿವೆ.