ಸೇಲಂ: AIADMK ಯಲ್ಲಿ ಆಂತರಿಕ ಭಿನ್ನಮತ ಹೆಚ್ಚಾಗುತ್ತಿದ್ದಂತೆಯೇ ಹಿರಿಯ ನಾಯಕ ಎಸ್ ಸೆಮ್ಮಲೈ ಸೋಮವಾರ ಪಕ್ಷಕ್ಕೆ ರಾಜೀನಾಮೆ ನೀಡಿರುವುದಾಗಿ ಘೋಷಿಸಿದ್ದಾರೆ. ಪಕ್ಷದೊಳಗೆ ವಿಭಜನೆ ಬಗ್ಗೆ ತೀವ್ರ ನಿರಾಶೆಯನ್ನು ಸೆಮ್ಮಲೈ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ನಿಧನದ ನಂತರ ಅವಕಾಶಗಳ ಕೊರತೆಯನ್ನೂ ಸಹ ಅವರು ಉಲ್ಲೇಖಿಸಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿನ ನಂತರ ನಡೆಯುತ್ತಿರುವ ಘಟನೆಗಳು ಎಐಎಡಿಎಂಕೆ ಕಾರ್ಯಕರ್ತರಿಗೆ ತೀವ್ರ ದುಃಖವನ್ನುಂಟುಮಾಡಿವೆ ಎಂದು ಸೆಮ್ಮಲೈ ಹೇಳಿದ್ದಾರೆ.
ಚುನಾವಣೆಯ ನಂತರ ಎಐಎಡಿಎಂಕೆಯಲ್ಲಿ ನಡೆದ ಘಟನೆಗಳು ತೀವ್ರ ದುಃಖವನ್ನುಂಟುಮಾಡಿವೆ. ಪಕ್ಷ ಕಟ್ಟಲು ತಮ್ಮನ್ನು ತಾವು ಅರ್ಪಿಸಿಕೊಂಡ ಲಕ್ಷಾಂತರ ಕಾರ್ಯಕರ್ತರು ಹಂಚಿಕೊಂಡ ಭಾವನೆ ಇದು ಎಂದು ಸೆಮ್ಮಲೈ ತಮ್ಮ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ ನಂತರ ಸೇಲಂನಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಸೆಮ್ಮಲೈ, 'ನಾಯಕರ ಅಹಂ' ಮತ್ತು ಸಂಘಟನೆಯೊಳಗೆ ಆರೋಗ್ಯಕರ ಚರ್ಚೆಗಳು ನಡೆಯದೆ ಪಕ್ಷವು ನಿರಂತರವಾಗಿ ದುರ್ಬಲಗೊಳ್ಳುತ್ತಿದೆ ಎಂದು ಹೇಳಿದರು.
"ಪಕ್ಷವು ನಿರಂತರವಾಗಿ ದುರ್ಬಲಗೊಳ್ಳುತ್ತಿದೆ. ಪಕ್ಷದ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತಿರುವ ನಾಯಕರ ಅಹಂಕಾರವೇ ಮುಖ್ಯ ಸಮಸ್ಯೆಯಾಗಿದೆ. ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವಿಕೆ ಅಥವಾ ಆರೋಗ್ಯಕರ ಚರ್ಚೆ ಇಲ್ಲ. ಎಂಜಿಆರ್ ಮತ್ತು ಅಮ್ಮ ಈ ಪಕ್ಷವನ್ನು ಹೇಗೆ ಕಟ್ಟಿದರು ಎಂಬುದರ ಕುರಿತು ನಾಯಕರು ಯೋಚಿಸಬೇಕು. ಭಾರವಾದ ಹೃದಯದಿಂದ ನಾನು ಪಕ್ಷವನ್ನು ತೊರೆಯುವ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ನಾಯಕರು ತಮ್ಮ ಅಹಂಕಾರವನ್ನು ಬಿಟ್ಟು ಪಕ್ಷವನ್ನು ಬಲಪಡಿಸಬೇಕು ಎಂದು ತಿಳಿಸಿದರು. ಬೇರೆ ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವ ಸಾಧ್ಯತೆಯನ್ನು ಅವರು ತಳ್ಳಿಹಾಕಿದರು.
ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಟಿವಿಕೆ ಸರ್ಕಾರದ ಪರವಾಗಿ ಮತ ಚಲಾಯಿಸಿದ ನಂತರ ಎಸ್ಪಿ ವೇಲುಮಣಿ, ಸಿ ವೆ ಷಣ್ಮುಗಂ, ಸಿ ವಿಜಯಭಾಸ್ಕರ್ ಮತ್ತು ನಾಥಮ್ ಆರ್ ವಿಶ್ವನಾಥನ್ ಮತ್ತಿತರ ನಾಯಕರು ತಮ್ಮ ಪಕ್ಷದ ಸ್ಥಾನಗಳಿಂದ ತೆಗೆದುಹಾಕಿದ ಕೆಲವು ದಿನಗಳ ನಂತರ ಸೆಮ್ಮಲೈ ರಾಜೀನಾಮೆ ನಿರ್ಧಾರ ತೆಗೆದುಕೊಂಡಿದ್ದಾರೆ.