ಭೋಪಾಲ್: ನಟಿ ಮತ್ತು ಮಾದರಿ ತ್ವಿಶಾ ಶರ್ಮಾ (Twisha Sharma) ಸಾವಿನ ಬಳಿಕ ಪರಾರಿಯಾಗಿದ್ದ ಪತಿ ಸಮರ್ಥ್ ಸಿಂಗ್ (Samarth Singh) ಶುಕ್ರವಾರ ಸಂಜೆ ಜಬಲ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಲು ಹಾಜರಾದರು ಎಂದು ಅವರ ವಕೀಲರು ತಿಳಿಸಿದ್ದಾರೆ.
ಮಧ್ಯಪ್ರದೇಶ ಹೈಕೋರ್ಟ್ನಲ್ಲಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಸಮರ್ಥ್ ಸಿಂಗ್ ಹಿಂಪಡೆದ ಸುಮಾರು ಒಂದು ಗಂಟೆಯ ಬಳಿಕ ಈ ಬೆಳವಣಿಗೆ ನಡೆದಿದೆ. ಅರ್ಜಿ ಹಿಂಪಡೆಯುತ್ತಿದ್ದಂತೆಯೇ ಶರಣಾಗುವುದನ್ನು ಹೊರತುಪಡಿಸಿ ಅವರಿಗೆ ಬೇರೆ ಆಯ್ಕೆಯೇ ಉಳಿದಿರಲಿಲ್ಲ ಎಂದು ಹೇಳಲಾಗಿದೆ.
ಈ ಬಗ್ಗೆ ಮಾತನಾಡಿರುವ ವಕೀಲ ಮೃಗೆಂದ್ರ ಸಿಂಗ್, 'ಸಮರ್ಥ್ ಸಿಂಗ್ ಜಬಲ್ಪುರ ಜಿಲ್ಲಾ ನ್ಯಾಯಾಲಯಕ್ಕೆ ಶರಣಾಗಲು ಬಂದಿದ್ದಾರೆ' ಎಂದು ಹೇಳಿದರು.
ಅಂತೆಯೇ ಸಮರ್ಥ್ ಸಿಂಗ್ ಪರ ವಕೀಲ ಜಯದೀಪ್ ಕೌರವ್ ಅವರ ಪ್ರಕಾರ, ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ (Avanindra Kumar Singh) ಅವರ ಏಕಸದಸ್ಯ ಪೀಠದ ಮುಂದೆ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ಹೇಳಿದರು.
ಕೆಳ ನ್ಯಾಯಾಲಯವು ಕಳೆದ ವಾರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ಬಳಿಕ, ಸಮರ್ಥ್ ಸಿಂಗ್ ಗುರುವಾರ ಮಧ್ಯಪ್ರದೇಶ ಹೈಕೋರ್ಟ್ಗೆ ಮೊರೆ ಹೋಗಿದ್ದರು.
ತ್ವಿಶಾ ಅತ್ತೆಗೆ ಹೈಕೋರ್ಟ್ ನೋಟಿಸ್
ಇದೇ ವೇಳೆ, ಪ್ರಕರಣದಲ್ಲಿ ಆರೋಪಿಯಾಗಿರುವ ಸಮರ್ಥ್ ಸಿಂಗ್ ಅವರ ತಾಯಿ ಹಾಗೂ ಮಾಜಿ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ (Giribala Singh) ಅವರಿಗೆ ಮಧ್ಯಪ್ರದೇಶ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ. ತ್ವಿಶಾ ಶರ್ಮಾ ಅವರ ತಂದೆ ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳಲ್ಲಿ ಗಿರಿಬಾಲಾ ಸಿಂಗ್ ಅವರಿಗೆ ನೀಡಿರುವ ನಿರೀಕ್ಷಣಾ ಜಾಮೀನನ್ನು ರದ್ದುಪಡಿಸಬೇಕು ಎಂದು ಕೋರಲಾಗಿತ್ತು. ನ್ಯಾಯಮೂರ್ತಿ ಅವನೀಂದ್ರ ಕುಮಾರ್ ಸಿಂಗ್ ಮೇ 25ರಂದು ವಿಚಾರಣೆ ನಿಗದಿಪಡಿಸಿದ್ದಾರೆ.
ಪೊಲೀಸರ ಮೂರನೇ ಮತ್ತು ಅಂತಿಮ ನೋಟಿಸ್
ಗಿರಿಬಾಲಾ ಸಿಂಗ್ ಅವರ ಹೇಳಿಕೆ ದಾಖಲಿಸಲು ಪೊಲೀಸರು ಗುರುವಾರ ಮೂರನೇ ಹಾಗೂ ಅಂತಿಮ ನೋಟಿಸ್ ಜಾರಿಗೊಳಿಸಿದ್ದರು. ಜೊತೆಗೆ, ಅವರು ಭೋಪಾಲ್ ಗ್ರಾಹಕ ನ್ಯಾಯಾಲಯದ ಅಧ್ಯಕ್ಷೆಯಾಗಿ ಮುಂದುವರಿಯಬಹುದೇ ಎಂಬುದರ ಕುರಿತೂ ತನಿಖೆ ಆರಂಭಿಸಲಾಗಿದೆ ಎಂದು ಅಧಿಕೃತ ವಲಯಗಳು ತಿಳಿಸಿವೆ.
“ಅವರು ಸಹಕರಿಸದಿದ್ದರೆ, ಅವರ ಜಾಮೀನು ರದ್ದುಪಡಿಸುವಂತೆ ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡುತ್ತೇವೆ,” ಎಂದು ಭೋಪಾಲ್ ಪೊಲೀಸ್ ಆಯುಕ್ತ ಸಂಜಯ್ ಕುಮಾರ್ (Sanjay Kumar) ಹೇಳಿದ್ದಾರೆ.
ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆಯಾಗಿರುವ ಗಿರಿಬಾಲಾ ಸಿಂಗ್ ಅವರಿಗೆ ಕಳೆದ ವಾರ ಭೋಪಾಲ್ ನ್ಯಾಯಾಲಯ ಮುಂಗಡ ಜಾಮೀನು ಮಂಜೂರು ಮಾಡಿತ್ತು. ತ್ವಿಶಾ ಶರ್ಮಾ ಸಾವಿನ ಪ್ರಕರಣದಲ್ಲಿ ದಾಖಲಾಗಿರುವ FIRನಲ್ಲಿ ಅವರ ಹೆಸರೂ ಸೇರಿಸಲಾಗಿದೆ.
ತ್ವಿಶಾ ಶರ್ಮಾ ಸಾವು
33 ವರ್ಷದ ಮಾದರಿ-ನಟಿ ಟ್ವಿಷಾ ಶರ್ಮಾ ಅವರು ಮೇ 12ರಂದು ಭೋಪಾಲ್ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ತಮ್ಮ ಪತಿಯ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಅತ್ತೆ-ಮಾವಂದಿರು ತ್ವಿಶಾ ಮಾದಕ ವಸ್ತು ವ್ಯಸನದಿಂದ ಬಳಲುತ್ತಿದ್ದರು ಎಂದು ಆರೋಪಿಸುತ್ತಿದ್ದರೆ, ತ್ವಿಶಾ ಕುಟುಂಬವು ವರದಕ್ಷಿಣೆ ಕಿರುಕುಳದಿಂದಲೇ ಅವರ ಸಾವಿಗೆ ಕಾರಣವಾಗಿದೆ ಎಂದು ಹೇಳುತ್ತಿದೆ.
ಪೊಲೀಸರು ಸಮರ್ಥ್ ಸಿಂಗ್ ಮತ್ತು ಅವರ ತಾಯಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS)ಯ ಸೆಕ್ಷನ್ 80(2), 85 ಮತ್ತು 3(5) ಅಡಿಯಲ್ಲಿ, ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆಯ ಸಂಬಂಧಿತ ವಿಧಿಗಳಡಿ ಪ್ರಕರಣ ದಾಖಲಿಸಿದ್ದಾರೆ. ಸಮರ್ಥ್ ಸಿಂಗ್ ಬಂಧನಕ್ಕೆ ಸಹಾಯ ಮಾಡುವ ಮಾಹಿತಿಗೆ ಪೊಲೀಸರು ₹30,000 ನಗದು ಬಹುಮಾನ ಘೋಷಿಸಿದ್ದರು. ಜೊತೆಗೆ, ಅವರ ಪಾಸ್ಪೋರ್ಟ್ ರದ್ದುಪಡಿಸಲು ನ್ಯಾಯಾಲಯಕ್ಕೂ ಮನವಿ ಮಾಡಿದ್ದರು.