ನವದೆಹಲಿ: ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮಿತ್ ರಾಮ್ ರಹೀಮ್ ಸಿಂಗ್ ಅವರಿಗೆ ಮತ್ತೊಮ್ಮೆ 30 ದಿನಗಳ ಪೆರೋಲ್ ಮಂಜೂರಾಗಿದ್ದು, ಮಂಗಳವಾರ ಬೆಳಿಗ್ಗೆ ಹರಿಯಾಣದ ರೋಹ್ತಕ್ನ ಸುನಾರಿಯಾ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
2017ರಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾದ ಬಳಿಕ ರಾಮ್ ರಹೀಮ್ ಜೈಲಿನಿಂದ ಹೊರಬರುತ್ತಿರುವುದು ಇದು 16ನೇ ಬಾರಿ ಎಂಬುದು ಗಮನಾರ್ಹ ವಿಚಾರವಾಗಿದೆ.
57 ವರ್ಷದ ರಾಮ್ ರಹೀಮ್ ವಿರುದ್ಧ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸಲಾಗಿದ್ದು, ಕಳೆದ ಕೆಲವು ವರ್ಷಗಳಿಂದ ಅವರಿಗೆ ಪದೇ ಪದೇ ಪೆರೋಲ್ ನೀಡಲಾಗುತ್ತಿರುವುದು ವಿವಾದಕ್ಕೆ ಕಾರಣವಾಗಿದೆ.
ಇತ್ತೀಚೆಗಷ್ಟೇ ಜನವರಿಯಲ್ಲಿ ಅವರಿಗೆ ಇದೇ ರೀತಿಯ ಪೆರೋಲ್ ನೀಡಲಾಗಿತ್ತು. ಅದಕ್ಕೂ ಮೊದಲು 2025ರ ಆಗಸ್ಟ್ನಲ್ಲಿ 40 ದಿನಗಳ ಪೆರೋಲ್, ಏಪ್ರಿಲ್ನಲ್ಲಿ 21 ದಿನಗಳ ಹಾಗೂ ಫೆಬ್ರವರಿ 5ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಜನವರಿಯಲ್ಲಿ 30 ದಿನಗಳ ಪೆರೋಲ್ ನೀಡಲಾಗಿತ್ತು.
ಇದಕ್ಕೂ ಮುನ್ನ 2024ರ ಅಕ್ಟೋಬರ್ 5ರಂದು ನಡೆದ ಹರಿಯಾಣ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳ ಮೊದಲು ಅಕ್ಟೋಬರ್ 1ರಂದು 20 ದಿನಗಳ ಪೆರೋಲ್ ನೀಡಲಾಗಿತ್ತು.
2024ರ ಆಗಸ್ಟ್ನಲ್ಲಿ 21 ದಿನಗಳ ಹಾಗೂ 2022ರ ಪಂಜಾಬ್ ವಿಧಾನಸಭಾ ಚುನಾವಣೆಗೆ ಎರಡು ವಾರಗಳ ಮೊದಲು ಮೂರು ವಾರಗಳ ಪೆರೋಲ್ ಮಂಜೂರಾಗಿತ್ತು.
ಚುನಾವಣೆಗಳ ಸನ್ನಿಹಿತದಲ್ಲಿ ರಾಮ್ ರಹೀಮ್ಗೆ ಪದೇ ಪದೇ ಪೆರೋಲ್ ಸಿಗುತ್ತಿರುವುದರಿಂದ ಪ್ರತಿಪಕ್ಷಗಳು ಮತ್ತು ಕೆಲವು ಸಂಘಟನೆಗಳು ಸರ್ಕಾರದ ನಿರ್ಧಾರವನ್ನು ಪ್ರಶ್ನೆ ಮಾಡುತ್ತಿವೆ.
ಶಿರೋಮಣಿ ಗುರುದ್ವಾರ ಪ್ರಬಂಧಕ ಸಮಿತಿ (SGPC) ಸೇರಿದಂತೆ ಹಲವು ಸಿಖ್ ಸಂಘಟನೆಗಳು ರಾಮ್ ರಹೀಮ್ಗೆ ಪದೇಪದೇ ಪೆರೋಲ್ ನೀಡುತ್ತಿರುವುದನ್ನು ತೀವ್ರವಾಗಿ ವಿರೋಧಿಸಿವೆ.
ಗಂಭೀರ ಅಪರಾಧಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ವ್ಯಕ್ತಿಗೆ ಇಷ್ಟು ಬಾರಿ ಜೈಲಿನಿಂದ ಹೊರಬರುವ ಅವಕಾಶ ನೀಡುತ್ತಿರುವುದು ನ್ಯಾಯ ವ್ಯವಸ್ಥೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆಯಾಗಿದೆ ಎಂದು ಆರೋಪಿಸಿವೆ.
ತಮ್ಮ ಇಬ್ಬರು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ 20 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿರುವ ಸಿರ್ಸಾ ಮೂಲದ ರಾಮ್ ರಹೀಮ್ ಸಿಂಗ್ ಹರಿಯಾಣದ ರೋಹ್ಟಕ್ನ ಸುನಾರಿಯಾ ಜೈಲು ವಾಸ ಅನುಭವಿಸುತ್ತಿದ್ದಾರೆ.
ಇದಲ್ಲದೆ, ಪತ್ರಕರ್ತ ರಾಮ್ ಚಂದರ್ ಛತ್ರಪತಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆಯೂ ಜೀವಾವಧಿ ಶಿಕ್ಷೆ ವಿಧಿಸಲಾಗಿದ್ದು, ಇದರ ಶಿಕ್ಷೆ ಪ್ರಸ್ತುತ ಶಿಕ್ಷೆಯ ಅವಧಿ ಮುಗಿದ ನಂತರ ಪ್ರಾರಂಭವಾಗಲಿದೆ.
ಸಿರ್ಸಾ ಡೇರಾ ಸಚ್ಚಾ ಸೌದಾ ಪಂಥವು ಹರಿಯಾಣ, ಪಂಜಾಬ್, ರಾಜಸ್ಥಾನ ಮತ್ತು ಇತರ ರಾಜ್ಯಗಳಲ್ಲಿ ಅಪಾರ ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ. ಹರಿಯಾಣದ ಸಿರ್ಸಾ, ಫತೇಹಾಬಾದ್, ಕುರುಕ್ಷೇತ್ರ, ಕೈತಾಲ್ ಮತ್ತು ಹಿಸಾರ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಡೇರಾ ಸೌದಾ ಪಂಥವು ಸಾಕಷ್ಟು ಸಂಖ್ಯೆಯ ಅನುಯಾಯಿಗಳನ್ನು ಹೊಂದಿದೆ.