ನವದೆಹಲಿ: ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಇತ್ತೀಚಿನ ಜಿಡಿಪಿ (GDP) ಅಂಕಿಅಂಶಗಳನ್ನು ಕೇವಲ ಸಂಖ್ಯೆಗಳ ಕಸರತ್ತು ಎಂದು ಕಾಂಗ್ರೆಸ್ ಮಂಗಳವಾರ ಹೇಳಿದೆ. ವಾಸ್ತವ ಅಂಕಿಗಳು ಇದಕ್ಕಿಂತ ಕಡಿಮೆ ಇದೆ. ದೇಶದ ಮಂಕಾದ ಆರ್ಥಿಕತೆಯನ್ನು ಮರೆಮಾಚಿ ಜಿಡಿಪಿ ಡೇಟಾವನ್ನು ತಿರುಚಲಾಗಿದೆ ಎಂದು ಆರೋಪಿಸಿದೆ.
'ಮೇಕ್ ಇನ್ ಇಂಡಿಯಾ' ಸಾಧನೆ ಅಷ್ಟಕಷ್ಟೇ . ಆದರೆ ಮೋದಿ ಸರ್ಕಾರದ ಪ್ರಮುಖ "ಫೇಕ್ ಇನ್ ಇಂಡಿಯಾ" ಯೋಜನೆ ಮಾತ್ರ ಅವ್ಯಾಹತವಾಗಿ ಮುಂದುವರಿದಿದೆ ಎಂದು ಹೇಳಿದೆ. ಮೋದಿ ಸರ್ಕಾರ "ಪ್ರಾಮಾಣಿಕ ಅಂಕಿಅಂಶಗಳನ್ನು ನೀಡಿದರೆ, ನೈಜ ಬೆಳವಣಿಗೆ ದರ ಇನ್ನೂ ಕಡಿಮೆಯಾಗಿರುತ್ತಿತ್ತು ಎಂದು ಕಾಂಗ್ರೆಸ್ನ ಸಂವಹನ ವಿಭಾಗದ ಉಸ್ತುವಾರಿ, ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರತಿಪಾದಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಅವರು ಮಾಹಿತಿ ಹಂಚಿಕೊಂಡಿದ್ದು, ನಿನ್ನೆ ಬಿಡುಗಡೆಯಾದ ದೇಶದ ಜಿಡಿಪಿ ಅಂಕಿಅಂಶಗಳು ಕೇವಲ ಅಂಕಿಅಂಶಗಳ ಕಸರತ್ತು ಅಷ್ಟೇ. ಪದೇ ಪದೇ ವಿಧಾನವನ್ನು ಬದಲಾಯಿಸುವ ಮೂಲಕ, ಮೋದಿ ಸರ್ಕಾರ ಭಾರತದ ಕಳಪೆ ಆರ್ಥಿಕತೆ ಮರೆಮಾಚಿ ಜಿಡಿಪಿ ದತ್ತಾಂಶವನ್ನು ತನಗೆ ಬೇಕಾದಂತೆ ರೂಪಿಸುತ್ತಿದೆ ಎಂದು ಆರೋಪಿಸಿದ್ದಾರೆ.
ನಾಮಮಾತ್ರದ ಜಿಡಿಪಿ ಮತ್ತು ನೈಜ ಜಿಡಿಪಿ ನಡುವಿನ ಅಂತರ ಹಣದುಬ್ಬರವನ್ನು ಸೂಚಿಸಬೇಕು. ಆದರೆ ಸರ್ಕಾರದ ಪ್ರಕಾರ, ಈ ವ್ಯತ್ಯಾಸವು ಕೇವಲ 2.3% ರಷ್ಟಿದೆ.ಈ ತ್ರೈಮಾಸಿಕದಲ್ಲಿ ಸಗಟು ಬೆಲೆ ಸೂಚ್ಯಂಕ (WPI)ಆಧಾರಿತ ಹಣದುಬ್ಬರವು 9% ಕ್ಕಿಂತ ಹೆಚ್ಚಾಗಿದೆ. ಇದು ಸ್ಪಷ್ಟ ವೈರುಧ್ಯವಾಗಿದೆ. ಈ ವರ್ಷ ಜಿಡಿಪಿ ಲೆಕ್ಕಾಚಾರದ ವಿಧಾನವನ್ನು ಎರಡು ಬಾರಿ ಬದಲಾಯಿಸಿರುವ ಮೋದಿ ಸರ್ಕಾರವೇ ಈ ವೈರುಧ್ಯವನ್ನು ಸೃಷ್ಟಿಸಿದೆ ಎಂದು ಅವರು ಹೇಳಿದ್ದಾರೆ.
ಮತ್ತೊಂದೆಡೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಸಲ್ಮಾನ್ ಸೋಜ್, ಪ್ರಧಾನಿ ಮೋದಿ ಅವರು ವಾಸ್ತವಿಕ ನೆಲೆಗಟ್ಟಿನಿಂದ ದೂರವಾಗಿದ್ದಾರೆ ಎಂದು ಹೇಳಿದರು. ದೇಶದಲ್ಲಿ ಚಿಲ್ಲರೆ ಹಣದುಬ್ಬರ ಶೇಕಡಾ 3.9 ರಷ್ಟಿದೆ. ಆದರೆ, ಸರ್ಕಾ ಇದನ್ನು ಕಡಿಮೆ ಎಂದು ಬಿಂಬಿಸುತ್ತಿದೆ. ಮೇಕ್ ಇನ್ ಇಂಡಿಯಾ ಆರಂಭವಾಗಿ 10 ವರ್ಷ ಕಳೆದಿದೆ. ಆದರೂ ಜಿಡಿಪಿಯಲ್ಲಿ ಉತ್ಪಾದನಾ ವಲಯದ ಪಾಲು ಶೇಕಡಾ 13 ಕ್ಕಿಂತ ಕಡಿಮೆಯಿದೆ. ಪ್ರಧಾನಿ ಮೋದಿ ಅವರು ವೋಕಲ್ ಫಾರ್ ಲೋಕಲ್ ಎಂಬ ಅಭಿಯಾನ ನಡೆಸುತ್ತಾರೆ. ಆದರೆ, ಚೀನಾ ಜೊತೆಗಿನ ಭಾರತದ ವ್ಯಾಪಾರ ಕೊಡುಗೆ 112 ಬಿಲಿಯನ್ ಯುಎಸ್ ಡಾಲರ್ನಷ್ಟಿದೆ" ಎಂದು ಅಂಕಿ - ಅಂಶಗಳನ್ನು ನೀಡಿದರು.
ಪ್ರಧಾನಿ ಮೋದಿ ಆತ್ಮ ನಿರ್ಭರ್ ಭಾರತ್ ಬಗ್ಗೆ ಮಾತನಾಡುತ್ತಾರೆ. ಆದರೆ, 2018 ರಿಂದ, ದೇಶದ ಆಯಕಟ್ಟಿನ ಪೆಟ್ರೋಲಿಯಂ ಮೀಸಲು ಸಾಮರ್ಥ್ಯದಲ್ಲಿ ಒಂದೇ ಒಂದು ಹನಿಯೂ ಕಡಿಮೆ ಆಗಿಲ್ಲ. ಕೇಂದ್ರ ಸರ್ಕಾರ ಜಿಡಿಪಿ ದರ ಏರಿಕೆ ಆಗಿದೆ ಎಂದು ಸಂಭ್ರಮಿಸುತ್ತಿದೆ. ಇದು ನಿಜವಾದಲ್ಲಿ, ದೇಶದಲ್ಲಿನ ನಮ್ಮ ಕುಟುಂಬಗಳು ಇನ್ನೂ ಸಾಲವನ್ನು ಏಕೆ ಮಾಡುತ್ತಿವೆ. ಗ್ರಾಮೀಣ ಭಾಗದಲ್ಲಿ ವೇತನ ಹಣದುಬ್ಬರಕ್ಕಿಂತ ಹೆಚ್ಚೇಕೆ ಆಗಿಲ್ಲ?. ಖಾಸಗಿ ಹೂಡಿಕೆ ಏಕೆ ನಿಂತಿದೆ? ಜಿಡಿಪಿಯ ನಿವ್ವಳ ವಿದೇಶಿ ನೇರ ಹೂಡಿಕೆಯ ಪಾಲು ಶೂನ್ಯ ತಲುಪಿದ್ದೇಕೆ? ಯುವ ನಿರುದ್ಯೋಗ ದರ ಶೇಕಡಾ 16 ರಷ್ಟು ಏಕಿದೆ?" ಎಂದು ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.
"2026 ರ ಈ ವರ್ಷವೊಂದರಲ್ಲೇ ಭಾರತದ ಷೇರು ಮಾರುಕಟ್ಟೆಯಿಂದ ಸುಮಾರು 250 ಲಕ್ಷ ಕೋಟಿ ರೂ.ಗಳಷ್ಟು ಹಣವನ್ನು ಹಿಂತೆಗೆದುಕೊಳ್ಳಲಾಗಿದೆ. ದೇಶದ ಆರ್ಥಿಕ ಬೆಳವಣಿಗೆ ಇಷ್ಟೊಂದು ಉತ್ತಮವಾಗಿದ್ದರೆ, ಹೂಡಿಕೆದಾರರು ತಮ್ಮ ಹಣವನ್ನು ಏಕೆ ಹಿಂತೆಗೆದುಕೊಳ್ಳುತ್ತಿದ್ದಾರೆ? ಡಾಲರ್ ಎದುರು ರೂಪಾಯಿ ದರ 58 ಇದ್ದಾಗ ಬಿಜೆಪಿ ಟೀಕಿಸಿತ್ತು. ಈಗ ಅದೇ ರೂಪಾಯಿ ದರ 95ಕ್ಕೆ ಕುಸಿದಿದೆ. ಇದು ಉತ್ತಮ ಆರ್ಥಿಕತೆಯೇ?" ಎಂದು ಪ್ರಶ್ನಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರಕಾರ, ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆಯು ಶೇ. 7.8 ರಷ್ಟು ಬೆಳವಣಿಗೆಯನ್ನು ಕಂಡಿದೆ. ಇರಾನ್ನಲ್ಲಿನ ಯುದ್ಧ ಮತ್ತು ಅದರಿಂದ ಉಂಟಾದ ಜಾಗತಿಕ ಅನಿಶ್ಚಿತತೆಯು ದೇಶೀಯ ಆರ್ಥಿಕ ಚಟುವಟಿಕೆಯ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕಗಳ ನಡುವೆಯೂ ಭಾರತದ ಆರ್ಥಿಕತೆ ಚೇತರಿಕೆ ತೋರಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ಜಿಡಿಪಿ ಬೆಳವಣಿಗೆಯನ್ನು "ಅತ್ಯಂತ ಬೃಹತ್ ಸಾಧನೆ" ಎಂದು ಬಣ್ಣಿಸಿದ್ದಾರೆ.