ಅಡುಗೆ ಮಾಡಲೊಪ್ಪದ ಪತ್ನಿಯ ಕೊಂದ ಪತಿರಾಯ 
ದೇಶ

'ಟೈಮ್ ಇಲ್ಲ.. ಡ್ಯಾನ್ಸ್ ಕ್ಲಾಸ್ ಗೆ ಹೋಗ್ಬೇಕು'; ಅಡುಗೆ ಮಾಡಲು ನಿರಾಕರಿಸಿದ ಪತ್ನಿಯ ಕೊಂದ ಪತಿ ಮಹಾಶಯ

38 ವರ್ಷದ ಯಾಮಿನಿ ಕೃಷ್ಣ ಲಾಲ್ ಯಾದವ್ ಎಂಬ ಮಹಿಳೆ ಗುರುವಾರ ಮೃತಪಟ್ಟಿದ್ದು, ಆಕೆಯ ಪತಿ 41 ವರ್ಷದ ಕೃಷ್ಣ ಲಾಲ್ ಯಾದವ್ ಹಲ್ಲೆ ನಡೆಸಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.

ನಾಗ್ಪುರ: ಅಡುಗೆ ಮಾಡದೇ ಡ್ಯಾನ್ಸ್ ಕ್ಲಾಸ್‌ ಗೆ ಹೋಗುತ್ತಿದ್ದ ಪತ್ನಿಯ ನಡೆ ವಿರುದ್ಧ ಆಕ್ರೋಶಗೊಂಡ ಪತಿಯೋರ್ವ ಆಕೆಯನ್ನು ಕೊಂದು ಹಾಕಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

38 ವರ್ಷದ ಯಾಮಿನಿ ಕೃಷ್ಣ ಲಾಲ್ ಯಾದವ್ ಎಂಬ ಮಹಿಳೆ ಗುರುವಾರ ಮೃತಪಟ್ಟಿದ್ದು, ಆಕೆಯ ಪತಿ 41 ವರ್ಷದ ಕೃಷ್ಣ ಲಾಲ್ ಯಾದವ್ ಹಲ್ಲೆ ನಡೆಸಿದ್ದರಿಂದಲೇ ಆಕೆ ಸಾವನ್ನಪ್ಪಿದ್ದಾಳೆ ಎಂದು ಆರೋಪಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯನ್ನು ಬಂಧಿಸಲಾಗಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ.

ಮೂಲಗಳ ಪ್ರಕಾರ ಈ ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ. ಮಕ್ಕಳ ಮುಂದೆಯೇ ಪತಿ ಕೃಷ್ಣ ಲಾಲ್ ಪತ್ನಿ ಮೇಲೆ ಹಲ್ಲೆ ಮಾಡಿದ್ದ ಎಂದು ಹೇಳಲಾಗಿದೆ.

ಡ್ಯಾನ್ಸ್ ಕ್ಲಾಸ್‌ಗೆ ಹೋಗುವುದನ್ನು ವಿರೋಧಿಸಿದ್ದ ಪತಿ

ಪೊಲೀಸರ ಪ್ರಕಾರ, ಕೆಲಸ ಮುಗಿಸಿಕೊಂಡು ಮನೆಗೆ ಬಂದ ಕೃಷ್ಣ ಲಾಲ್, ತನಗೆ ಹಾಗೂ ಮಕ್ಕಳಿಗೆ ಊಟ ತಯಾರಿಸುವಂತೆ ಯಾಮಿನಿಗೆ ಕೇಳಿದ್ದ. ಆದರೆ ಯಾಮಿನಿ ತಮ್ಮ ವಸತಿ ಸಮುಚ್ಚಯದಲ್ಲೇ ನಡೆಯುತ್ತಿದ್ದ ಡ್ಯಾನ್ಸ್ ಕ್ಲಾಸ್‌ಗೆ ಹೋಗಲು ಸಿದ್ಧವಾಗುತ್ತಿದ್ದರು. ಹೀಗಾಗಿ ಊಟ ತಯಾರಿಸಲು ನಿರಾಕರಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಇಬ್ಬರ ನಡುವೆ ಮಾತಿನ ಚಕಮಕಿ ಆರಂಭವಾಗಿದ್ದು, ಬಳಿಕ ಜಗಳ ವಿಕೋಪಕ್ಕೆ ತಿರುಗಿದೆ. ಆ ಸಮಯದಲ್ಲಿ ಕೃಷ್ಣ ಲಾಲ್ ಮದ್ಯದ ಅಮಲಿನಲ್ಲಿದ್ದ ಎನ್ನಲಾಗಿದ್ದು, ಇಬ್ಬರು ಮಕ್ಕಳ ಎದುರೇ ಯಾಮಿನಿಯ ಕುತ್ತಿಗೆ ಹಾಗೂ ಹೊಟ್ಟೆಯ ಭಾಗಕ್ಕೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನೋವಿನಿಂದ ಬಳಲಿದ ಯಾಮಿನಿ

ಹಲ್ಲೆಯ ಬಳಿಕ ಯಾಮಿನಿ ಕುತ್ತಿಗೆ ಹಾಗೂ ಹೊಟ್ಟೆಯಲ್ಲಿ ತೀವ್ರ ನೋವು ಇದೆ ಎಂದು ಪತಿಗೆ ತಿಳಿಸಿದ್ದರು. ನೋವು ನಿವಾರಕ ಮಾತ್ರೆ ತಂದುಕೊಡುವಂತೆ ಕೇಳಿಕೊಂಡಿದ್ದರು. ಕೃಷ್ಣ ಲಾಲ್ ಔಷಧಿ ತರಲು ಮೆಡಿಕಲ್ ಸ್ಟೋರ್‌ಗೆ ತೆರಳಿದಾಗ ಅದು ಮುಚ್ಚಿತ್ತು. ಹೀಗಾಗಿ ಔಷಧಿ ಇಲ್ಲದೆ ಮನೆಗೆ ವಾಪಸ್ ಬಂದಿದ್ದಾನೆ.

ಈ ನಡುವೆ ಯಾಮಿನಿಯ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಆಂತರಿಕ ಗಾಯಗಳಿಂದ ಹೊಟ್ಟೆ ಊದಿಕೊಳ್ಳಲು ಆರಂಭಿಸಿತ್ತು. ಬಳಿಕ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಯಾಮಿನಿ ಮೃತಪಟ್ಟಿದ್ದಾರೆ.

ಮರಣೋತ್ತರ ಪರೀಕ್ಷೆ, ಬಯಲಾಗಿದ್ದೇ ರೋಚಕ

ಆರಂಭದಲ್ಲಿ ಪೊಲೀಸರು ಇದನ್ನು ಅಪಘಾತದಿಂದ ಸಂಭವಿಸಿದ ಸಾವು ಎಂದು ಪ್ರಕರಣ ದಾಖಲಿಸಿ, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗಂಭೀರ ಗಾಯಗಳು ಪತ್ತೆಯಾಗಿವೆ. ಕುತ್ತಿಗೆಯ ಮೂಳೆ ಮುರಿದಿರುವುದು ಹಾಗೂ ಕರುಳಿಗೆ ತೀವ್ರ ಹಾನಿಯಾಗಿರುವುದು ವರದಿಯಲ್ಲಿ ಕಂಡುಬಂದಿದೆ.

ವರದಿಯಲ್ಲಿ ಕುತ್ತಿಗೆ ಹಿಸುಕಿದ ಗುರುತುಗಳು ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯಗಳಿರುವುದು ಬೆಳಕಿಗೆ ಬಂದ ಬಳಿಕ ಪೊಲೀಸರು ಪ್ರಕರಣದ ದಿಕ್ಕನ್ನು ಬದಲಿಸಿ ತನಿಖೆ ನಡೆಸಿದರು.

ಮರಣೋತ್ತರ ಪರೀಕ್ಷೆಯ ವರದಿ ಆಧರಿಸಿ ಪೊಲೀಸರು ಕೃಷ್ಣ ಲಾಲ್‌ನನ್ನು ವಿಚಾರಣೆ ನಡೆಸಿ ಬಳಿಕ ಬಂಧಿಸಿದ್ದಾರೆ. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದ್ದು, ಪ್ರಕರಣದ ಮುಂದಿನ ತನಿಖೆ ಮುಂದುವರಿದಿದೆ.

‘ಮೊದಲು ಇದು ಸಾಮಾನ್ಯ ದಾಂಪತ್ಯ ಜಗಳ ಅಂದುಕೊಂಡಿದ್ದೆವು’

ಯಾಮಿನಿಯ ಸಹೋದರ ಮಾಧ್ಯಮಗಳೊಂದಿಗೆ ಮಾತನಾಡಿ, ಆರಂಭದಲ್ಲಿ ಕುಟುಂಬಕ್ಕೆ ಆಕೆಯ ಸಾವು ದುರಂತ ಘಟನೆ ಎಂದು ಅನಿಸಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿತು ಎಂದು ಹೇಳಿದ್ದಾರೆ.

“ನಾವು ಮುಂಬೈನಲ್ಲಿದ್ದಾಗ ನನ್ನ ಸಹೋದರಿ ಮೃತಪಟ್ಟಿದ್ದಾಳೆ ಎಂಬ ಕರೆ ಬಂದಿತು. ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಕುತ್ತಿಗೆ ಹಿಸುಕಿರುವುದು ಹಾಗೂ ಹೊಟ್ಟೆಯ ಭಾಗದಲ್ಲಿ ಗಂಭೀರ ಗಾಯಗಳಾಗಿರುವುದು ಗೊತ್ತಾಯಿತು. ಹೊಟ್ಟೆಗೆ ಹಲ್ಲೆ ನಡೆದಿರುವುದು ವರದಿಯಲ್ಲಿ ಕಂಡುಬಂತು. ಇದರ ಆಧಾರದ ಮೇಲೆ ಪೊಲೀಸರು ತಕ್ಷಣ ಎಫ್‌ಐಆರ್ ದಾಖಲಿಸಿ ನನ್ನ ಭಾವ ಕೃಷ್ಣ ಲಾಲ್ ಯಾದವ್‌ನನ್ನು ಬಂಧಿಸಿದರು. ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಜಗಳ ಇದೇ ಮೊದಲೇನಲ್ಲ

ಹಿಂದೆಯೂ ದಂಪತಿ ನಡುವೆ ಜಗಳಗಳು ನಡೆಯುತ್ತಿದ್ದವು. ನನ್ನ ಸಹೋದರಿ ಕೆಲವೊಮ್ಮೆ ನನಗೆ ಜಗಳದ ಬಗ್ಗೆ ಹೇಳುತ್ತಿದ್ದಳು. ನಾನು ಧೈರ್ಯವಾಗಿ ಮಾತನಾಡು ಅಥವಾ ನಾವು ಮಧ್ಯಪ್ರವೇಶಿಸುತ್ತೇವೆ ಎಂದು ಹೇಳುತ್ತಿದ್ದೆ.

ಆದರೆ ‘ಬಿಡಿ, ಇದು ಕುಟುಂಬದ ವಿಚಾರ. ನೀವು ಏನಾದರೂ ಹೇಳಿದರೆ ಮುಂದೆ ನಾನು ಮತ್ತಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ’ ಎಂದು ಆಕೆ ಹೇಳುತ್ತಿದ್ದಳು” ಎಂದು ಅವರು ವಿವರಿಸಿದ್ದಾರೆ.

ಆಕೆ ಮಧ್ಯಪ್ರವೇಶಿಸದಂತೆ ಹೇಳಿದ್ದರಿಂದ ಕುಟುಂಬದವರು ಕೂಡ ಸುಮ್ಮನಿದ್ದರು. ದಂಪತಿ ನಡುವಿನ ಸಾಮಾನ್ಯ ಜಗಳ ಎಂದೇ ಭಾವಿಸಿದ್ದೆವು. ಆದರೆ ಇದೀಗ ಇಂತಹ ದುರಂತ ಸಂಭವಿಸಿದೆ ಎಂದು ಯಾಮಿನಿಯ ಸಹೋದರ ವಿಷಾದಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮಳೆ, 15,500 ಅಡಿ ಎತ್ತರದಲ್ಲಿ ಸೇನಾ ಕಾರ್ಯಾಚರಣೆ; ಪಾಕ್‌ ಉಗ್ರನ ಬೇಟೆ, 3 ಪ್ರಮುಖ ದಾಳಿಗಳಲ್ಲಿ ಶಾಮೀಲಾಗಿದ್ದ Yasir ಹತ

‘SIR ಹೆಸರಿನಲ್ಲಿ ಮುಸ್ಲಿಮರನ್ನು ಬಾಂಗ್ಲಾದೇಶ ನುಸುಳುಕೋರರೆಂದು ಬಿಂಬಿಸಬೇಡಿ’: ಮಾಜಿ ಮುಖ್ಯ ಚುನಾವಣಾ ಆಯುಕ್ತ S Y Quraishi

'ಅಸಹ್ಯಕರ' ಕೋರ್ಟ್‌ನ ಆತ್ಮಸಾಕ್ಷಿಗೆ ನೋವುಂಟಾಗಿದೆ: ಮೋದಿ ಪೋಸ್ಟರ್ ಪ್ರದರ್ಶಿಸಿದ್ದ ಬಂಗಾಳಿ ನಟಿಗೆ ಹೈಕೋರ್ಟ್‌ ತರಾಟೆ!

'ಜನರ ಬಳಿಗೇ ಸರ್ಕಾರ, ದೊರೆ ಎನ್ನಬೇಡಿ, ಸೇವಕ ಎನ್ನಿ': ಕರ್ನಾಟಕದಲ್ಲಿ ‘ಪ್ರಜಾಸೇವಾ ಅಭಿಯಾನ’ಕ್ಕೆ CM ಡಿಕೆ ಶಿವಕುಮಾರ್ ಚಾಲನೆ

ರಾಜ್ಯದ ಶಿಕ್ಷಕರಿಗೆ ಗುಡ್ ನ್ಯೂಸ್: ಇನ್ಮುಂದೆ ತಮ್ಮ ಹೆಸರಿಗೆ ಮೊದಲು 'Tr' ಬಳಸುವ ಅವಕಾಶ!