ಶ್ರೀನಗರ: ಶ್ರೀನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ ಮತ್ತು ಓಮರ್ ಅಬ್ದುಲ್ಲಾ 'ವಂದೇ ಮಾತರಂ' ಪೂರ್ಣ ಗೀತೆಗೆ ಎದ್ದು ನಿಂತು ಗೌರವ ಸಲ್ಲಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ‘ವಂದೇ ಮಾತರಂ’ ಗೀತೆ ಹಾಡಿದಾಗ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಎನ್ಸಿ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಎದ್ದುನಿಂತು ಗೌರವ ಸಲ್ಲಿಸಿದ್ದು ರಾಷ್ಟ್ರ ರಾಜಕಾರಣದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದೆ.
ಪೂರ್ಣ ಗೀತೆಯನ್ನು ನುಡಿಸಿರುವುದಕ್ಕೆ ಮಿತ್ರಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಎನ್ಸಿಯು “ನಮ್ಮ ಮೇಲೆ ಯಾರೂ ನಿರ್ಬಂಧ ಹೇರಲು ಸಾಧ್ಯವಿಲ್ಲ” ಎಂದು ತಿರುಗೇಟು ನೀಡಿದೆ. ಇದೇ ವೇಳೆ ಬಿಜೆಪಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದು, ಪಕ್ಷವನ್ನು 21ನೇ ಶತಮಾನದ ನವ ಮುಸ್ಲಿಂ ಲೀಗ್ ಎಂದು ಕರೆದಿದೆ.
ಶ್ರೀನಗರದಲ್ಲಿ ನಡೆದ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯ ಎಲ್ಲಾ ಆರು ಚರಣಗಳನ್ನು ನುಡಿಸಲಾಯಿತು. ಈ ವೇಳೆ ವೇದಿಕೆಯಲ್ಲಿದ್ದ ಒಮರ್ ಅಬ್ದುಲ್ಲಾ ಹಾಗೂ ಫಾರೂಕ್ ಅಬ್ದುಲ್ಲಾ ಇಬ್ಬರೂ ಹಾಡು ಮುಗಿಯುವವರೆಗೂ ಎದ್ದುನಿಂತು ಗೌರವ ಸೂಚಿಸಿದರು.
ಕಾರ್ಯಕ್ರಮದಲ್ಲಿ ಪೂರ್ಣ ಗೀತೆಯನ್ನು ಹಾಡುತ್ತಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ವಂದೇ ಮಾತರಂ ಗೀತೆಯ ಎರಡು ಚರಣಗಳಿಗೆ ಮಾತ್ರ ಬದ್ಧವಾಗಿರುವಂತೆ ನ್ಯಾಷನಲ್ ಕಾನ್ಫರೆನ್ಸ್ಗೆ ಸಲಹೆ ನೀಡಿದ್ದಾರೆ.
ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದು ಭಾರತದ ಜಾತ್ಯತೀತ ಮತ್ತು ಸೌಹಾರ್ದಯುತ ಆಶಯಗಳಿಗೆ ಸೂಕ್ತವಾಗಿ ಹೊಂದುವುದಿಲ್ಲ ಎಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ಅಭಿಪ್ರಾಯಪಟ್ಟಿದ್ದಾರೆ. ಮಹಾತ್ಮ ಗಾಂಧಿ, ಪಂಡಿತ್ ನೆಹರೂ, ಸರ್ದಾರ್ ಪಟೇಲ್, ಸುಭಾಷ್ ಚಂದ್ರ ಬೋಸ್, ರಾಜೇಂದ್ರ ಪ್ರಸಾದ್, ಆಚಾರ್ಯ ನರೇಂದ್ರ ದೇವ್, ಮೌಲಾನಾ ಆಜಾದ್, ಸರೋಜಿನಿ ನಾಯ್ಡು ಮತ್ತು ಜೆ.ಬಿ. ಕೃಪಲಾನಿ ಅವರ ನಿರ್ಧಾರವೇ ನಮ್ಮ ನಿರ್ಧಾರವಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಗೌರವಿಸಿ, ಕಾಂಗ್ರೆಸ್ ಅಂಗೀಕರಿಸಿರುವ ಗೀತೆಯನ್ನು ಮಾತ್ರ ಹಾಡಲು ಮಿತ್ರಪಕ್ಷಗಳಿಗೆ ಮನವಿ ಮಾಡಿದ್ದಾರೆ.
ಮೈತ್ರಿಕೂಟದ ಪಾಲುದಾರರಾಗಿ ನಾವು ಏನನ್ನು ಹಾಡಬೇಕು ಅಥವಾ ಎಷ್ಟು ಹಾಡಬೇಕು ಎಂಬುದನ್ನು ನೀವು ನಿರ್ದೇಶಿಸಲು ಸಾಧ್ಯವಿಲ್ಲ. ನಿಮಗೆ ಟ್ವೀಟ್ ಮಾಡುವ ಹಕ್ಕು ಇದೆಯಾದರೂ, ಅದನ್ನು ನಮ್ಮ ಮೇಲೆ ಹೇರಲಾಗುವುದಿಲ್ಲ ಎಂದು ಎನ್ಸಿ ನಾಯಕ ಬಶೀರ್ ಅಹಮದ್ ಹೇಳಿದ್ದಾರೆ.
ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿರವುದನ್ನು ನೋಡಿದರೆ, ಅದು 21ನೇ ಶತಮಾನದ ಹೊಸ 'ಮುಸ್ಲಿಂ ಲೀಗ್' ಆಗಿ ಬದಲಾಗಿದೆ ಎಂಬುದಕ್ಕೆ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ಸಂಸದ ಮತ್ತು ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.