ರಾಯಪುರ: ದೇಶದಲ್ಲಿ ಜಾತಿ ಪದ್ಧತಿ ಕೊನೆಗೊಂಡರೆ 'ಮೀಸಲಾತಿಯನ್ನು ಬಿಟ್ಟುಕೊಡಲು ನಾವು ಸಿದ್ಧ' ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಬುಧವಾರ ಹೇಳಿದ್ದಾರೆ.
ಛತ್ತೀಸ್ಗಢಕ್ಕೆ ಒಂದು ದಿನದ ಭೇಟಿಗಾಗಿ ರಾಯಪುರದ ಸ್ವಾಮಿ ವಿವೇಕಾನಂದ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ರಾಜ್ಯ ಸಚಿವರು, ಸಂವಿಧಾನಕ್ಕೆ ವಿರುದ್ಧವಾಗಿ ಮೀಸಲಾತಿ ವಿರೋಧಿಸುವುದು ಸರಿಯಲ್ಲ ಎಂದು ಹೇಳಿದರು.
ಮೀಸಲಾತಿಯನ್ನು ರದ್ದುಗೊಳಿಸುವ ಅಥವಾ ಅದರಲ್ಲಿ ತಿದ್ದುಪಡಿ ತರುವ ಬೇಡಿಕೆಗಳು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅಠಾವಳೆ, ದುರ್ಬಲ ವರ್ಗದವರಿಗೆ ಅವಕಾಶಗಳನ್ನು ಕಲ್ಪಿಸುವ ಮೂಲಕ ದೇಶವನ್ನು ಬಲಪಡಿಸಲು ಈ ನೀತಿಯನ್ನು ಜಾರಿಗೆ ತರಲಾಗಿದೆ. ದೇಶದಲ್ಲಿ ಜಾತಿ ಪದ್ಧತಿ ಕೊನೆಗೊಂಡಾಗ ಮಾತ್ರ ಮೀಸಲಾತಿಯನ್ನು ಬಿಟ್ಟುಕೊಡಲು ನಾವು ಸಿದ್ಧರಿದ್ದೇವೆ ಎಂದರು.
ಭಾರತದ ಮೀಸಲಾತಿ ನೀತಿಯ ಕುರಿತು ವಿವರಿಸಿದ ಸಚಿವರು, 1950ರಲ್ಲಿ ಸಂವಿಧಾನ ಜಾರಿಗೆ ಬಂದಾಗ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿಯನ್ನು ಕಲ್ಪಿಸಲಾಯಿತು. ಆದರೆ ಇತರ ಹಿಂದುಳಿದ ವರ್ಗಗಳಿಗೆ (OBC) ಮೀಸಲಾತಿಯನ್ನು 1990-91ರಲ್ಲಿ ವಿ.ಪಿ. ಸಿಂಗ್ ಅವರ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಯಿತು.ನಂತರ ನರೇಂದ್ರ ಮೋದಿ ಸರ್ಕಾರವು SC, ST ಅಥವಾ OBC ವರ್ಗಗಳ ವ್ಯಾಪ್ತಿಗೆ ಬಾರದ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗದವರಿಗೆ (EWS) ಶೇಕಡಾ 10ರಷ್ಟು ಮೀಸಲಾತಿಯನ್ನು ಪರಿಚಯಿಸಿತು ಎಂದು ಅವರು ಹೇಳಿದರು.
ಮೀಸಲಾತಿಯು ಜಾತಿಯ ಆಧಾರದ ಮೇಲಿದೆ. ಸಂವಿಧಾನದ 17ನೇ ವಿಧಿಯು ಅಸ್ಪೃಶ್ಯತೆಯನ್ನು ನಿರ್ಮೂಲನೆ ಮಾಡಿದ್ದರೂ, ದಲಿತರು ಮತ್ತು ಬುಡಕಟ್ಟು ಜನಾಂಗದವರ ವಿರುದ್ಧ ದೌರ್ಜನ್ಯಗಳು ಇನ್ನೂ ನಡೆಯುತ್ತಲೇ ಇವೆ. ಜಾತಿ ಪದ್ಧತಿ ನಿರ್ಮೂಲನೆಯಾಗುವವರೆಗೂ ಮೀಸಲಾತಿ ಮುಂದುವರಿಯಬೇಕು" ಎಂದು ಅಠಾವಳೆ ಪ್ರತಿಪಾದಿಸಿದರು.
"ನೀವು ಜಾತಿ ಪದ್ಧತಿಯನ್ನು ಕೊನೆಗೊಳಿಸಲು ಸಾಧ್ಯವಾದರೆ, ನಾವು ಮೀಸಲಾತಿಯನ್ನು ಬಿಟ್ಟುಕೊಡಲು ಸಿದ್ಧರಿದ್ದೇವೆ. ಆದರೆ ಮೀಸಲಾತಿಯನ್ನು ವಿರೋಧಿಸುವುದು ಸರಿಯಲ್ಲ. ಇದು ಸಂವಿಧಾನಕ್ಕೆ ವಿರುದ್ಧವಾಗಿದೆ. ಮೀಸಲಾತಿಯನ್ನು ವಿರೋಧಿಸುವವರು ಸಂವಾದ ನಡೆಸಬೇಕು ಮತ್ತು ತಮ್ಮ ಬೇಡಿಕೆಗಳನ್ನು ಮುಂದಿಡಬೇಕು ಎಂದು ಅಠಾವಳೆ ಸಲಹೆ ನೀಡಿದರು.
ಮಂಗಳವಾರ ವಡೋದರಾದಲ್ಲಿ 'ಜೆನ್ ಝಡ್' (Gen Z) ಮತ್ತು ಯುವಜನರೊಂದಿಗೆ ಪ್ರಧಾನಿ ಮೋದಿ ನಡೆಸಿದ ಸಂವಾದವನ್ನು ಪ್ರಸ್ತಾಪಿಸಿದ ಅಠಾವಲೆ, ಕಳೆದ 12 ವರ್ಷಗಳಲ್ಲಿ ಸರ್ಕಾರ ಸಾಧಿಸಿರುವ ಪ್ರಗತಿಯನ್ನು ಪ್ರಧಾನಿ ಎತ್ತಿ ತೋರಿಸಿದ್ದಾರೆ. ರಾಹುಲ್ ಗಾಂಧಿ ಯಾವಾಗಲೂ ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ಸುಳ್ಳು ಭರವಸೆಗಳನ್ನು ನೀಡುವವರ ಮಾತುಗಳಿಗೆ ಗಮನ ನೀಡದಂತೆ ಮೋದಿಜಿ ಅವರು 'ಜೆನ್ ಝಡ್'ಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.