ಉತ್ತರಾಖಂಡ: 2016ರಲ್ಲಿ ಉತ್ತರಾಖಂಡ ಸಬಾರ್ಡಿನೇಟ್ ಸರ್ವಿಸ್ ಸೆಲೆಕ್ಷನ್ ಕಮಿಷನ್ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ತನಿಖೆಯ ಭಾಗವಾಗಿ, ಜಾರಿ ನಿರ್ದೇಶನಾಲಯವು (ED) ತಮ್ಮ ಆಪ್ತ ಸಹಾಯಕ ಚಂದನ್ ಸಿಂಗ್ ಜೀನಾ ಅವರ ನಿವಾಸದ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ಹರೀಶ್ ರಾವತ್ ಅವರು ಕಾಂಗ್ರೆಸ್ನ ಎರಡು ಹುದ್ದೆಗಳಿಗೆ ರಾಜೀನಾಮೆ ಘೋಷಿಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪಕ್ಷ ನಡೆಸುತ್ತಿರುವ ಹೋರಾಟ ತಮ್ಮ ಆಪ್ತ ಸಹಾಯಕನಿಗೆ ಸಂಬಂಧಿಸಿದ ವಿವಾದವೊಂದು ದುರ್ಬಲಗೊಳಿಸಬಾರದು ಎಂದು ರಾವತ್ ಅಭಿಪ್ರಾಯಪಟ್ಟರು. ಹೀಗಾಗಿ, ಉತ್ತರಾಖಂಡ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯತ್ವ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಶಾಶ್ವತ ಆಹ್ವಾನಿತ ಸದಸ್ಯ ಸ್ಥಾನದಿಂದ ಕೆಳಗಿಳಿಯಲು ಅವರು ನಿರ್ಧರಿಸಿದ್ದಾರೆ.
ಮಾಜಿ UKSSSC ಅಧಿಕಾರಿಗಳು, OMR ಶೀಟ್ಗಳ ಸಂಸ್ಕರಣೆಯಲ್ಲಿ ತೊಡಗಿದ್ದ ಖಾಸಗಿ ಕಂಪ್ಯೂಟರ್ ಏಜೆನ್ಸಿಯ ಮಾಲೀಕರು ಮತ್ತು ಮಧ್ಯವರ್ತಿಗಳೆಂದು ಶಂಕಿಸಲಾದ ವ್ಯಕ್ತಿಗಳಿಗೆ ಸಂಬಂಧಿಸಿದ ಸ್ಥಳಗಳು ಸೇರಿದಂತೆ ಡೆಹ್ರಾಡೂನ್ನ ಹಲವೆಡೆ ಗುರುವಾರ ದಾಳಿ ನಡೆಸಿದ್ದಾಗಿ ED ತಿಳಿಸಿದೆ.
ಈ ಶೋಧ ಕಾರ್ಯಾಚರಣೆಯ ವೇಳೆ, ಜೀನಾ ಅವರ ನಿವಾಸದಿಂದ 32 ಲಕ್ಷ ರೂಪಾಯಿ ನಗದು, ಚಿನ್ನ ಮತ್ತು ದುಬಾರಿ ಕೈಗಡಿಯಾರಗಳನ್ನು ಏಜೆನ್ಸಿ ವಶಪಡಿಸಿಕೊಂಡಿದೆ.
2016ರಲ್ಲಿ UKSSSC ನಡೆಸಿದ 'ಗ್ರಾಮ ಪಂಚಾಯತ್ ವಿಕಾಸ್ ಅಧಿಕಾರಿ' ಹುದ್ದೆಯ ಪರೀಕ್ಷೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಉತ್ತರಾಖಂಡ ಪೊಲೀಸರು ಮತ್ತು ವಿಜಿಲೆನ್ಸ್ ಬ್ಯೂರೋ ದಾಖಲಿಸಿದ ನಾಲ್ಕು ಎಫ್ಐಆರ್ಗಳ (FIR) ಆಧಾರದ ಮೇಲೆ ED ಈ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ದಾಖಲಿಸಿದೆ.
ಇಡಿ ಮಾಹಿತಿ ಪ್ರಕಾರ, ಜೀನಾ ನಿವಾಸದಲ್ಲಿ ಪತ್ತೆಯಾದ 12 ವಾಚ್ಗಳಲ್ಲಿ ರೋಲೆಕ್ಸ್ (Rolex), ರಾಡೋ (Rado), ಪಿಯಾಜೆ (Piaget), ಮೊವಾಡೊ (Movado), ಟಿಸ್ಸಾಟ್ (Tissot) ಹಾಗೂ Casio Edifice ಸೇರಿದಂತೆ ಹಲವು ಪ್ರತಿಷ್ಠಿತ ಬ್ರ್ಯಾಂಡ್ಗಳ ವಾಚ್ಗಳಿವೆ. ಜೀನಾ ಅವರು ಪ್ರಸ್ತುತ ಮಾಜಿ ಸಿಎಂ ಹರೀಶ್ ರಾವತ್ ಅವರ ಪಿಎ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2014 ರಿಂದ 2017ರ ವರೆಗೆ ಹರೀಶ್ ರಾವತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು OSD (ವಿಶೇಷ ಕರ್ತವ್ಯ ಅಧಿಕಾರಿ) ಆಗಿಯೂ ಕೆಲಸ ಮಾಡಿದ್ದರು.