ನವದೆಹಲಿ: ದುಬೈಗೆ ತೆರಳಬೇಕಿದ್ದ ಸ್ಪೈಸ್ಜೆಟ್ (SpiceJet) ವಿಮಾನಗಳ ಸಮಯವನ್ನು ಪದೇ ಪದೇ ಬದಲಾಯಿಸಿದ್ದರಿಂದ ಮತ್ತು ವಿಪರೀತ ವಿಳಂಬ ಉಂಟಾದ ಕಾರಣ, ಸುಮಾರು 200 ಪ್ರಯಾಣಿಕರು ದೆಹಲಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಿರುವ ಘಟನೆ ನಡೆದಿದೆ.
SG 5111 ಮತ್ತು SG 5105 ಎಂಬ ಎರಡು ವಿಮಾನಗಳು ಕ್ರಮವಾಗಿ ಸೋಮವಾರ ಬೆಳಿಗ್ಗೆ ಮತ್ತು ಸಂಜೆ ದುಬೈಗೆ ಹೊರಡಬೇಕಿತ್ತು. ಆದರೆ, ಅವುಗಳ ನಿರ್ಗಮನ ಸಮಯವನ್ನು ಬದಲಾಯಿಸಲಾಯಿತು. ಇದರಿಂದಾಗಿ ಅನೇಕ ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿಯೇ ಸಿಲುಕಿಕೊಂಡಿದ್ದರು ಎಂದು ಮೂಲಗಳು ಹೇಳಿವೆ.
ಈ ಕುರಿತು ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆಯ ವಕ್ತಾರರು, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು, ಪರ್ಯಾಯ ವಿಮಾನಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಸೋಮವಾರ ಸಂಜೆಯಿಂದಲೇ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 3 (T3) ರ ವಿವಿಧ ಕಡೆಗಳಲ್ಲಿ ಸುಮಾರು 200 ಪ್ರಯಾಣಿಕರು ಪ್ರತಿಭಟನೆ ನಡೆಸಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ಈ ವಿಷಯವನ್ನು ಸ್ಪೈಸ್ಜೆಟ್ನ ಉನ್ನತ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.
"ವಿಮಾನವೊಂದನ್ನು ಕಾರ್ಯಾಚರಣೆಯಿಂದ ಹಿಂಪಡೆದ (grounding) ಕಾರಣ ದೆಹಲಿಯಿಂದ ದುಬೈಗೆ ತೆರಳುವ ಸ್ಪೈಸ್ಜೆಟ್ನ ಎರಡು ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿವೆ. ತೊಂದರೆಗೀಡಾದ ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಅನಾನುಕೂಲತೆಯನ್ನು ಕಡಿಮೆ ಮಾಡಲು ವಿಮಾನಯಾನ ಸಂಸ್ಥೆಯು ಎಲ್ಲ ಪ್ರಯತ್ನಗಳನ್ನು ಮಾಡಿದೆ ಎಂದು ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸ್ಪೈಸ್ಜೆಟ್ ಹಲವು ಸವಾಲುಗಳನ್ನು ಎದುರಿಸುತ್ತಿದೆ. ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಿಯಂತ್ರಕ ಸಂಸ್ಥೆಯಾದ ಡಿಜಿಸಿಎ (DGCA) ಸ್ಪೈಸ್ಜೆಟ್ನ ಆರ್ಥಿಕ ಸ್ಥಿತಿ ಮತ್ತು ಕಾರ್ಯಾಚರಣೆಗಳ ಮೇಲೆ ನಿಕಟ ನಿಗಾ ಇರಿಸಿವೆ ಎಂದು ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದರು.