ನಾಸಿಕ್ (ಮಹಾರಾಷ್ಟ್ರ): ಜನರ ಸೇವೆಯೇ ಜನಾರ್ಧನ ಸೇವೆ ಅನ್ನುತೇವೆ. ಆದರೆ, ಈ ಜನಾರ್ಧನನ ಸೇವೆ ಮಾಡಬೇಕಾದ ಅಧಿಕಾರಿಗಳು ಅವರ ಕೆಲಸ ಮಾಡದೇ ಸುಮ್ಮನೆ ಕುಳಿತಾಗ ಜನರು ದೂರು ಕೊಟ್ಟು ಎಚ್ಚರಿಸುವುದುಂಟು. ಆದರೆ, ಈ ದೂರುಗಳಿಗೂ ಖ್ಯಾರೆ ಅನ್ನದ ಅಧಿಕಾರಿಗಳ ವಿರುದ್ದ ಪ್ರತಿಭಟನೆ ಮಾಡುತ್ತೇವೆ. ಆದರೆ, ಕೆಲ ಬಂಡ ಅಧಿಕಾರಿಗಳು ಪ್ರತಿಭಟನೆಗೂ ತಲೆ ಕೆಡಿಸಿ ಕೊಳ್ಳದೆ ಹೊದಾಗ ಜನರು ಚಿತ್ರ-ವಿಚಿತ್ರ ರೀತಿಯ ಪ್ರತಿಭಟನೆಗಳ ಮೊರೆಹೋಗುತ್ತಾರೆ. ಅದಕ್ಕೆ ಬೆಸ್ಟ್ ಉದಾಹರಣೆ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿ ನಡೆದಿರುವ ಘಟನೆಯೇ ಸಾಕ್ಷಿ!
ಹೌದು, ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಾಡ್ ನಗರ ಪಂಚಾಯತ್ ಕಚೇರಿಯಲ್ಲಿ ಇತ್ತೀಚೆಗೆ ಇಂತಹದ್ದೊಂದು ವಿಶಿಷ್ಟ ಹಾಗೂ ಹೈಡ್ರಾಮಾ ಪ್ರತಿಭಟನೆ ನಡೆದಿದೆ. ನಗರದಲ್ಲಿ ಬೀದಿ ನಾಯಿಗಳ ಉಪಟಳ ಮಿತಿಮೀರಿದ್ದು, ಮಕ್ಕಳು, ಮಹಿಳೆಯರು ಹಾಗೂ ವೃದ್ಧರು ರಸ್ತೆಗಿಳಿಯಲು ಭಯಪಡುವ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಸಾರ್ವಜನಿಕರು ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅಧಿಕಾರಿಗಳ ಈ ಬೇಜವಾಬ್ದಾರಿತನಕ್ಕೆ ಆಕ್ರೋಶಗೊಂಡ ಉದ್ಧವ್ ಠಾಕ್ರೆ ಬಣದ ಶಿವಸೇನೆಯ ಯುವ ಘಟಕವಾದ ಯುವಸೇನಾ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟಿಸಲು ನಿರ್ಧರಿಸಿದರು.
ಅದರಂತೆ, ಯುವಸೇನಾ ನಾಸಿಕ್ ಜಿಲ್ಲಾ ಮುಖ್ಯಸ್ಥ ವಿಕ್ರಮ್ ರಂಧವೆ ನೇತೃತ್ವದಲ್ಲಿ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು, ತಂಗಿದ್ದ ಸಣ್ಣ ಚೀಲಗಳಿಂದ ಎರಡು ಬೀದಿ ನಾಯಿ ಮರಿಗಳನ್ನು ಮುಖ್ಯಾಧಿಕಾರಿ ಧೀರಜ್ ಭಮ್ರೆ ಅವರ ಅಧಿಕೃತ ಟೇಬಲ್ ಮೇಲೆಯೇ ಬಿಟ್ಟಿದ್ದಾರೆ. ಇದೇ ವೇಳೆ ಆಡಳಿತದ ವೈಫಲ್ಯವನ್ನು ಅಣಕಿಸುವಂತೆ ಅಧಿಕಾರಿ ಹಾಗೂ ಅವರ ಟೇಬಲ್ಗೆ ನೋಟಿನ ಹಾರವನ್ನು ಹಾಕಲು ಕಾರ್ಯಕರ್ತರು ಯತ್ನಿಸಿದ್ದು, ಸದ್ಯ ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಮುಂದುವರೆದು, ಪ್ರಸ್ತುತ ಗಣೇಶೋತ್ಸವ ನಡೆಯುತ್ತಿರುವುದರಿಂದ ಭಕ್ತರಿಗೆ ನಾಯಿಗಳ ಭೀತಿ ಹೆಚ್ಚಾಗಿದೆ. ಆದ್ದರಿಂದ ತಕ್ಷಣವೇ ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ನಡೆಸಿ, ಅವುಗಳ ಸಂತತಿ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಮಹಿಳೆಯರೊಂದಿಗೆ ಬಂದು ಕಚೇರಿಯೊಳಗೆ ಮತ್ತಷ್ಟು ನಾಯಿಗಳನ್ನು ಬಿಟ್ಟು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.