ಸ್ಟ್ಯಾಂಡ್-ಅಪ್ ಕಾಮಿಡಿಯನ್'ನ್ನು ಆಲಂಗಿಸಿರುವ ರಾಹುಲ್ ಗಾಂಧಿ. 
ದೇಶ

ಪ್ರಧಾನಿ ಮೋದಿ ಕುರಿತು ಮಿಮಿಕ್ರಿ, ದಿವಂಗತ ತಾಯಿಗೆ ಅಪಮಾನ: ‘ಅಸಭ್ಯ ಸಂಸ್ಕೃತಿಗೆ ರಾಹುಲ್ ಬೆಂಬಲ’; ಕಾಂಗ್ರೆಸ್ ವಿರುದ್ಧ BJP ವಾಗ್ದಾಳಿ

ದೇಶದ ಪ್ರಧಾನಿ ಮತ್ತು ಅವರ ದಿವಂಗತ ತಾಯಿಯನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರೂ, ರಾಹುಲ್ ಗಾಂಧಿ ಅವರು ಅದನ್ನು ತಡೆಯುವ ಬದಲು ನಗುತ್ತಾ ಆನಂದಿಸುತ್ತಿರುವುದು ಅವರ 'ಸಂಸ್ಕಾರಹೀನ ಸಂಸ್ಕೃತಿ'ಯನ್ನು ತೋರಿಸುತ್ತದೆ.

ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಿಮಿಕ್ರಿ ಹಾಗೂ ಅವರ ದಿವಂಗತ ತಾಯಿಯವರನ್ನು ಅಪಮಾನ ಘಟನೆ ಈಗ ದೇಶಾದ್ಯಂತ ತೀವ್ರ ರಾಜಕೀಯ ಸಂಚಲನ ಮೂಡಿಸಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಆಡಳಿತಾರೂಢ ಬಿಜೆಪಿ, ಕಾಂಗ್ರೆಸ್ ಪಕ್ಷದ ವಿರುದ್ಧ ಹರಿಹಾಯ್ದಿದೆ.

ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಒಬ್ಬರು ಪ್ರಧಾನಿ ಮೋದಿ ಅವರ ಧ್ವನಿಯನ್ನು ನಕಲು ಮಾಡಿ ಪ್ರದರ್ಶನ ನೀಡುತ್ತಿದ್ದರು. ಈ ವೇಳೆ ಪ್ರಧಾನಿಯವರ ದಿವಂಗತ ತಾಯಿಯವರ ಕುರಿತು ಅಣಕಿಸುವಂತಹ ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ.

ವೇದಿಕೆಯ ಮುಂಭಾಗದಲ್ಲೇ ಕುಳಿತಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಈ ಪ್ರದರ್ಶನವನ್ನು ನೋಡಿ ನಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಬಿಜೆಪಿ ನಾಯಕರು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ಮುಗಿಬಿದ್ದಿದ್ದಾರೆ.

"ದೇಶದ ಪ್ರಧಾನಿ ಮತ್ತು ಅವರ ದಿವಂಗತ ತಾಯಿಯನ್ನು ಸಾರ್ವಜನಿಕವಾಗಿ ಅವಮಾನಿಸುತ್ತಿದ್ದರೂ, ರಾಹುಲ್ ಗಾಂಧಿ ಅವರು ಅದನ್ನು ತಡೆಯುವ ಬದಲು ನಗುತ್ತಾ ಆನಂದಿಸುತ್ತಿರುವುದು ಅವರ 'ಸಂಸ್ಕಾರಹೀನ ಸಂಸ್ಕೃತಿ'ಯನ್ನು (Uncouth Culture) ತೋರಿಸುತ್ತದೆ" ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ನಕ್ಕಿರುವುದನ್ನು ಉಲ್ಲೇಖಿಸಿರುವ ಬಿಜೆಪಿ ವಕ್ತಾರ ಸಿಆರ್ ಕೇಶವನ್, ರಾಹುಲ್ ಅವರು ‘ಅಸಭ್ಯ ಸಂಸ್ಕೃತಿಗೆ’ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

‘ನಿಶ್ಶಕ್ತ ವಯೋವೃದ್ಧ ಮಾತಾಜಿ’ ಅವರನ್ನು ‘ಸೆಟ್ಟಿಂಗ್’ ಎಂದು ಉಲ್ಲೇಖಿಸಿ ವ್ಯಂಗ್ಯ ಮಾಡಿದ ವ್ಯಕ್ತಿಗಳೊಂದಿಗೆ ರಾಹುಲ್ ಗಾಂಧಿ ವೇದಿಕೆ ಹಂಚಿಕೊಂಡಿದ್ದರು ಹಾಗೂ ಈ ಘಟನೆಯ ಸಂದರ್ಭದಲ್ಲಿ ನಗುತ್ತಿರುವುದು ಕಂಡುಬಂದಿದೆ.

ನಿನ್ನೆ ರಾಹುಲ್ ಗಾಂಧಿ ನಮ್ಮ ನಾರಿಶಕ್ತಿಯನ್ನು ಅವಮಾನಿಸುವ ರೀತಿಯಲ್ಲಿ, ನಿಶ್ಶಕ್ತ ವಯೋವೃದ್ಧ ಮಾತಾಜಿ ಅವರನ್ನು ‘ಸೆಟ್ಟಿಂಗ್’ ಎಂದು ವ್ಯಂಗ್ಯ ಮಾಡಿದ ಅಗ್ಗದ ಹಾಗೂ ಅಸಭ್ಯ ಟ್ರೋಲ್‌ಗಳೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಇಂತಹ ವರ್ತನೆಗೆ ರಾಹುಲ್ ಗಾಂಧಿ ಅವರ ಪ್ರತಿಕ್ರಿಯೆ ಬೆಂಬಲ ಸೂಚಿಸುವಂತಿತ್ತು.

“ಸಭ್ಯ ಹಾಗೂ ವಿವೇಚನೆಯುಳ್ಳ ಯಾವುದೇ ವ್ಯಕ್ತಿ ಇಂತಹ ಅಶ್ಲೀಲ ಮಾತುಗಳು ಮತ್ತು ಕೀಳುಮಟ್ಟದ ವರ್ತನೆಯನ್ನು ಮನರಂಜನೆ ಎಂದು ಪರಿಗಣಿಸುತ್ತಿರಲಿಲ್ಲ. ಆದರೆ, ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದವರ ವರ್ತನೆಗೆ ಜೋರಾಗಿ ನಗುತ್ತಿರುವುದು ಕಂಡುಬಂದಿದೆ. ರಾಹುಲ್ ಗಾಂಧಿ ಬೆಂಬಲಿಸುತ್ತಿರುವ ಇಂತಹ ಅಸಭ್ಯ ಸಂಸ್ಕೃತಿಯೇ ಅವರು ಹಾಗೂ ಕಾಂಗ್ರೆಸ್ ಯುವಜನರೊಂದಿಗೆ ಸಂಪರ್ಕ ಸಾಧಿಸಲು ವಿಫಲವಾಗಿರುವುದಕ್ಕೆ ಕಾರಣ” ಎಂದು ಕಿಡಿಕಾರಿದ್ದಾರೆ.

ಇದೇ ವೇಳೆ, ವೃದ್ಧ ಮಹಿಳೆಯೊಂದಿಗೆ ಪ್ರಧಾನಿ ಮೋದಿ ನಡೆದುಕೊಂಡ ರೀತಿಯನ್ನು ರಾಹುಲ್ ಗಾಂಧಿ ಅವರ ವರ್ತನೆಯೊಂದಿಗೆ ಹೋಲಿಕೆ ಮಾಡಿರುವ ಕೇಶವನ್, ಮಹಿಳೆಗೆ ಕುಳಿತುಕೊಳ್ಳಲು ಕುರ್ಚಿ ಒದಗಿಸುವಂತೆ ಮೋದಿ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದ್ದಾರೆ.

“ಪ್ರಧಾನಿ ಮೋದಿ ಅವರು ವಯೋವೃದ್ಧ ಮಹಿಳೆಗೆ ಕುಳಿತುಕೊಳ್ಳಲು ಕುರ್ಚಿ ಒದಗಿಸುವ ಮೂಲಕ ಕಾಳಜಿಯ ನಡೆ ತೋರಿಸಿದರೆ, ರಾಹುಲ್ ಗಾಂಧಿ ಅವರು ವಯೋವೃದ್ಧರನ್ನು ಈ ರೀತಿಯಲ್ಲಿ ಅವಮಾನಿಸುತ್ತಿದ್ದ ಸಂದರ್ಭದಲ್ಲಿ ಅದನ್ನು ಆನಂದಿಸುತ್ತಿರುವಂತೆ ಕಂಡುಬಂದಿದ್ದಾರೆ” ಎಂದು ಆರೋಪಿಸಿದ್ದಾರೆ.

ಇದೇ ವೇಳೆ ಇತ್ತೀಚೆಗೆ ನಡೆದ ದೆಹಲಿ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆಗಳನ್ನೂ ಉಲ್ಲೇಖಿಸಿರುವ ಕೇಶವನ್, ಯುವ ಮತದಾರರೊಂದಿಗೆ ಕಾಂಗ್ರೆಸ್ ಸಂಪರ್ಕ ಸಾಧಿಸಲು ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಈ ಘಟನೆ ಕುರಿತು ರಾಷ್ಟ್ರೀಯ ಬಿಜೆಪಿ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದು, ಇದು ಮೋದಿ ಅವರ ‘ಮೌಲ್ಯಗಳ ರಾಜಕೀಯ’ ಮತ್ತು ರಾಹುಲ್ ಗಾಂಧಿ ಅವರ ‘ತೋರಿಕೆಯ ರಾಜಕೀಯ’ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ ಎಂದು ಹೇಳಿದೆ.

ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ‘ನೈತಿಕ ದಿವಾಳಿತನ’ಕ್ಕೆ ತಲುಪಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿಗಳೊಂದಿಗಿನ ಸಂವಾದದ ಕಾರ್ಯಕ್ರಮವನ್ನು ಮೋದಿ ಅವರ ದಿವಂಗತ ತಾಯಿಯನ್ನು ವ್ಯಂಗ್ಯ ಮಾಡಲು ಮತ್ತು ಅವಮಾನಿಸಲು ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.

“ನಾಚಿಕೆಗೇಡಿನ ಮತ್ತು ಅಸಹ್ಯಕರ. ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಪಕ್ಷ ನೈತಿಕ ದಿವಾಳಿತನದ ಪರಮಾವಧಿಗೆ ಇಳಿದಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಕೂಡ ರಾಹುಲ್ ಗಾಂಧಿಯನ್ನು ಟೀಕಿಸಿದ್ದು, “ತಾಯಿ ರಾಜಕೀಯದ ವಿಷಯವಲ್ಲ” ಎಂದು ಹೇಳಿದ್ದಾರೆ. ರಾಜಕೀಯ ವಿರೋಧದ ಸಂದರ್ಭದಲ್ಲಿ ತಾಯಿಯ ಕುರಿತು ಟೀಕೆಗಳನ್ನು ಮಾಡಬಾರದು ಎಂದು ಹೇಳಿದ್ದಾರೆ.

ಶನಿವಾರ ಇಂದೋರ್‌ನಲ್ಲಿ ನಡೆದ ರಾಹುಲ್ ಗಾಂಧಿ ಅವರ ‘ಛಾತ್ರೋನ್ ಕಿ ಗೂಂಜ್’ ಕಾರ್ಯಕ್ರಮದ ವೇಳೆ ಈ ವಿವಾದಕ್ಕೆ ಕಾರಣವಾದ ಘಟನೆ ನಡೆದಿದೆ.

ಹಾಸ್ಯ ಕಲಾವಿದ ಪುಲ್ಕಿತ್ ಮಣಿ ಅವರು ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡು ಪ್ರಧಾನಿ ಮೋದಿ ಅವರ ಹಾವಭಾವ ಹಾಗೂ ಮಾತನಾಡುವ ಶೈಲಿಯನ್ನು ಅನುಕರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಮುಂಬೈ ಕೋಸ್ಟಲ್ ರೋಡ್‌ನಲ್ಲಿ ಭೀಕರ ಅಪಘಾತ; 75 ಅಡಿ ಕೆಳಗೆ ಬಿದ್ದ BMW ಕಾರು, 3 ವಿದ್ಯಾರ್ಥಿಗಳ ಸಾವು! Video

ಯಾರನ್ನೂ ಬಿಟ್ಟಿಲ್ಲ ವೈಫಲ್ಯ: "ಆ ದಿನ ನನ್ನ ವೃತ್ತಿ ಜೀವನ ಮುಗಿದೇ ಹೋಗಿತ್ತು ಎಂದುಕೊಂಡಿದ್ದೆ...": ಅಜಿತ್ ದೋವಲ್

ಕೋರಮಂಗಲ ಪೊಲೀಸ್ ಠಾಣೆ ಸಮೀಪದಲ್ಲೇ ಐಷಾರಾಮಿ ಕಾರಿನಲ್ಲಿ ವ್ಯಕ್ತಿ ಶವಪತ್ತೆ!

ಮುಂಗಾರು ಹಿಂತೆಗೆತ ಆರಂಭ; ‘Arnab’ ಚಂಡಮಾರುತ ಭೀತಿ, ಈ ರಾಜ್ಯಗಳಲ್ಲಿ ಭಾರಿ ಮಳೆ ಸಾಧ್ಯತೆ!

ಬೆಂಗಳೂರು ಎಕ್ಸ್‌ಪ್ರೆಸ್‌ಗೆ ಅಪ್ಪಳಿಸಿದ ಬೃಹತ್ ಬಂಡೆ: ಲೋಕೋ ಪೈಲಟ್‌ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ